SUDDIKSHANA KANNADA NEWS/ DAVANAGERE/ DATE:27-01-2024
ದಾವಣಗೆರೆ: ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದ ಬಸವರಾಜ ಅವರು ತಾಲೂಕಿನ ದೊಡ್ಡಬಾತಿ ಗ್ರಾಮಕ್ಕೆ ತೆರಳುತ್ತಿದ್ದರು. ದಾವಣಗೆರೆ ವಿಜಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿಕೊಂಡಿದ್ದು, ಕಳೆದ 25ರಂದು ಕೆಲಸ ಮುಗಿಸಿಕೊಂಡು ರಾತ್ರಿ 12-45 ರಿಂದ 1 ಗಂಟೆ ಸಮಯದಲ್ಲಿ ದಾವಣಗೆರೆಯಿಂದ ವಾಪಸ್ ಹೋಗುತ್ತಿರುವಾಗ ಬಾತಿ ಕೆರೆಯ ಬಳಿ ಯಾರೋ ನಾಲ್ವರು ಹುಡುಗರು ಹಲ್ಲೆ ನಡೆಸಿ 50 ರಿಂದ 100 ರೂ ನಗದು ಹಾಗೂ ಒಂದು ಸ್ಯಾಮ್ ಸಂಗ್ ಮೊಬೈಲ್ ನ್ನು ಕಿತ್ತುಕೊಂಡು ಹೋಗಿದ್ದರು. ಮಾತ್ರವಲ್ಲ, ಮನಬಂದಂತೆ ಥಳಿಸಿದ್ದರು.
ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಬಸವರಾಜ್ ಅವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಎಎಸ್ಪಿ ವಿಜಯ್ ಕುಮಾರ್ ಸಂತೋಷ್ ಹಾಗೂ ಮಂಜುನಾಥ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ
ಪೊಲೀಸ್ ಇನ್ ಸ್ಪೆಕ್ಟರ್ ಕಿರಣ್ ಕುಮಾರ್ ಇ.ವೈ., ಪಿಎಸ್ಐ ಜೋವಿತ್ ರಾಜ್ ಮತ್ತು ಡಿಸಿಐಬಿ ವಿಭಾಗದ ಸಿಬ್ಬಂದಿದ ಮಜೀದ್, ರಾಘವೇಂದ್ರ,, ಆಂಜನೇಯ, ರಮೇಶನಾಯ್ಕ, ಬಾಲರಾಜ ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ
ದೇವೇಂದ್ರನಾಯ್ಕ್, ಅಣ್ಣಯ್ಯ, ಮಹಮ್ಮದ್ಯುಸುಫ್ ಅತ್ತಾರ್, ವೀರೇಶ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ್ ಕಾಲೋನಿ ನಿವಾಸಿ ಟೈಲ್ಸ್ ಕೆಲಸ ಮಾಡುತ್ತಿದ್ದ ಮೈಲಾರಿ ಅಲಿಯಾಸ್ ಕಡ್ಡಿ (18), ಪೃಥ್ವಿನಾಯ್ಕ್ ಬಿ. ಅಲಿಯಾಸ್ ಬ್ಲೇಡ್ (20), ದ್ವಿತೀಯ ಪಿಯುಸಿ ವಿದ್ಯಾರ್ಥಿ ಎನ್. ಸಂಜಯ್ (18), ಬಿ. ಕಾಂ. ವಿದ್ಯಾರ್ಥಿ ವೀರೇಶ್ ಅಲಿಯಸ್ ಬೆಂಡಿ ಹಾಗೂ
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ.
ಬಂಧಿತರಿಂದ ಬಸವರಾಜ್ ರಿಂದ ಕಿತ್ತುಕೊಂಡು ಹೋಗಿದ್ದ 50 ರೂ. ನಗದು ಹಾಗೂ 16,000 ರೂಪಾಯಿ ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ್ದ 2 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು 5 ದಿನಗಳ ಹಿಂದೆ ವಿದ್ಯಾನಗರ ಪೊಲೀಸ್ ಠಾಣಾ ಸರಹದ್ದಿನ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಸರ್ವೀಸ್ ರಸ್ತೆಯಲ್ಲಿ ಒಬ್ಬ ವ್ಯಕ್ತಿಗೆ ಹೆದರಿಸಿ 1 ಮೊಬೈಲ್ ಹಾಗೂ ಹಣ ಕಿತ್ತುಕೊಂಡಿರುವುದಾಗಿ ಹಾಗೂ ಈಗ್ಗೆ ಸುಮಾರು 3 ದಿನಗಳ ಹಿಂದೆ ದಾವಣಗೆರೆ
ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯ ಆವರಗೆರೆ ಹತ್ತಿರ ಹಳೇ ಪಿ.ಬಿ ರಸ್ತೆಯಲ್ಲಿ ಒಬ್ಬ ವ್ಯಕ್ತಿಗೆ ಅಡ್ಡಗಟ್ಟಿ ನಿಲ್ಲಿಸಿ ಒಂದು ಮೊಬೈಲ್ ಕಿತ್ತುಕೊಂಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟು 3 ಪ್ರಕರಣಗಳು ಪತ್ತೆಯಾಗಿದ್ದು ಆರೋಪಿತರನ್ನು ಹಾಗೂ ಕಾ.ಸ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ. ಈ ಪ್ರಕರಣ ಸಂಬಂಧ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಆರೋಪಿಗಳನ್ನು ಕೂಡಲೇ ಹಿಡಿಯುವಂತೆ ಸೂಚನೆ ನೀಡಿದ್ದರು. ಗಾಯಾಳು ಪತ್ರಕರ್ತ ಬಸವರಾಜ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದರು.