Site icon Kannada News-suddikshana

ಬಂಗಾರದ ಆಭರಣವಿದ್ದ ಬ್ಯಾಗ್ ಸುಲಿಗೆ: ಕೆಲವೇ ಗಂಟೆಯಲ್ಲೇ ಆರೋಪಿ ಅಂದರ್!

ಬಂಗಾರ

ದಾವಣಗೆರೆ: ಬಂಗಾರದ ಆಭರಣಗಳ ಬ್ಯಾಗ್ ಸುಲಿಗೆ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಸುಲಿಗೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೆಟಿಜೆ ನಗರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 7.20 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

READ ALSO THIS STORY: ಚಿನ್ನದ ಬೆಲೆ ಗಗನಕ್ಕೆೇರಿದ್ದರಿಂದ ಕಳ್ಳರಿಂದ ತಪ್ಪಿಸಿಕೊಳ್ಳಲು ಪೊಲೀಸರ ಈ ಸೂಚನೆಗಳ ಪಾಲಿಸಿದರೆ ಸಾಕು!
ದಾವಣಗೆರೆ ನಗರದ ಬಾಷಾನಗರದ 17ನೇ ಕ್ರಾಸ್ ಒಂದನೇ ಮುಖ್ಯರಸ್ತೆಯ ವಾಸಿ ಗಾರೆ ಕೆಲಸ ಮಾಡುತ್ತಿದ್ದ ಶಫೀವುಲ್ಲಾ (35) ಬಂಧಿತ ಆರೋಪಿ. ಈತನ ಖಾಯಂ ವಿಳಾಸ ಹರಿಹರದ ಬೆಂಕಿನಗರ. ಕೆಲಸದ ನಿಮಿತ್ತ ದಾವಣಗೆರೆಯಲ್ಲಿರುತ್ತಿದ್ದ.
ಘಟನೆ ಹಿನ್ನೆಲೆ:

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಇಮ್ರಾನ್ ಖಾನ್ ಅವರು ತನ್ನ ಪತ್ನಿಯೊಂದಿಗೆ ದಾವಣಗೆರೆಗೆ ಬಂದಿದ್ದರು. ತಮ್ಮ ಸಂಬಂಧಿಕರ ಮದುವೆ ವಲೀಮಾ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸು ತಮ್ಮ ಊರಿಗೆ ಹೋಗುವಾಗ ಟೀ ಕುಡಿಯಲು ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಹೋಗಿದ್ದರು. ಈ ವೇಳೆ ಇಮ್ರಾನ್ ಖಾನ್ ಪತ್ನಿಯು ಕಾರ್ ಬಳಿ ನಿಂತಿದ್ದಾಗ ಯಾರೋ ಒಬ್ಬ ಸುಮಾರು 30-35 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಕೈಯಲ್ಲಿದ್ದ ಬಂಗಾರದ ಆಭರಣಗಳನ್ನು ಇಟ್ಟುಕೊಂಡಿದ್ದ ಹ್ಯಾಂಡ್ ಬ್ಯಾಗ್ ಅನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಮತ್ತು ಆಭರಣಗಳ ಪತ್ತೆಗೆ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್. ಎಸ್. ಅವರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂಡ ಕ್ಷಿಪ್ರ ಕಾರ್ಯಚರಣೆ ನಡೆಸಿ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿತನಾದ ಶಫಿವುಲ್ಲಾನನ್ನು ಬಂಧಿಸಿದೆ.

ಆರೋಪಿ ಶಫೀವುಲ್ಲಾನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ. ಒಟ್ಟು 7,20,000 ರೂ ಬೆಲೆಯ ಒಟ್ಟು 80 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್. ಎಸ್. ಸುನೀಲ್ ಕುಮಾರ್, ಪಿಎಸ್ಐ ಆರ್. ಲತಾ, ನಿಸ್ತಂತು ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಮಾಳಗಿ, ನಿತೇಶ್ ಕುಮಾರ್ ಹಾಗೂ ಕೆಟಿಜೆ ನಗರ ಠಾಣಾ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ., ಗೌರಮ್ಮ, ಅನಿತಾ ಹಾಗೂ ಇತರೆ ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

Exit mobile version