Site icon Kannada News-suddikshana

ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ: ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ನೋಡಿ

SUDDIKSHANA KANNADA NEWS/ DAVANAGERE/ DATE-23-05-2025

ಬೆಂಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತ ಫಲಾನುಭವಿಗಳಿಗೆ 2025-26ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ:

ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ (ಬಾಳೆ, ಅಂಜೂರ, ದಾಳಿಂಬೆ, ನುಗ್ಗೆ, ಪೇರಲ, ಪಪ್ಪಾಯ, ತೆಂಗು, ಡ್ರಾಗನ್ ಫ್ರೂಟ್, ನೇರಳೆ, ಸಪೋಟ, ಮಾವು, ಸೀತಾಫಲ್, ಹುಣಸೆ, ಕರಿಬೇವು, ಮತ್ತು ಗುಲಾಬಿ ಹಾಗೂ ಇತರೆ) ಬೆಳೆಗಳಿಗೆ ಮತ್ತು ಬದುಗಳಲ್ಲಿ ತೆಂಗು ಸಸಿ ನಾಟಿ, ಕೃಷಿ ಹೊಂಡ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ ಇತ್ಯಾದಿ ಅನುಷ್ಠಾನಗೊಳಿಸಲಾಗುವುದು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ:

ಹೊಸ ಪ್ರದೇಶ ವಿಸ್ತರಣೆ, ಕೃಷಿಹೊಂಡ, ಈರುಳ್ಳಿ ಶೇಖರಣ ಘಟಕ, ನೆರಳು ಪರದೆ, ಪ್ಯಾಕ್‌ಹೌಸ್ ಮತ್ತು ತಳ್ಳುವ ಗಾಡಿ ವಿವಿಧ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.50 ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ನೀಡಲಾಗುತ್ತದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ:

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ ಕಾರ್ಯಕ್ರಮದಡಿ ಸಹಾಯಧನ ನೀಡಲಾಗುತ್ತದೆ. ಹೊಸದಾಗಿ ಅಳವಡಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇ.90 ರಂತೆ ಸಹಾಯಧನ
ವಿತರಿಸಲಾಗುವುದು.

ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆ:

2025-26ನೇ ಸಾಲಿನಲ್ಲಿ ತಾಳೆಬೆಳೆ ಬೆಳೆಯ ಆಸಕ್ತಿ ಇರುವ ರೈತರು ಕೇಂದ್ರ ಪುರಸ್ಕೃತ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಪ್ರತೀ ಹೆಕ್ಟೇರ್‌ಗೆ ಶೇ.50 ರಂತೆ ರೂ.29000/-, ಮೊದಲನೇ ವರ್ಷದಿಂದ ನಾಲ್ಕು ವರ್ಷಗಳ ಬೇಸಾಯ ನಿರ್ವಹಣೆ ಕಾರ್ಯಕ್ರಮಕ್ಕೆ, ಪ್ರತೀ ವರ್ಷ ನಿರ್ವಹಣೆಗೆ ರೂ.5250/- ಪ್ರತೀ ಹೆಕ್ಟೇರ್‌ಗೆ ಸಹಾಯಧನ ನೀಡಲಾಗುವುದು.

ಅಂತರ ಬೆಳೆಗೆ ರೂ.5250/-, ಎತ್ತರವಾದ ತಾಳೆ ಮರಗಳಿಂದ ಹಣ್ಣು ಕಟಾವು ಮಾಡಲು ರೂ.1000/- ಪ್ರತೀ ಟನ್‌ಗೆ (ಗರಿಷ್ಠ 60ಟನ್ ಮಾತ್ರ) ಸಹಾಯಧನ, ಡೀಸೆಲ್ ಪಂಪ್ ಸೆಟ್ ಕೊಳ್ಳಲು ರೂ.8000/-, ಕೊಳವೆ ಬಾವಿಗೆ ರೂ.50000/- ಸಹಾಯಧನ, ತಾಳೆ ಹಣ್ಣು ಕಟಾವು ಮಾಡುವ ಉಪಕರಣ, ಮೊಟೊರೈಸ್ಡ್ ಚಿಸೆಲ್ ರೂ.15000/-, ತಾಳೆ ಹಣ್ಣು ಕಟಾವು ಏಣಿ ರೂ.5000/-, ಚಾಫ್ ಕಟ್ಟರ್ ರೂ.50000/- , ಟ್ರಾಕ್ಟರ್ ಟ್ರೋಲಿ ಖರೀದಿಸಲು ರೂ.160000/- ಶೇ.50 ರಂತೆ ಸಹಾಯಧನ ಸೌಲಭ್ಯ ನೀಡಲಾಗುವುದು.

ಮೇಲ್ಕಂಡ ಎಲ್ಲಾ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಶೇ.15, ವಿಕಲಾಂಗಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಈ ಯೋಜನೆಗಳಡಿ ಅನುದಾನ ಮೀಸಲಿರಿಸಲಾಗಿದ್ದು, ಆಸಕ್ತ ರೈತ ಫಲಾನುಭವಿಗಳು ಈ ಯೋಜನೆಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು.

ಆಸಕ್ತ ತೋಟಗಾರಿಕೆ ರೈತರು ಆಯಾ ತಾಲ್ಲೂಕು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version