SUDDIKSHANA KANNADA NEWS/DAVANAGERE/DATE:09_12_2025
ಬೆಳಗಾವಿ: ಬಿಜೆಪಿ ನಾಯಕರು ಸದನದಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸುವಾಗ ಸಮರ್ಪಕ ಅಂಕಿ-ಅಂಶಗಳೊಂದಿಗೆ ಬರುವುದು ಉತ್ತಮ. ಸರ್ಕಾರವನ್ನು ಟೀಕಿಸುವ ಹಕ್ಕು ಅವರಿಗೆ ಇದೆ. ಆದರೆ ಅವರ ವಿಮರ್ಶೆಗಳು ರಚನಾತ್ಮಕವಾಗಿರಬೇಕು ಮತ್ತು ಸಕಾರಾತ್ಮಕವಾಗಿರಬೇಕು. ಯಾವುದೇ ನಿಖರ ಅಂಕಿ-ಅಂಶಗಳಿಲ್ಲದೆ ಸುಳ್ಳು ಮಾಹಿತಿಗಳನ್ನು ಸತ್ಯವೆಂಬಂತೆ ಸದನದಲ್ಲಿ ಆರೋಪಿಸುವುದು ಜನತೆಗೆ ತಪ್ಪು ಸಂದೇಶ ರವಾನಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವಾಗ ರಿಪೋರ್ಟ್ ಕಾರ್ಡ್ ಕುರಿತು ವಿರೋಧ ಪಕ್ಷದವರು ಮಾತನಾಡುತ್ತಾರೆ. ಆದರೆ ಅದರಲ್ಲಿ ವಾಸ್ತವಾಂಶಗಳಿಲ್ಲ. ಕೇಂದ್ರ ಸರ್ಕಾರದ ರಿಪೋರ್ಟ್ ಕಾರ್ಡ್ ಕುರಿತು ಕೂಡ ಮಾತನಾಡುವ ಧೈರ್ಯವನ್ನು ಅವರು ಬೆಳೆಸಿಕೊಳ್ಳಲಿ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರೆ ಅದು ಬಿಟ್ಟಿಭಾಗ್ಯ ಎಂದು ಆಪಾದನೆ ಮಾಡುವವರು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅದನ್ನು ಜಾರಿಗೊಳಿಸಿದಾಗ ಮಾಸ್ಟರ್ ಸ್ಟ್ರೋಕ್ ಎಂದು ವ್ಯಾಖ್ಯಾನಿಸುತ್ತಾರೆ. ರೈತರ ಬೆಳೆಗಳಿಗೆ ಎಂಎಸ್ಪಿ ನಿಗದಿ ಮಾಡಿಸಲು ಸಾಧ್ಯವಾಗದವರು, ರಾಜ್ಯಕ್ಕೆ ಕೇಂದ್ರದಿಂದ ಒಂದು ರೂಪಾಯಿ ಅನುದಾನ ತರಲು ಸಾಧ್ಯವಾಗದವರಿಗೆ ಈ ಪ್ರಶ್ನೆಗಳನ್ನು ಕೇಳಲು ಯಾವ ನೈತಿಕತೆಯಿದೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.





Leave a comment