ಬೆಂಗಳೂರು: ಕೇಸರಿ ಶಾಲು ಹಾಕಿಕೊಂಡು ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರ ಮಕ್ಕಳು ಗೋಮೂತ್ರ ಕುಡಿಯುತ್ತಾರೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರ ಮಕ್ಕಳು ಯಾವ ಗೋಶಾಲೆಗೆ ಹೋಗುತ್ತಾರೆ? ಅವರು ಯಾವಾಗ ಧರ್ಮದ ರಕ್ಷಣೆಗಾಗಿ ತ್ರಿಶೂಲ, ಕತ್ತಿ ಹಿಡಿದು ಬೀದಿಗೆ ಇಳಿಯುತ್ತಾರೆಯೇ? ಅವರೆಲ್ಲರೂ ವಿದೇಶದಲ್ಲಿ ಓದುತ್ತಿದ್ದಾರೆ, ಬಿಜಿನೆಸ್ ನಡೆಸುತ್ತಿದ್ದಾರೆ, ಸ್ಟಾರ್ಟ್ಅಪ್ಗಳನ್ನು ಮಾಡಿದ್ದಾರೆ, ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಧರ್ಮ ರಕ್ಷಣೆ, ಗೋ ರಕ್ಷಣೆ ಎಲ್ಲವನ್ನೂ ಬಡವರ ಮಕ್ಕಳಿಗೆ ಬಿಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ವರ್ಗ ಸಂಘರ್ಷ ಮತ್ತು ಶಿಕ್ಷಣದ ಅಂತರ
ಬಿಜೆಪಿ ನಾಯಕರ ಮಕ್ಕಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರ ಮಕ್ಕಳು, ಖರ್ಗೆ ಅವರ ಮಕ್ಕಳು, ಆರ್. ಅಶೋಕ್ ಅವರ ಮಕ್ಕಳು ಅಥವಾ ಪ್ರಿಯಾಂಕ್ ಖರ್ಗೆ ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೀವೇ ವಿಚಾರಿಸಿ ನೋಡಿ. ನಮ್ಮ ನುಡಿ ಮತ್ತು ನಡೆಯನ್ನು ಹೋಲಿಕೆ ಮಾಡಿ. ನನ್ನ ಮಕ್ಕಳಿಗೆ ಬಯಸಿದ್ದನ್ನು ನಿಮ್ಮ ಮಕ್ಕಳಿಗೂ ಬಯಸುತ್ತೇನೆ. ಆದರೆ ಬಿಜೆಪಿಯಲ್ಲಿ ಹಾಗಲ್ಲ, ಬೇರೆಯವರ ಮಕ್ಕಳು ಬೀದಿಯಲ್ಲಿ ಇರಬೇಕು. ಇವರ ಮಕ್ಕಳು ವಿದೇಶದಲ್ಲಿ ಪ್ರವಾಸ ಮಾಡಬೇಕು, ಇದೇ ವ್ಯತ್ಯಾಸ ಎಂದು ಆರೋಪಿಸಿದ್ದಾರೆ.
ಬದಲಾದ ಹಬ್ಬಗಳ ಸ್ವರೂಪ
ಈ ಹಿಂದೆ ಗಣೇಶ ಹಬ್ಬ, ರಾಮನವಮಿ ಮಾಡುವಾಗ ಹಿಂದೂ-ಮುಸ್ಲಿಂ ಸ್ನೇಹಿತರು ಒಟ್ಟಿಗೆ ಬೆರೆತು ಪ್ರಸಾದ ಹಂಚುತ್ತಿದ್ದೆವು. ಈಗ ಗಣೇಶ ಹಬ್ಬ, ರಂಜಾನ್, ರಾಮನವಮಿ ಹಬ್ಬಗಳನ್ನು ಎಷ್ಟು ಬಿಗಿ ಭದ್ರತೆಯಲ್ಲಿ ಆಚರಿಸಲಾಗುತ್ತದೆ. ಮುಂಚೆ ಹೀಗೆ ಇರಲಿಲ್ಲ. ಗಣೇಶ ಹಬ್ಬದಂದು ಪ್ರಚೋದನಾಕಾರಿಯಾಗಿ ಡಿಜೆ ಹಾಕುತ್ತಾರೆ. ಮೆರವಣಿಗೆಯನ್ನು ದರ್ಗಾ ಮುಂದೆಯೇ ಸಾಗಬೇಕು ಎನ್ನುತ್ತಾರೆ. ಇದು ಒಂದೇ ಧರ್ಮಕ್ಕೆ ಸೀಮಿತವಲ್ಲ. ರಂಜಾನ್ ಸಮಯದಲ್ಲಿಯೂ ನಡೆಯುತ್ತದೆ. ದೇವಸ್ಥಾನದ ಮುಂದೆಯೇ ಹೋಗುವುದು, ಡಿಜೆ ಹಾಕುವುದು, ತಲವಾರ್ ಪ್ರದರ್ಶಿಸುವುದು ನಡೆಯುತ್ತದೆ. ಇವೆಲ್ಲ ಮುಂಚೆ ಇರಲಿಲ್ಲ, ಇತ್ತೀಚೆಗೆ ಶುರುವಾಗಿದ್ದು. ಹೇಗೆ ಆಯ್ತು, ಯಾಕೆ ಆಯ್ತು ಎಂಬುದನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಆದ್ಯತೆಗಳ ವಿರೋಧಾಭಾಸ
ಧರ್ಮವು ಮನುಷ್ಯನಿಗಾಗಿ ಇದೆಯೇ ಹೊರತು, ಮನುಷ್ಯ ಧರ್ಮಕ್ಕಾಗಿ ಇರುವುದಲ್ಲ ಎನ್ನುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು. ಆದರೆ ನಾವು ಇದನ್ನು ಉಲ್ಟಾ ಮಾಡುತ್ತಿದ್ದೇವೆ. ನಾವು ಪ್ರಬುದ್ಧರಾಗಿಲ್ಲ ಎಂದರೆ ಸಮಾಜದಲ್ಲಿ ಸಮೃದ್ಧಿ ಕಾಣಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿ ಎಐ ಬಗ್ಗೆ ಮಾತನಾಡುತ್ತಿದ್ದರೆ, ನಾವು ಔರಂಗಜೇಬನ ಸಮಾಧಿ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮುದಾಯ ಶೌಚಾಲಯಗಳನ್ನು ನಿರ್ದಿಷ್ಟ ಸಮಾಜಕ್ಕೆ ಪ್ರತ್ಯೇಕವಾಗಿ ನೀಡುವಂತೆ ಕೇಳುತ್ತಾರೆ. ಹೆಣ್ಣುಮಕ್ಕಳು ಶೌಚಕ್ಕಾಗಿ ಬಯಲಿಗೆ ಹೋಗುವುದರ ಬಗ್ಗೆ ಚಿಂತೆ ಇಲ್ಲ, ಆದರೆ ಸಮಾಜದ ಬಗ್ಗೆ ಚಿಂತಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರೋ ತಮ್ಮ ಧರ್ಮದ ಬಗ್ಗೆ ಕಾಮೆಂಟ್ ಮಾಡಿದ ಎಂದು ರಾತ್ರೋ ರಾತ್ರಿ ಪೊಲೀಸ್ ಠಾಣೆ ಮುಂದೆ ಜನ ಸೇರಿಕೊಳ್ಳುತ್ತಾರೆ. ಇವರಿಗೆ ತಮ್ಮ ಸಮುದಾಯ, ಧರ್ಮದ ಬಗ್ಗೆ ಇರುವ ಕಾಳಜಿ ಮಹಿಳೆಯರ ಬಗ್ಗೆ ಇಲ್ಲ ಎನ್ನುವುದು ಬೇಸರದ ಸಂಗತಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
- AI vs Aurangzeb
- Ambedkar Quotes
- BJP Leaders Children
- Gomutra
- Karnataka Politics
- Priyank Kharge
- Religion Protection
- Social Harmony
- Trishul vs Education
- Youth Empowerment.
- ಅಂಬೇಡ್ಕರ್ ತತ್ವ
- ಎಐ ಮತ್ತು ಔರಂಗಜೇಬ್
- ಗೋಮೂತ್ರ
- ತ್ರಿಶೂಲ
- ಧರ್ಮ ರಕ್ಷಣೆ
- ಪ್ರಿಯಾಂಕ್ ಖರ್ಗೆ
- ಬಿಜೆಪಿ ನಾಯಕರ ಮಕ್ಕಳು
- ರಾಜಕೀಯ ವಿಮರ್ಶೆ
- ಶಿಕ್ಷಣ ಮತ್ತು ಉದ್ಯೋಗ
- ಹಿಂದೂ-ಮುಸ್ಲಿಂ ಸಾಮರಸ್ಯ





Leave a comment