Site icon Kannada News-suddikshana

ತುರ್ತು ಪರಿಸ್ಥಿತಿಯಲ್ಲಿ ಸುರಕ್ಷತಾ ಕ್ರಮ: ರೈಲು ಗಾಡಿ ಅಪಘಾತದ ಕಿರುನಾಟಕ ಪ್ರದರ್ಶನ

SUDDIKSHANA KANNADA NEWS| DAVANAGERE| DATE:19-05-2023

ದಾವಣಗೆರೆ (DAVANAGERE): ರೈಲುಗಾಡಿ ಅಪಘಾತದ ಸಂದರ್ಭದ ತುರ್ತು ಪರಿಸ್ಥಿತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳವ ಕುರಿತು ಕಿರುನಾಟಕ ಪ್ರದರ್ಶನವನ್ನು ಹರಿಹರ ರೈಲ್ವೆ ನಿಲ್ದಾಣದಲ್ಲಿ ನಾಟಕ ಪ್ರದರ್ಶನ ನಡೆಯಿತು.ಅಭ್ಯಾಸ ಮಾಡಲು ರೈಲುಗಾಡಿ ಅಪಘಾತದ ಸಂಕಿರುನಾಟಕ ಪ್ರದರ್ಶಿಸಲಾಯಿತು.

ಮೈಸೂರು ವಿಭಾಗ ರೈಲ್ವೆ ವತಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಸಹಯೋಗದೊಂದಿಗೆ ಹರಿಹರ ರೈಲ್ವೆ ನಿಲ್ದಾಣದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಆಪತ್ಕಾಲದಲ್ಲಿ ಸಕ್ರಿಯಗೊಳಿಸಲು ಹಲವಾರು ಚಟುವಟಿಕೆಗಳನ್ನು ಒಳಗೊಂಡಿರುವ ವಿಪತ್ತು ನಿರ್ವಹಣಾ ಯೋಜನೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ಪೂರ್ಣ ಪ್ರಮಾಣದ ಅಣಕು ಕವಾಯತು ಆಯೋಜಿಸಲಾಗಿತ್ತು.

ವಿಪತ್ತು ನಿರ್ವಹಣೆಯೆಂದರೆ, ಒಂದು ಅರ್ಥದಲ್ಲಿ, ಸಾಧ್ಯವಾದಷ್ಟು ವೇಗವಾಗಿ ಸೂಕ್ತವಾದ ಸಹಾಯವನ್ನು ನೀಡುವ ಮೂಲಕ ಅಮೂಲ್ಯ ಮಾನವ ಜೀವ ಮತ್ತು ಸಂಭಾವ್ಯ ಆಸ್ತಿ ನಷ್ಟಗಳನ್ನು ಕಡಿಮೆ ಮಾಡುವ ಅಥವಾ ಸಂಪೂರ್ಣವಾಗಿ ತಪ್ಪಿಸುವ ಗುರಿಯನ್ನು ಹೊಂದಿದೆ.

ಅಣಕು ಕವಾಯತ್ತಿನ ಬಗ್ಗೆ:

ಅರಸಿಕೆರೆಯಿಂದ ಹಾವೇರಿಗೆ ಹೋಗುತ್ತಿದ್ದ ವಿಶೇಷ ರೈಲಿನ ಎಸ್ ಡಬ್ಲ್ಯು 01435 ಮತ್ತು ಎಸ್ ಡಬ್ಲ್ಯು 14242 – ಎರಡು ಸಾಮಾನ್ಯ ದರ್ಜೆಯ ಪ್ಯಾಸೆಂಜರ್ ಬೋಗಿಗಳು ಹರಿಹರ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ 337/5-8 ನಲ್ಲಿ ಇಂದು ಬೆಳಿಗ್ಗೆ 10ಗಂಟೆಯ ಸುಮಾರಿಗೆ ಹಳಿತಪ್ಪಿ ಮಗುಚಿ ಬಿದ್ದಿರುವ ಸನ್ನಿವೇಶ ಸೃಷ್ಟಿ ಮಾಡಲಾಗಿತ್ತು. ಘಟನೆಯ ಸಂದೇಶವನ್ನು ಸ್ವೀಕರಿಸಿದ ತಕ್ಷಣವೇ ರೈಲ್ವೆ ಅಧಿಕಾರಿಗಳು ನಿಗದಿತ ಮಾರ್ಗಸೂಚಿಗಳ ಪ್ರಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅಪಘಾತ ಸ್ಥಳಕ್ಕೆ ಧಾವಿಸಿದರು. ಎನ್‍ಡಿಆರ್‍ಎಫ್ ತಂಡವು ಅಸಿಸ್ಟೆಂಟ್ ಕಮಾಂಡೆಂಟ್ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ 23 ಸಿಬ್ಬಂದಿಯನ್ನು ಒಳಗೊಂಡಿತ್ತು. ಎಸ್.ಎನ್. ಕಿರಣ್ ಕುಮಾರ್ ನೇತೃತ್ವದ ಎಸ್‍ಡಿಆರ್‍ಎಫ್ ತಂಡ ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ಅವರ ನೇತೃತ್ವದ ಜಿಲ್ಲಾ ಅಗ್ನಿಶಾಮಕ ದಳದ ತಂಡಗಳು ಅವರಿಗೆ ವಿಷಯ ತಿಳಿಸಿದ 20 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದವು. ರೈಲ್ವೆ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಕ ಸಿಬ್ಬಂದಿ ಸ್ಥಳದಲ್ಲಿಯೆ ಪ್ರಥಮ ಚಿಕಿತ್ಸೆ ನೀಡಿ ಎರಡು ಬೋಗಿಗಳಲ್ಲಿ ಸಿಲುಕಿಗೊಂಡಿದ್ದ ಸುಮಾರು 22 ಪ್ರಯಾಣಿಕರನ್ನು ಆಂಬ್ಯುಲೆನ್ಸ್ ನೊಳಗೆ ಕರೆದುಕೊಳ್ಳಲು ಸಹಕರಿಸಿದರು. ಅಣಕು ಕವಾಯತ್ತಿನಲ್ಲಿ 2 ಬೋಗಿಗಳಲ್ಲಿ 22 ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಇಬ್ಬರ ಸಾವು ಮತ್ತು 8-10 ಜನರಿಗೆ ಗಂಭೀರ ಗಾಯಗಳ ಬಗ್ಗೆ ವರದಿ ಬಂದಿರುವುದಾಗಿ ತಿಳಿಸಿದರು.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ಮತ್ತು ಇತರ ಹಿರಿಯ ಅಧಿಕಾರಿಗಳು ಮೈಸೂರಿನ ಕಂಟ್ರೋಲ್ ಆಫೀಸ್‍ನಿಂದ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಸುಮಾರು 110 ನಿಮಿಷಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದು, 11.50ಕ್ಕೆ ಪೂರ್ಣಗೊಂಡಿತು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಇ.ವಿಜಯರವರು ಮತ್ತು ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ನೀರಜ್ ಬಫ್ನಾ ಅವರೊಂದಿಗೆ ಆ ಭಾಗದಲ್ಲಿ ಲಭ್ಯವಿದ್ದ ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದರು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪ ಅಗರ್ವಾಲ್ ರವರು ಇಂತಹ ನಿಯತಕಾಲಿಕ ಕಸರತ್ತಿನ ಮಹತ್ವವನ್ನು ವಿವರಿಸಿದರು.

ವಿವಿಧ ನಾಗರಿಕ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸಾಧಿಸಲು ದೃಢವಾದ ಕಾರ್ಯವಿಧಾನವು ಅದರ ಬಹು ಮುಖ್ಯ ಭಾಗವಾಗಿದೆ. ಈ ರೀತಿಯ ಅಣಕು ಕವಾಯತುಗಳು ಯಾವಾಗಲೂ ಯಾವುದೇ ಘಟನೆಯ ವಿರುದ್ಧದ ಸನ್ನದ್ಧತೆಯನ್ನು ಪರೀಕ್ಷಿಸಲು ಸರಿಯಾದ ಸಾಧನವೆಂದು ಸಾಬೀತುಪಡಿಸಿವೆ ಮತ್ತು ಸನ್ನದ್ಧತೆಯನ್ನು ಸುಧಾರಿಸಲು ಕಲಿಕೆಯ ಪ್ರಕ್ರಿಯೆ ಸಹ ಆಗಿದೆ ಎಂದು ಅವರು ತಿಳಿಸಿದರು.

ರಕ್ಷಣಾ ತಂಡಗಳಲ್ಲದೆ ಆಂಬ್ಯುಲೆನ್ಸ್ ಗಳೊಂದಿಗೆ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು, ರೈಲ್ವೆ ರಕ್ಷಣಾ ಪಡೆ, ಅಗ್ನಿಶಾಮಕ ದಳ, ನಾಗರಿಕ ಆಡಳಿತದ ಪ್ರತಿನಿಧಿಗಳು, ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ಸಿವಿಲ್ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Exit mobile version