Site icon Kannada News-suddikshana

BIG BREAKING: ಸಂಸದ ಸಿದ್ದೇಶ್ವರರ ವಿರುದ್ಧ ಸಿಡಿದೆದ್ದ ಎಸ್ಎಆರ್, ರೇಣುಕಾಚಾರ್ಯ ಟೀಂ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು ಎಂಬ ಪಟ್ಟು ಸಡಿಲಿಸದ ನಾಯಕರು..!

SUDDIKSHANA KANNADA NEWS/ DAVANAGERE/ DATE:18-03-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ವಿರುದ್ದ ಸಿಡಿದೆದ್ದಿರುವ ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್ ಹಾಗೂ ಎಂ. ಪಿ. ರೇಣುಕಾಚಾರ್ಯ ನೇತೃತ್ವದ ಬಣ ಅಭ್ಯರ್ಥಿ ಬದಲಾವಣೆ ಮಾಡಲೇಬೇಕು ಎಂಬ ಪಟ್ಟು ಹಾಕಿದ್ದಾರೆ.

ಮಹಾನಗರ ಪಾಲಿಕೆ ಸದಸ್ಯ ಅಜಯ್ ಕುಮಾರ್ ಮನೆಯಲ್ಲಿ ಸೇರಿದ್ದ ಎಸ್. ಎ. ರವೀಂದ್ರನಾಥ್, ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಶಾಸಕರಾದ ಕರುಣಾಕರ ರೆಡ್ಡಿ, ಗುರುಸಿದ್ದನಗೌಡರು, ಬಸವರಾಜ್ ನಾಯ್ಕ್, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್, ಲೋಕಿಕೆರೆ ನಾಗರಾಜ್ ಸೇರಿದಂತೆ ಇತರೆ ಮುಖಂಡರು ಈಗ ಘೋಷಣೆ ಮಾಡಿರುವ ಅಭ್ಯರ್ಥಿ ಬದಲಿಸಬೇಕು. ಇಲ್ಲದಿದ್ದರೆ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಗುಡುಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದ ಭಿನ್ನಮತೀಯರು ರೊಚ್ಚಿಗೆದ್ದಿದ್ದರು. ಕಳೆದ ಎರಡರಿಂದ ಮೂರು ದಿನಗಳಿಂದ ಸಭೆ ನಡೆಸುತ್ತಿದ್ದ ಈ ಬಣ ಇಂದು ಸಭೆ ಸೇರಿತ್ತು. ಅಗತ್ಯ ಬಿದ್ದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಕುರಿತಂತೆಯೂ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರುತ್ತೇವೆ ಎಂಬ ಎಚ್ಚರಿಕೆ ನೀಡಿತ್ತು.

ಆದ್ರೆ, ಈಗ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದು, ಗಾಯತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿರುವುದು ನಮಗೆ ಯಾರಿಗೂ ಇಷ್ಟ ಇಲ್ಲ. ಸಿದ್ದೇಶ್ವರ ಅವರ ಮನೆತನಕ್ಕೆ ಎಷ್ಟು ಬಾರಿ ಟಿಕೆಟ್ ನೀಡಲಾಗುತ್ತೆ?
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಒತ್ತಾಸೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದ್ರೆ, ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡುವ ಮೂಲಕ ಮತ್ತೆ ಜಿಎಂ ಮನೆತನಕ್ಕೆ ಮಣೆ ಹಾಕಲಾಗಿದೆ. ಹಾಗಾಗಿ ಅಭ್ಯರ್ಥಿ ಬದಲಾವಣೆ ಆಗಲೇಬೇಕು. ಇಲ್ಲದಿದ್ದರೆ ಮುಂದಾಗುವ ಪರಿಣಾಮಗಳಿಗೆ ಹೊಣೆ ಹೊರಬೇಕಾಗುತ್ತದೆ ಎಂಬ ವಾರ್ನಿಂಗ್ ಅನ್ನು ನೀಡಲಾಗಿದೆ.

ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿನ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ಮನೆಯಲ್ಲಿ ಸಭೆ ಸೇರಲಾಗುತ್ತದೆ ಎಂಬ ಮಾಹಿತಿ ನೀಡಲಾಗಿತ್ತು. ಆದ್ರೆ, ಕೊನೆ ಗಳಿಗೆಯಲ್ಲಿ ಸ್ಥಳ ಬದಲಾವಣೆ ಮಾಡಿ ಅಜಯ್ ಕುಮಾರ್
ಮನೆಯಲ್ಲಿ ಸೇರಲಾಯಿತು. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಗುರುಸಿದ್ದನಗೌಡ್ರು, ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಜಿತರಾದ ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಬಸವರಾಜ ನಾಯ್ಕ,
ಮಾಡಾಳ್ ಮಲ್ಲಿಕಾರ್ಜುನ್, ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್, ಕರುಣಾಕರೆಡ್ಡಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಎಸ್. ಎ. ರವೀಂದ್ರನಾಥ್ ಉಪಸ್ಥಿತಿಯಲ್ಲಿ ಹಲವು ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಲಾಯಿತು.

ಸಭೆ ಬಳಿಕ ಮಾತನಾಡಿದ ರೇಣುಕಾಚಾರ್ಯ ಅವರು ಸಂಸದ ಸಿದ್ದೇಶ್ವರ ವಿರುದ್ಧ ಮತ್ತೆ ಟೀಕಾಪ್ರಹಾರ ನಡೆಸಿದರು. ಈಗ ಘೋಷಿಸಿರುವ ಅಭ್ಯರ್ಥಿಯನ್ನು ಬದಲಾವಣೆ ಮಾಡಲೇಬೇಕು ಎಂದು ಪುನರುಚ್ಚರಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ ಅವರು ಸಂಘಟನೆ ನೀಡಿರುವ ಕೊಡುಗೆ ಶೂನ್ಯ, ಅಭಿವೃದ್ಧಿಯೂ ಶೂನ್ಯ. ಎಲ್ಲವನ್ನೂ ಸ್ವಂತಕ್ಕೋಸ್ಕರ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಅವರೇ ಕಾರಣ. ಯಾವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿಲ್ಲ. ಎಲ್ಲಿಯೂ ಬಿರುಸಿನ ಪ್ರಚಾರ ಮಾಡಿಲ್ಲ. ಕೇವಲ ನಾಲ್ಕರಿಂದ ಐದು ತಾಸು ಅಷ್ಟೇ ಪ್ರಚಾರ ನಡೆಸಿದ್ದಾರೆ. ನಾವೆಲ್ಲರೂ ಸೋಲಲು ಸಿದ್ದೇಶ್ವರ ಅವರೇ ಕಾರಣ ಎಂದು ಸಭೆಯಲ್ಲಿ ಮಾಜಿ ಶಾಸಕರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಅಳಲಾಗಿತ್ತು.

ಸಿದ್ದೇಶ್ವರರ ಕುಟುಂಬ ಯಾವಾಗ ಬಿಜೆಪಿ ಬಾವುಟ ಕಟ್ಟಿದೆ, ಯಾವಾಗ ಧ್ವಜ ಕಟ್ಟಿದೆ. ಬಿಜೆಪಿ ಪಕ್ಷಕ್ಕೆ ನೀಡಿರುವ ಕೊಡುಗೆ ಶೂನ್ಯ. ಚಿತ್ರದುರ್ಗ – ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದು ಎಸ್. ಎ. ರವೀಂದ್ರನಾಥ್ ನೇತೃತ್ವದ ತಂಡ. ನಾವೆಲ್ಲರೂ
ಸೇರಿ ಪಕ್ಷ ಬಲಿಷ್ಠಗೊಳಿಸಿದ್ದೇವೆ. ಸಿದ್ದೇಶ್ವರ ಏನೂ ಬಿಜೆಪಿ ಕಟ್ಟಿ ಬೆಳೆಸಿದ್ದೀರಾ, ಹೋರಾಟ ಮಾಡಿದ್ದಾರಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.

Exit mobile version