SUDDIKSHANA KANNADA NEWS/ DAVANAGERE/ DATE:27-04-2023
ದಾವಣಗೆರೆ (DAVANAGERE): ಚರಗ ಚೆಲ್ಲುವ ವೇಳೆಯಲ್ಲಿ ಜಗಳೂರು (JAGALURU) ಪಟ್ಟಣದ ಮೂಲಕ ಹೋಗುತ್ತಿದ್ದ ನಾಲ್ಕು ವಾಹನಗಳನ್ನು ಜಖಂಗೊಳಿಸಿದ ಆರೋಪದ ಮೇಲೆ 16 ಜನರನ್ನು ಬಂಧಿಸಿ (ARREST), ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ (Dr. ARUN) ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ರಾಮಲಿಂಗೇಶ್ವರ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ಸೇರಿದಂತೆ ನಾಲ್ಕು ವಾಹನಗಳು ಬೆಳಿಗ್ಗಿನ ಜಾವ ಸಂಚರಿಸುತ್ತಿದ್ದವು. ಈ ವೇಳೆ ಸ್ಥಳೀಯ ಯುವಕರು ವಾಹನಗಳನ್ನು ತಡೆದಿದ್ದಾರೆ.
ಸ್ವಾಮೀಜಿ ಕಾರು ಜಖಂಗೊಳಿಸಿದ ಕಿಡಿಗೇಡಿಗಳು ಸುಮಾರು 23 ಸಾವಿರ ರೂಪಾಯಿ ದೋಚಿದ್ದು, ವಕೀಲರಾದ ಮೋನಿಕಾ ಹಾಗೂ ಬಾಲಾಜಿ ಎಲೆಕ್ಟ್ರಿಕಲ್ಸ್ ನ ಮದನಲಾಲ್ ಎಂಬುವವರಿಗೆ ಸೇರಿದ ಕಾರು ಜಖಂಗೊಳಿಸಲಾಗಿತ್ತು.
ರಾಮಲಿಂಗೇಶ್ವರ ಸ್ವಾಮೀಜಿಯವರು ದಾವಣಗೆರೆ(DAVANAGERE)ಯಿಂದ ಬಳ್ಳಾರಿ ಕಡೆಗೆ ಹೋಗುತ್ತಿದ್ದರು. ಜಗಳೂರು ಪಟ್ಟಣದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತಿತ್ತು. ಬೆಳ್ಳಂಬೆಳಿಗ್ಗೆ ಚರಗ ಚೆಲ್ಲುವ ಕಾರ್ಯಕ್ರಮ ನಡೆಸಲಾಗುತಿತ್ತು. ಈ ವೇಳೆ ಪಟ್ಟಣದ ಸುತ್ತ ಕಾವಲು ಮಾಡಲಾಗಿತ್ತು. ಸ್ವಾಮೀಜಿ ಅವರ ಕಾರು ಬರುತ್ತಿದ್ದಂತೆ 25 ಜನರ ಗುಂಪು ದೊಣ್ಣೆಗಳಿಂದ ಥಳಿಸಿ ಕಾರಿನ ಗಾಜು (GLASS) ಪುಡಿ ಪುಡಿಗೊಳಿಸಲಾಯಿತು. ಈ ಬಗ್ಗೆ ಸ್ವಾಮೀಜಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು 25 ಜನರ ವಿರುದ್ಧ ದೂರು ದಾಖಲಿಸಿದರು.
ಹಬ್ಬಕ್ಕಾಗಿ ಗ್ರಾಮಕ್ಕೆ ಬಂದಿದ್ದ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿ ವಕೀಲೆ ಮೋನಿಕಾ ಅವರು ಮಗುವಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣಕ್ಕೆ ಚಿಕಿತ್ಸೆ ಕೊಡಿಸಲು ಕಾರಿನ ಮೂಲಕ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನ
ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದರು. ಕಾರಿನ ಗಾಜು ಪುಡಿಪುಡಿಯಾಯಿತು. ಕಾರಿನೊಳಗಿದ್ದ ಮಗುವಿನ ಮೈಮೇಲೆ ಗಾಜಿನ ಚೂರುಗಳು ಚುಚ್ಚಿ ಗಾಯಗಳಾಗಿವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು. ಈ ಎರಡು ಪ್ರಕರಣಗಳಿಗೆ
ಸಂಬಂಧಿಸಿದಂತೆ ಈ ಪೈಕಿ 16 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಹದಿನಾರು ಆರೋಪಿಗಳನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದರು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಠಾಣೆ ಮುಂದೆ ಜಮಾಯಿಸಿದರು. ಈ ವೇಳೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಮಾತ್ರವಲ್ಲ, ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ಎಷ್ಟೇ ಮನವೊಲಿಸಲು ಪೊಲೀಸರು ಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಉದ್ರಿಕ್ತಗೊಂಡ ಜನರು ಗಲಾಟೆ ಮಾಡಲು ಶುರು ಮಾಡಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು
ಲಘು ಲಾಠಿ ಪ್ರಹಾರ (LATI CHARGE) ನಡೆಸಿದ್ದಾರೆ. ಶಾಸಕ ಎಸ್. ವಿ. ರಾಮಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲಿಸುವಲ್ಲಿ ಯಸಶ್ವಿಯಾದರು.
ಘಟನೆ ಹಿನ್ನೆಲೆಯಲ್ಲಿ ಜಗಳೂರಿನಲ್ಲಿ ಅಡಿಷನಲ್ ಎಸ್ಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ
ಎಂದು ಎಸ್ಪಿ ಡಾ. ಅರುಣ್ ಹೇಳಿದ್ದಾರೆ.