SUDDIKSHANA KANNADA NEWS/DAVANAGERE/DATE:24_12_2025
ದಾವಣಗೆರೆ: ದಾವಣಗೆರೆಯಲ್ಲಿ ಡ್ರಗ್ಸ್ ಮಾರಾಟ ಜಾಲ ಭೇದಿಸಿರುವ ವಿದ್ಯಾನಗರ ಪೊಲೀಸರಿಗೆ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ ಬಂಧನವಾಗಿದೆ. ಮಾತ್ರವಲ್ಲ, ರಾಜಸ್ತಾನ ಮೂಲದ ಇಬ್ಬರು ಆರೋಪಿಗಳನ್ಮು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ವ್ಯಕ್ತಿಯೊಬ್ಬನೂ ಬಂಧನಕ್ಕೊಳಗಾಗಿದ್ದಾನೆ.
READ ALSO THIS STORY: ದಾವಣಗೆರೆಯಲ್ಲಿ 1 ಲಕ್ಷ ನಗದು ಸೇರಿ 11 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ: ಆರೋಪಿಗಳ ಹಿನ್ನೆಲೆ ಬಗ್ಗೆ ಪೊಲೀಸರಿಂದ ಮಹತ್ವದ ಮಾಹಿತಿ!
ಪೊಲೀಸರ ವಿಚಾರಣೇ ವೇಳೆ ರಾಜಸ್ತಾನ ಪೆಡ್ಲರ್ ಗಳಿಂದ ಪ್ರತಿ ಗ್ರಾಂ ಮಾದಕ ವಸ್ತುವಿಗೆ ರೂ. 3500 ರೂಪಾಯಿಯಿಂದ 4 ಸಾವಿರ ರೂಪಾಯಿಗೆ ವೇದಮೂರ್ತಿ ಮತ್ತು ದೇವಕಿಶನ್ ಖರೀದಿ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಜೊತೆಗೆ ಈ ಆರೋಪಿಗಳು ಹೆಚ್ಚು ಹಣ ಕೊಟ್ಟು ಖರೀದಿಸುವ ಶ್ರೀಮಂತರು ಮತ್ತು ಉದ್ಯಮಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಶಾಮನೂರು ವೇದಮೂರ್ತಿ, ರಾಮ್ ಸ್ವರೂಪ್, ಧೋಲಾರಾಮ್, ದೇವಕಿಶನ್ ಬಂಧಿತ ಆರೋಪಿಗಳಾಗಿದ್ದಾರೆ. ರಾಜಸ್ತಾನದಿಂದ ಡ್ರಗ್ಸ್ ಅನ್ನು ದಾವಣಗೆರೆಗೆ ತರಲಾಗುತಿತ್ತು ಎಂಬುದು ಈಗ ಸ್ಪಷ್ಟವಾಗಿದೆ. ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡು, ಹೆಚ್ಚು ಹಣ ಕೊಟ್ಟು ಮಾದಕ ವಸ್ತುಗಳನ್ನು ಖರೀದಿಸುವ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಈ ಮೂಲಕ ಹೆಚ್ಚಿನ ಹಣ ಸಂಪಾದನೆಗೆ ಮುಂದಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾವಣಗೆರೆ ಜಿಲ್ಲೆಯಲ್ಲಿ ಮಾದಕವಸ್ತುಗಳ ವಿರುದ್ದ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಅಕ್ರಮ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವವರ ಹೆಡೆಮುರಿ ಕಟ್ಟುತ್ತಿದ್ದಾರೆ. ಮಾದಕ ವಸ್ತು ನಿಗ್ರಹ ಪಡೆ ರಚನೆಯಾದ ಬಳಿಕ ಎಂಟು ಪ್ರಕರಣಗಳನ್ನು ದಾಖಲಿಸಿ ಒಟ್ಟು 24 ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಹರ, ಹೊನ್ನಾಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದವು.
ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಪೊಲೀಸ್ ಇಲಾಖೆಯು ಪಣ ತೊಟ್ಟಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರೂ ಸಹ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಜಾಲದಲ್ಲಿ ಸಕ್ರಿಯರಾಗಿರುವವರ ಪತ್ತೆಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಯಾರೇ ಅಕ್ರಮ ಮಾದಕ ವಸ್ತುಗಳ ಮಾರಾಟದಲ್ಲಿ ಕಂಡು ಬಂದಿದ್ದೇ ಆದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.
ಇನ್ನು ರಾಜಸ್ತಾನ ಮೂಲದ ಆರೋಪಿಗಳ ವಿರುದ್ಧ ಕೇಸ್ ದಾಖಲಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೇಸ್ ದಾಖಲಾಗಿತ್ತು. ರಾಜಸ್ತಾನದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.






Leave a comment