Site icon Kannada News-suddikshana

ಕಂದನಕೋವಿ ಸರ್ಕಾರಿ ಶಾಲೆಗೆ ಬಂತು ನವೀಕರಣ ಭಾಗ್ಯ: ಸ್ನೇಹ ಸಮ್ಮಿಲನ ಟೀಂ ವಿಶೇಷ ಪ್ರಯತ್ನದ ಫಲ!

SUDDIKSHANA KANNADA NEWS/ DAVANAGERE/ DATE:02-01-2025

ದಾವಣಗೆರೆ: ಮಾಯಕೊಂಡ ಕ್ಷೇತ್ರದ ಕಂದನಕೋವಿ ಗ್ರಾಮದ ಪ್ರೌಢಶಾಲೆಗೆ ಈಗ ನವೀಕರಣ ಭಾಗ್ಯ. ಇದು ಸಮ್ಮಿಲನ ತಂಡದ ವಿಶೇಷ ಪ್ರಯತ್ನದ ಫಲ. ಈ ಶಾಲೆಯು ಈಗ ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿದೆ. ಗೋಡೆಗಳ ಮೇಲೆ ಚಿತ್ರಗಳ ಚಿತ್ತಾರ ಮೂಡಿದೆ. ಶಾಲೆಯ ಕಟ್ಟಡ ಸುಂದರವಾಗಿದೆ.

ಹೌದು. ಇದಕ್ಕೆ ಕಾರಣ ನಗರದ ಬಾಪೂಜಿ ಹೈಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಸಂಘದ ಪರಿಶ್ರಮ. ಬಾಪೂಜಿ ಹೈಸ್ಕೂಲ್ ಅಲ್ಯುಮ್ಮಿ ಸಂಘ ನೊಂದಣಿ ಮಾಡಿಸಲಾಯಿತು. ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾಗಿದ್ದ ಎಸ್.ಟಿ ವಿರೇಶ್‌ರವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರೊಡಗೂಡಿ ಕಳೆದ ವರ್ಷ ದಾವಣಗೆರೆ ಸಮೀಪದ ಶಾಮನೂರು ಗ್ರಾಮದ ಜನತಾ ಕಾಲೋನಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯನ್ನು ನವೀಕರಿಸಿ, ಪೀಠೋಪಕರಣಗಳನ್ನು ನೀಡಿ ತಮ್ಮ ಶಿಕ್ಷಣ ಪ್ರೇಮವನ್ನು ವ್ಯಕ್ತಪಡಿಸಿದ್ದರು.

ಜೊತೆಗೆ ಡಾಲರ್ಸ್ ಕಾಲೋನಿಯ ಉದ್ಯಾನವನದ ಮೇಲ್ವಿಚಾರಣೆ ವಹಿಸಿಕೊಳ್ಳಲಾಗಿತ್ತು ಎಂದು ಬಾಪೂಜಿ ಹೈಸ್ಕೂಲ್ ಅಲ್ಯುಮ್ಮಿ ಸಂಘದ ಅಧ್ಯಕ್ಷ ಎಸ್.ಟಿ ವೀರೇಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದ ಬಾಪೂಜಿ ಹೈಸ್ಕೂಲ್‌ನ 1988-2001ರ 14 ವರ್ಷಗಳ ವಿದ್ಯಾರ್ಥಿಗಳು 2022 ನೇ ವರ್ಷ “ಸ್ನೇಹ ಸಮ್ಮಿಲನ” ದಲ್ಲಿ ಒಗ್ಗೂಡಿ ಅಭೂತಪೂರ್ವ ಕಾರ್ಯಕ್ರಮ ನಡೆಸಿ ಬಳಿಕ ಬಾಪೂಜಿ ಹೈಸ್ಕೂಲ್ ಅಲ್ಯೂಮ್ಮಿ ಸಂಘ ರಚಿಸಲಾಗಿತ್ತು. ಈ ಸ್ನೇಹಬಂಧ ಮುಂದುವರೆದು ಸಮಾಜಮುಖಿ ಕಾರ್ಯಕ್ರಮ ನಡೆಸುವ ಸದುದ್ದೇಶದಿಂದ ಇದೀಗ ಮಾಯಕೊಂಡ ಕ್ಷೇತ್ರದ ಕಂದನಕೋವಿ ಗ್ರಾಮದ ಪ್ರೌಢಶಾಲೆಯ ಅಭಿವೃದ್ಧಿಗೆ ಶ್ರಮಿಸಿ ಯಶ ಕಂಡಿದೆ ಎಂದು ಹೇಳಿದರು.

ಜನವರಿ 4 ರ ಬೆಳಿಗ್ಗೆ 10 ಗಂಟೆಗೆ ನವೀಕರಣಗೊಂಡ ಶಾಲೆಯ ಉದ್ಘಾಟನೆ ಮತ್ತು ಸ್ನೇಹ ಸಮ್ಮಿಲನ ಹಾಗೂ ಎಸ್.ಎಸ್ ಕೇರ್‌ವತಿಯಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಉದ್ಘಾಟನೆ ನೆರವೇರಿಸುವರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪನಿರ್ದೇಶಕರಾದ ಜಿ. ಕೊಟ್ರೇಶ್ ಮತ್ತು ಎಸ್. ಗೀತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಮ್ಮ ಮಹೇಶ್ವರಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜಪ್ಪ, ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಹಾಗೂ ಕಂದನಕೋವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸವಿತಾ ಎಸ್.ಟಿ. ಪಾಲ್ಗೊಳ್ಳುವರು. ಗ್ರಾಮ ಪಂಚಾಯಿತಿ ಅಧಿಕಾರಿಗಳು,ಎಸ್ ಡಿ ಎಂ ಸಿ ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಬಾಪೂಜಿ ಹೈಸ್ಕೂಲ್‌ನಲ್ಲಿ ಕಲಿತ ವಿದ್ಯಾರ್ಥಿಗಳು ಒಗ್ಗೂಡಿ ಸುಮಾರು 5 ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆಯನ್ನು ನವೀಕರಿಸಿರುವ ಕಾರ್ಯ ಶ್ಲಾಘನೀಯ. ಗ್ರಾಮಸ್ಥರಿಗಾಗಿ ಅಂದು ಎಸ್.ಎಸ್ ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಜನಮೆಚ್ಚುಗೆ ಪಡೆದ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಬಾಪೂಜಿ ಅಲ್ಯುಮ್ಮಿ ಪದಾಧಿಕಾರಿಗಳಾದ ಕಿರುವಾಡಿ ವೀರೇಶ್, ಸಿದ್ಧಗಂಗಾ ಹೇಮಂತ್, ಸಂಜಯ್ ರೇವಣಕರ್, ಶುಭಾಷಿಣಿ, ಐನ್‌ಹಳ್ಳಿ ಶುಭಾ, ಹೊನ್ನೂರ್ ಗಿರೀಶ್, ದವನ್ ವೀರೇಶ್ ಪಟೇಲ್, ಅಭಿಷೇಕ್ ಬಿ.ಜೆ, ಶ್ರೀನಿವಾಸ ಎಂ. ಸಿ. ಹಾಜರಿದ್ದರು.

Exit mobile version