ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ವಾರ್ಷಿಕ ಪ್ರೋತ್ಸಾಹಧನವನ್ನು ಪಡೆಯುತ್ತಿರುವ ರೈತರಿಗೆ ಕೃಷಿ ಇಲಾಖೆಯು ಮಹತ್ವದ ಸೂಚನೆಯನ್ನು ನೀಡಿದೆ. ಇನ್ನು ಮುಂದೆ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ರೈತರು ಕಡ್ಡಾಯವಾಗಿ ‘ಕೇಂದ್ರ ನೋಂದಾಯಿತ ರೈತರ ಸಂಖ್ಯೆ’ (Central Farmer ID) ಸೃಜಿಸಿಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಸೋಮಸುಂದರ್ ಅವರು ತಿಳಿಸಿದ್ದಾರೆ.
ಏನಿದು ಹೊಸ ನಿಯಮ? ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ, ಫ್ರೂಟ್ಸ್ (FRUITS) ಮತ್ತು ಭೂಮಿ (Bhoomi) ದತ್ತಾಂಶಗಳ ಸಮರ್ಪಕ ಜೋಡಣೆ ಅತಿ ಮುಖ್ಯವಾಗಿದೆ. ಇದಕ್ಕಾಗಿ ರೈತರು ತಮ್ಮ ಎಫ್ಐಡಿ (FID) ಯಲ್ಲಿ ಈ ಕೆಳಗಿನ ಕೆಲಸಗಳನ್ನು ಪೂರ್ಣಗೊಳಿಸಬೇಕು:
ಇ-ಕೆವೈಸಿ (e-KYC):
ಆಧಾರ್ ಆಧಾರಿತ ಇ-ಕೆವೈಸಿ ಮಾಡಿಸುವುದು ಕಡ್ಡಾಯ.
ಭೂಮಿ ವಿವರ ಸೇರ್ಪಡೆ:
ರೈತರ ಹೆಸರಿನಲ್ಲಿರುವ ಎಲ್ಲಾ ಭೂಹಿಡುವಳಿಗಳನ್ನು ಎಫ್ಐಡಿಯಲ್ಲಿ ನಮೂದಿಸಬೇಕು.
ಮೊಬೈಲ್ ಅಪ್ಡೇಟ್:
ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು.
ಸಹಮತಿ ಪತ್ರ:
ಸರ್ಕಾರದ ಯೋಜನೆಗಳಿಗೆ ದತ್ತಾಂಶ ಬಳಸಲು ವಿದ್ಯುನ್ಮಾನ ಮೂಲಕ ಒಪ್ಪಿಗೆ ನೀಡಬೇಕು.
ಯಾವ ಯೋಜನೆಗಳಿಗೆ ಇದು ಅಗತ್ಯ?
ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಿಗುವ ‘ಕೇಂದ್ರ ನೋಂದಾಯಿತ ರೈತರ ಸಂಖ್ಯೆ’ಯನ್ನು ಕೇವಲ ಪಿಎಂ-ಕಿಸಾನ್ಗೆ ಮಾತ್ರವಲ್ಲದೆ, ಬರ ಪರಿಹಾರ, ಬೆಳೆ ವಿಮೆ (Crop Insurance) ಮತ್ತು ಇತರೆ ಕೃಷಿ ಸಂಬಂಧಿತ ಸಬ್ಸಿಡಿಗಳನ್ನು ಪಡೆಯಲು ಕಡ್ಡಾಯವಾಗಿ ಬಳಸಲಾಗುತ್ತದೆ.
ನೋಂದಣಿ ಎಲ್ಲಿ ಮಾಡಿಸಬೇಕು?
ರೈತರು ತಮ್ಮ ಆಧಾರ್ ಕಾರ್ಡ್, ಲಿಂಕ್ ಆಗಿರುವ ಮೊಬೈಲ್, ಬ್ಯಾಂಕ್ ಪಾಸ್ಬುಕ್ ಮತ್ತು ಎಲ್ಲಾ ಪಹಣಿ (RTC) ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ವಿಳಂಬ ಮಾಡಿದಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.





Leave a comment