Site icon Kannada News-suddikshana

ಮಗು ಏನಾದರೂ ವಸ್ತು ನುಂಗಿದರೆ ತಕ್ಷಣ ಆಸ್ಪತ್ರೆ ತೆರಳಿರಿ: ವೈದ್ಯರ ಸಲಹೆ

ಮಗು

SUDDIKSHANA KANNADA NEWS/ DAVANAGERE/ DATE:18_07_2025

ಬೆಂಗಳೂರು, ವೈಟ್‌ಫೀಲ್ಡ್‌: ಒಂದು ತ್ವರಿತ ನಿರ್ಧಾರ, ಸಮಯೋಚಿತ ಚಿಕಿತ್ಸೆ ಮತ್ತು ವೈದ್ಯರ ನಿಪುಣತೆ. ಈ ಎಲ್ಲವೂ ಸೇರಿ ಒಂದು ಅಮೂಲ್ಯ ಜೀವವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಒಂದೂವರೆ ವರ್ಷದ ಮಗು ಆಟವಾಡುತ್ತಿದ್ದಾಗ ತಪ್ಪಿ ದೊಡ್ಡ ಲೋಹದ ಪಿನ್ ಅನ್ನು ನುಂಗಿಬಿಟ್ಟಿತು. ಅಚ್ಚರಿಯ ಸಂಗತಿಯೆಂದರೆ, ವಾಂತಿ, ಜ್ವರ ಅಥವಾ ಹೊಟ್ಟೆ ಉಬ್ಬರದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಮಗು ಮಲವಿಸರ್ಜನೆ ಮಾಡದೇ ಇರುವುದು ಹೆತ್ತವರಲ್ಲಿ ಆತಂಕ ಹುಟ್ಟಿಸಿತು.

ಈ ಸುದ್ದಿಯನ್ನೂ ಓದಿ: ರಜನಿಕಾಂತ್ ಕೂಲಿ ಸಿನಿಮಾದ ಕಥೆ ಇದೆಯೇ?: ಸೆನ್ಸೇಷನ್ ಸೃಷ್ಟಿಸಿದೆ ಸೂಪರ್ ಸ್ಟಾರ್ ಸಿನಿಮಾ!

ಪುಟಪರ್ತಿಯಲ್ಲಿದ್ದ ಈ ಕುಟುಂಬ ಮರುದಿನ ಮಗುವನ್ನು ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಗೆ ಕರೆದುಕೊಂಡು ಬಂತು. ತಕ್ಷಣ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಲಾಯಿತು. ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ರೋಹಿತ್ ಮೈದೂರ್ ಅವರು ಎಕ್ಸ್‌ ರೇ ಮೂಲಕ ಪಿನ್‌ನ ಸ್ಥಳವನ್ನು ಪತ್ತೆ ಹಚ್ಚಿ, ಎಂಡೋಸ್ಕೋಪಿ ಮೂಲಕ ಅದನ್ನು ಸುರಕ್ಷಿತವಾಗಿ ತೆಗೆದುಹಾಕಿದರು.

ಆಮೇಲೆ ಮಕ್ಕಳ ತಜ್ಞ ಡಾ. ಅನುರಾಗ್ ಮಹಾಗಾಂವ್ಕರ್ ಅವರ ಪರಿಪೂರ್ಣ ಆರೈಕೆ ಫಲವಾಗಿ ಮಗು ಸಂಪೂರ್ಣವಾಗಿ ಚೇತರಿಸಿತು. ಡಾ. ಮೋನಿಕಾ ಗುಪ್ತಾ, ಅನಸ್ಥೆಷಿಯಾ ತಜ್ಞೆ, ಚಿಕಿತ್ಸೆಯು ಸುರಕ್ಷಿತವಾಗಿ ನೆರವೇರಿಸಲು ಪ್ರಮುಖ ಪಾತ್ರವಹಿಸಿದರು.

ವೈದ್ಯರಿಂದ ಪೋಷಕರಿಗೆ ಎಚ್ಚರಿಕೆ:

ಡಾ. ರೋಹಿತ್ ಮೈದೂರ್ ಮತ್ತು ಡಾ. ಅನುರಾಗ್ ಮಹಾಗಾಂವ್ಕರ್ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ:

ಮಗು ಏನಾದರೂ ವಸ್ತು ನುಂಗಿದರೆ ವಾಂತಿಯಾಗುವವರೆಗೆ ಕಾಯಬಾರದು.

ಬಾಳೆಹಣ್ಣು ಕೊಟ್ಟು ಮಲವಿಸರ್ಜನೆ ಆಗಲು ಕಾಯಬಾರದು.

ಯಾವುದೇ ವಿಳಂಬವಿಲ್ಲದೇ ಕೂಡಲೇ ವೈದ್ಯರ ಸಲಹೆ ಪಡೆಯಬೇಕು.

ಮಕ್ಕಳ ಆರೋಗ್ಯ ವಿಷಯದಲ್ಲಿ ಎಚ್ಚರತೆ ಅತ್ಯಗತ್ಯ. ಯಾವುದೇ ಅನುಮಾನಾಸ್ಪದ ವಸ್ತುಗಳನ್ನು ಮಗು ನುಂಗಿದರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಎಂದು ವೈದ್ಯರು ಎಚ್ಚರಿಸುತ್ತಾರೆ.

Exit mobile version