Site icon Kannada News-suddikshana

ಒಂದೇ ಕುಟುಂಬದ ನಾಲ್ವರ ಹತ್ಯೆ… ಚಾಕುವಿನಿಂದ ಇರಿದು ಕೊಂದ ಹಂತಕ…?

SUDDIKSHANA KANNADA NEWS/ DAVANAGERE/ DATE:11-11-2023

ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಉಡುಪಿ ತಾಲೂಕಿನ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ತಡರಾತ್ರಿ 2 ಗಂಟೆ ಇಲ್ಲವೇ ಮೂರು ಗಂಟೆ ಹೊತ್ತಿನಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ.

ತಾಯಿ ಹಸೀನಾ, ಮಕ್ಕಳಾದ ಅಫ್ನಾನ್ (23), ಅಯ್ನಾಜ್ (21), ಆಸೀಂ (12) ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಮನೆಯಲ್ಲಿ ತಂಗಿದ್ದ ನಾಲ್ವರನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಸುತ್ತಮುತ್ತಲಿನ ಸಿಸಿಟಿವಿ, ಈ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.

ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿ ನಗರದಲ್ಲಿ ವಾಸವಿದ್ದ ಹಸೀನಾ ಮತ್ತು ಆಕೆಯ ಮೂವರು ಮಕ್ಕಳನ್ನು ಒಬ್ಬನೇ ಕೊಂದಿರುವುದಾಗಿ ಮಾಹಿತಿ ಸಿಕ್ಕಿದ್ದು, ಈತ ಪರಿಚಯಸ್ಥನೇ ಆಗಿರಬೇಕು ಎಂಬ ಅನುಮಾನ ಕಾಡುತ್ತಿದೆ.

ತಾಯಿ, ಮೂವರು ಮಕ್ಕಳನ್ನು ಹತ್ಯೆ ಮಾಡಿರುವ ರೀತಿ ನೋಡಿದರೆ ಈತನು ರಾತ್ರಿ ಮನೆಯಲ್ಲಿ ತಂಗಿರಬಹುದು, ಇಲ್ಲವೇ ನುಗ್ಗಿರಬಹುದು ಎಂಬ ಅನುಮಾನ ಕಾಡುತ್ತಿದೆ. ಯಾಕೆಂದರೆ ಅಫ್ನಾನ್ ಮತ್ತು ಅಯ್ನಾಜ್ ಯುವಕರಾಗಿದ್ದು, ಅಷ್ಟು ಸುಲಭವಾಗಿ ಒಬ್ಬನೇ ನಾಲ್ವರನ್ನು ಕೊಂದು ಹಾಕುವುದು ಸುಲಭವಲ್ಲ. ಪರಿಚಯಸ್ಥನೇ ಈ ಕೃತ್ಯ ಎಸಗಿರಬಹುದು ಎಂದು ಮಲ್ಪೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version