ದಾವಣಗೆರೆ: ರೈತರು ಕಷ್ಟಪಟ್ಟು ಬೆಳೆದ ಮೆಕ್ಕೆಜೋಳದ ರಾಶಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಮನಕಲುಕುವ ಘಟನೆ ಗುರುವಾರ ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮದಲ್ಲಿ ನಡೆದಿದೆ.
ಆರ್ಥಿಕ ಹೊಡೆತ:
ಗ್ರಾಮದ ರೈತರಾದ ಬಾವಿ ಬಸಪ್ಪ, ವೀರಬಸಪ್ಪ ಮತ್ತು ಸಿದ್ದೇಶ್ ಎಂಬುವವರಿಗೆ ಸೇರಿದ ಸುಮಾರು ಎಂಟು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ರಾಶಿಗೆ ಮಧ್ಯಾಹ್ನದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಗಾಳಿ ವೇಗವಾಗಿ ಬೀಸುತ್ತಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ, ಇಡೀ ಫಸಲನ್ನು ಆವರಿಸಿಕೊಂಡಿದೆ.
ಲಕ್ಷಾಂತರ ರೂಪಾಯಿ ನಷ್ಟ
ಸ್ಥಳೀಯ ರೈತರು ಮತ್ತು ಸಾರ್ವಜನಿಕರು ತಕ್ಷಣ ಧಾವಿಸಿ ನೀರು ಎರಚಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ವಿಷಯ ತಿಳಿದ ಹೊನ್ನಾಳಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರಾದರೂ, ಅಷ್ಟರಲ್ಲಾಗಲೇ ಶೇಕಡಾ 45 ರಷ್ಟು ಫಸಲು ಸುಟ್ಟು ಭಸ್ಮವಾಗಿತ್ತು.
ಮಾರುಕಟ್ಟೆಯಲ್ಲಿ ಬೆಲೆ ಕುಸಿತವಿದ್ದ ಕಾರಣ, ಉತ್ತಮ ಬೆಲೆ ಸಿಗಲಿ ಎಂಬ ನಿರೀಕ್ಷೆಯೊಂದಿಗೆ ಕಾಯ್ದಿರಿಸಿದ್ದ ಮೆಕ್ಕೆಜೋಳ ಈಗ ಬೂದಿಯಾಗಿರುವುದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದೆ. ಈ ಅವಘಡದಿಂದ ರೈತ ಕುಟುಂಬಗಳು ತೀವ್ರ ಆಘಾತಕ್ಕೊಳಗಾಗಿವೆ.





Leave a comment