ದಾವಣಗೆರೆ: ದಾವಣಗೆರೆ ವಿಧಾನಸಭಾ ಉಪಚುನಾವಣೆಗೆ ಸಮರ್ಥ ಅಭ್ಯರ್ಥಿ ಬೇಕಾ? ಸಮರ್ಥವಾದವರೇ ಬೇಕಾ ಎಂದು ಹೇಳುವ ಮೂಲಕ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಶಾಮನೂರು ಪ್ರಶ್ನಿಸಿದ್ದಾರೆ.
ಒಮ್ಮತದ ನಿರ್ಧಾರ:
ಇದೇ ಮೊದಲ ಬಾರಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆಂದು ಈಗಾಗಲೇ ಅಪ್ಪಾಜಿಯವರು ಹೇಳಿದ್ದಾರೆ. ಅದರಂತೆ ಕುಳಿತು ಚರ್ಚಿಸಿ ಒಮ್ಮತ ನಿರ್ಧಾರಕ್ಕೆ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.
ಕ್ಷೇತ್ರದ ನಂಟು:
ನಾನು ಈ ಹಿಂದೆ ಜಾಸ್ತಿ ದೋಸ್ತಿಗಳ ಜೊತೆ ಹೋಗುತ್ತಿದ್ದೆ. ಆದರೆ ಈಗ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದೇನೆ. ನಮಗೆ 27 ವರ್ಷಗಳಿಂದಲೂ ಈ ಭಾಗದ ನಾಯಕರು, ಹಿರಿಯರು ಸೇರಿದಂತೆ ಎಲ್ಲರೂ ಪರಿಚಯ. ಎಲ್ಲರೂ ನಮಗೆ ಮಾಮ, ಮಾಮೂನೇ ಎಂದು ಹೇಳಿದರು.
ಪಕ್ಷ ಮತ್ತು ನಾಯಕತ್ವಕ್ಕೆ ಗೌರವ:
ನಾನು ಕಾಂಗ್ರೆಸ್ ಕಾರ್ಯಕರ್ತ. ಯುವ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಯಾರಿಗೆ ಟಿಕೆಟ್ ನೀಡಬೇಕೆಂಬ ಕುರಿತಂತೆ ಮುಸ್ಲಿಂ ಮುಖಂಡರು ಸಭೆ ಮಾಡುತ್ತಾರೆ. ಅವರೇ ಹೇಳುತ್ತಾರೆ. ಅವರ ನಿರ್ಧಾರದ ಮುಂದ ನಮ್ಮದು ಏನಿದೆ ಎಂದು ಕೇಳಿದರು.
ಟಿಕೆಟ್ ಮತ್ತು ಪ್ರೀತಿ:
ಎಲ್ಲರದ್ದೂ ಒಂದೊಂದು ಬೇಡಿಕೆಗಳು ಇರುತ್ತವೆ. ಎಲ್ಲರೂ ಕುಳಿತು ಮಾತನಾಡಬೇಕೆಂದು ಅಪ್ಪಾಜಿಯವರು ಹೇಳಿದ್ದಾರೆ. ಚಮನ್ ಸಾಬ್ ಅವರೂ ಸೇರಿದಂತೆ ಹಿರಿಯರೂ ಅದೇ ಹೇಳಿದ್ದಾರೆ. ಏನಾಗುತ್ತದೆ ಎಂದು ಮುಂದೆ ನೋಡೋಣ. ಏನು ತೀರ್ಮಾನ ಆಗುತ್ತದೆಯೋ ಅದಕ್ಕೆ ಬದ್ಧನಿದ್ದೇನೆ ಎಂದು ತಿಳಿಸಿದರು.
ಟಿಕೆಟ್ ನೀಡಿಕೆ ವಿಚಾರ ಸಂಬಂಧ ಪಕ್ಷ ತೀರ್ಮಾನಿಸಬೇಕು. ಎಲ್ಲರೂ ಒಮ್ಮತಕ್ಕೆ ಬರಬೇಕು. ನನಗಿಂತ ಪಕ್ಷ ಕಟ್ಟಿದವರನ್ನೇ ನೀವು ಕೇಳಬೇಕು ನೀವು. ನನಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿರುವವರು ನನ್ನನ್ನು ಜಾಸ್ತಿ ಪ್ರೀತಿಸುತ್ತಾರೆ. ಟಿಕೆಟ್ ಗೂ ಪ್ರೀತಿಗೂ ಸಂಬಂಧ ಇಲ್ಲ. ಮನೆಯಲ್ಲಿ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.
ಮಾಧ್ಯಮದವರು ನಮ್ಮನ್ನ ಬಿಡುವ ಆಗಿಲ್ಲ. ನಾವು ನಮ್ಮ ಕೆಲಸ ಮಾಡಿಕೊಂಡು ಓಡಾಡಿಕೊಂಡು ಇದ್ದೇವೆ. ಆದರೆ ಮಾಧ್ಯಮದವರೇ ಬಿಡುವ ಹಾಗೆ ಕಾಣಿಸುತ್ತಿಲ್ಲ. ತಾತ ಶಾಮನೂರು ಶಿವಶಂಕರಪ್ಪರು ನಿಧನ ಹೊಂದಿದ ಬಳಿಕ ವಾರನೂ ಕಾಯಲಿಲ್ಲ. ನನ್ನ ಹೆಸರು ಜೋಡಿಸಲು ಶುರು ಮಾಡಿದ್ದೀರಿ. ನೀವು ಏನು ತೀರ್ಮಾನ ಮಾಡುತ್ತೀರಾ ನಿಮ್ಮ ಜೊತೆಗಿರುತ್ತೇವೆ ಎಂದು ಮಾಧ್ಯಮದವರಿಗೆ ಹೇಳಿದರು.
ಮುಂದಿನ ನಡೆ:
ಸದ್ಯಕ್ಕೆ ಚೆಂಡು ಕಾಂಗ್ರೆಸ್ ಹೈಕಮಾಂಡ್ ಮತ್ತು ಸ್ಥಳೀಯ ಹಿರಿಯ ನಾಯಕರ ಅಂಗಳದಲ್ಲಿದೆ. ಶಾಮನೂರು ಕುಟುಂಬದ ಕುಡಿಯಾಗಿರುವ ಸಮರ್ಥ ಅವರಿಗೆ ಟಿಕೆಟ್ ಸಿಗುತ್ತದೆಯೇ ಅಥವಾ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.





Leave a comment