Site icon Kannada News-suddikshana

ಗೋವಾದಲ್ಲಿ ಬಿಜೆಪಿ ಶ್ರೀರಾಮ ಸೇನೆ ಬರಲು ಬಿಡಲಿಲ್ಲ ಯಾಕೆ: ಡಿ. ಕೆ. ಶಿವಕುಮಾರ್ ಪ್ರಶ್ನೆ

SUDDIKSHANA KANNADA NEWS/ DAVANAGERE/ DATE:05-05-2023

ದಾವಣಗೆರೆ (DAVANAGERE): ಬಿಜೆಪಿಯವರು ಏನೂ ಬೇಕಾದರೂ ಮಾಡಲಿ. ಪಠಣ ಮಾಡಿದರೆ ಬೇಡವೆನ್ನಲ್ಲ. ಹನುಮಾನ ಚಾಲೀಸ ಮಾಡಿರುವುದು ತುಂಬಾ ಸಂತೋಷ. ಗೋವಾ(GOA)ದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ (BJP) ಸರ್ಕಾರ ಶ್ರೀರಾಮ ಸೇನೆ ಪ್ರವೇಶಿಸಲು ಬಿಡಲಿಲ್ಲ. ಆಗ ಪ್ರಧಾನಿ ನರೇಂದ್ರ ಮೋದಿ (NARENDRA MODI) ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಧ್ವನಿ ಎಲ್ಲಿ ಹೋಗಿತ್ತು ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರಶ್ನಿಸಿದರು.

ಹೊನ್ನಾಳಿ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ. ಜಿ. ಶಾಂತನಗೌಡರ ಪರ ಪ್ರಚಾರಕ್ಕೆ ಆಗಮಿಸುವ ಮುನ್ನ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆಯನ್ನು ಗೋವಾ (GOA) ಸರ್ಕಾರ ಬಲವಂತವಾಗಿ ಹಿಂದಿಕ್ಕಿತ್ತು. ರಾಮನ ಭಂಟ ಹನುಮಂತ. ಆದ್ರೆ, ಬಿಜೆಪಿ (BJP) ಸರ್ಕಾರ ರಾಮಸೇನೆ ಬಿಡಲಿಲ್ಲ. ನಾವು ದೇಶದ್ರೋಹಿಗಳು, ಅಶಾಂತಿ ಕೆಡಿಸುವವರ ಬಗ್ಗೆ ಮಾತನಾಡುತ್ತಿದ್ದೇವೆ. ಬಜರಂಗಿ ಬಜರಂಗದಳಕ್ಕೂ ವ್ಯತ್ಯಾಸ ಇದೆ. ಈ ಹೆಸರೇಳಿಕೊಂಡು ದೇಶ ಲೂಟಿ ಮಾಡಿ ಕಾನೂನು ಕೈಗೆ ತೆಗೆದುಕೊಂಡು ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.

ಸತ್ತವರ ಸರ್ಟಿಫಿಕೆಟ್ ನಲ್ಲಿ ಮೋದಿ ಫೋಟೋ ಹಾಕಲಿ:

ದಕ್ಷಿಣ ಕನ್ನಡದಲ್ಲಿ ಬಜರಂಗದಳದಲ್ಲಿದ್ದ ಎಷ್ಟೋ ನಾಯಕರು, ಅಮಾಯಕರು ಬಲಿಯಾಗಿದ್ದಾರೆ. ಬಡ ಕುಟುಂಬದವರನ್ನು ಹಾಳು ಮಾಡಿದ್ದೇ ಬಿಜೆಪಿ. ನಿಮ್ಮ ಪಕ್ಷ ಬೆಳೆಸಿಕೊಳ್ಳಿ, ನಮ್ಮದೇನೂ ಅಭ್ಯಂತರವೇನಿಲ್ಲ. ಪ್ರಣಾಳಿಕೆಯಲ್ಲಿ ಅಂಗನವಾಡಿ, ಯುವಕರು, ರೈತರು, ಹಿರಿಯರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಏನು ನೀಡುತ್ತೇವೆ ಎಂಬ ಭರವಸೆ ಕೊಟ್ಟಿದ್ದೇವೆ. ಪ್ರಧಾನಿ ಮಂತ್ರಿ ಅವರು ಬಜರಂಗಿ ಹನುಮಾನ್ ಎಂದು ಕೂಗಿಕೊಳ್ಳಲಿ. ಜೊತೆಗೆ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀವಿ. ಎಷ್ಟು ಹೆಣ್ಣು ಮಕ್ಕಳು ಸತ್ತು ಹೋಗಿದ್ದಾರೆ. ಕೊರೊನಾ ಬಂದಾಗ ಎಷ್ಟೋ ಮಹಿಳೆಯರು ಸತ್ತು ಹೋಗಿದ್ದಾರೆ. ಸುರೇಶ್ ಅಂಗಡಿಯವರ ಮೃತದೇಹ ನೋಡಲು ಜನರಿಗೆ ಅವಕಾಶ ಮಾಡಿಕೊಡಲಿಲ್ಲ. 36 ಮಂದಿ ಸತ್ತು ಹೋದರು. ಡೆತ್ (DEATH) ಸರ್ಟಿಫಿಕೆಟ್ ನಲ್ಲಿ ಮೋದಿ ಫೋಟೋ ಹಾಕಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ (CONGRESS) ಪಕ್ಷ 65 ವರ್ಷ ಏನೂ ಮಾಡಿಲ್ಲ ಎನ್ನುತ್ತಾರೆ. ನೀವು ಅಧಿಕಾರಕ್ಕೆ ಬಂದಿಲ್ವಾ. ಗೆದ್ದಿದ್ದು ಹೇಗೆ? ಸಂವಿಧಾನ ಬಲಿಷ್ಠವಾಗಿರುವುದಕ್ಕೆ ಇದಾಗಿದೆ. ಜವಾಹರಲಾಲ್ ಅವರು ಪ್ರಧಾನಿ ಆಗಿದಾಗಿನಿಂದ ಮನಮೋಹನ್ ಸಿಂಗ್ ಕಾಲಾವಧಿಯವರೆಗೆ ನೂರಾರು ಕಾರ್ಯಕ್ರಮಗಳನ್ನು ಕೊಟ್ಟಿರುವ ಪಕ್ಷವೆಂದರೆ ಕಾಂಗ್ರೆಸ್. 2013ರವರೆಗೆ ಭಾರತ ಬಲಿಷ್ಠವಾಗಿತ್ತು ಎಂದು ತಿರುಗೇಟು ನೀಡಿದರು.

ಅವರಿಗೊಂದು, ನಮಗೊಂದು:

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿದ ಬಳಿಕ ಬಿಜೆಪಿ, ನರೇಂದ್ರ ಮೋದಿ ಅಲೆ ಕೊಚ್ಚಿಕೊಂಡು ಹೋಗುತ್ತಿದೆ. ಅದಕ್ಕೆ ಏನೇನೋ ದಾರಿ ಹುಡುಕುತ್ತಿದ್ದಾರೆ. ಮೋದಿ ಅವರ ಬಳಿ ಕೇಂದ್ರ, ರಾಜ್ಯ ಸರ್ಕಾರ ಇದೆ. ಪ್ರಿಯಾಂಕಾ ಗಾಂಧಿ ಅವರಿಗೆ ರೋಡ್ ಶೋ ನಡೆಸಲು ಒಂದೇ ದಾರಿಯಿರುವ ಮಾರ್ಗ ನೀಡುತ್ತಾರೆ. ಅದೇ ಪ್ರಧಾನಿಯವರಿಗೆ ಡಬಲ್ ರಸ್ತೆ ನೀಡುತ್ತಾರೆ. ರೋಡ್ ಶೋಗೆ ಒಂದು ರಸ್ತೆ, ಮೋದಿ ನೋಡಲು ಬರುವ ಜನರಿಗೆ ಮತ್ತೊಂದು ರಸ್ತೆ ನೀಡುತ್ತಾರೆ. ಆದ್ರೆ, ಕಾಂಗ್ರೆಸ್ ನವರಿಗೆ ಒತ್ತಡ ಮತ್ತು ಅನುಮತಿ ನೀಡಲು ಬಿಜೆಪಿ (BJP)ಸರ್ಕಾರ ಮತ್ತು ಅಧಿಕಾರಿಗಳು ಸತಾಯಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೋದಿ ಶೋಗೆ ತೊಂದರೆ ಕೊಡಲ್ಲ:

ಗ್ಯಾಸ್ (GAS), ಪೆಟ್ರೋಲ್ (PETROL) , ಡೀಸೆಲ್ ಸೇರಿದಂತೆ ಬೆಲೆ ಏರಿಕೆ, ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ರಾಜಕಾರಣ ಎದುರುಗಡೆ ಮಾಡುತ್ತೇವೆ. ಆ್ಯಂಬುಲೆನ್ಸ್ ಬಿಟ್ಟು ಮೋದಿ ಶೋಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಶೋಭಾ ಕರಂದ್ಲಾಜೆ ಸುಳ್ಳು ಹೇಳಬಾರದು. ಕೇಂದ್ರ ಸರ್ಕಾರ ಅವರದ್ದೇ ಇದೆ. ಇಂಥ ಕುತಂತ್ರ ಮಾಡುವವರು ಇದ್ದರೆ ಕೂಡಲೇ ಬಂಧಿಸಿ. ಯಾರು ಬೇಡ ಅಂತಾರೆ ಎಂದು ಹೇಳಿದರು.

ಮಾಧ್ಯಮದವರಿಗೆ ಬೆದರಿಕೆ:

ಪೇಪರ್, ಟಿವಿಯವರಿಗೆ ಹೆದರಿಸಿ ಬೆದರಿಸಿದ್ದಾರೆ. ಪ್ರಮುಖ ಚಾನೆಲ್ ಗಳು ಜನರ ನಾಡಿಮಿಡಿತ ಅರಿತು ಕಾಂಗ್ರೆಸ್ ಪರ ಸಮೀಕ್ಷೆ ಪ್ರಕಟಿಸಿದ ಬಳಿಕ ತೊಂದರೆ ಕೊಡಲು ಶುರು ಮಾಡಿದ್ದಾರೆ. ಕಾಂಗ್ರೆಸ್ ಪರ ನಿಲ್ಲುವವರಿಗೆ ಭಯಪಡುವಂತೆ ಮಾಡುವ ಕುತಂತ್ರ ನಡೆಸಿದ್ದಾರೆ. ನೀವು ಬರೆದುಕೊಳ್ಳಿ, 141 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಆದಾಯ ತೆರಿಗೆ ಅಧಿಕಾರಿಗಳು ಬಿಜೆಪಿಯ ಏಜೆಂಟ್ ರಂತೆ ವರ್ತಿಸುತ್ತಿದ್ದು, ಇನ್ನೆರಡು ದಿನಗಳ ಕಾಲ ಪ್ರಚಾರಕ್ಕೆ ಹೋಗದಂತೆ ಕಾಂಗ್ರೆಸ್ ನಾಯಕರನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಡಿ. ಜಿ. ಶಾಂತನಗೌಡ ಮತ್ತಿತರರು ಹಾಜರಿದ್ದರು.

Exit mobile version