ದಾವಣಗೆರೆ : ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಸ್ಥಾಪಿಸಿ, ಹಣಕಾಸು ಒದಗಿಸಿ ಹಾಗೂ ನಿರ್ವಹಿಸುತ್ತಿರುವ ಜಿಎಂ ವಿಶ್ವವಿದ್ಯಾಲಯವು ಬೋಧನೆ, ತರಬೇತಿ ಮತ್ತು ಸಂಶೋಧನೆಯಲ್ಲಿ ಉನ್ನತ ಗುಣಮಟ್ಟದ ಶೈಕ್ಷಣಿಕ ಪರಂಪರೆಯನ್ನು ರೂಪಿಸುತ್ತಿದೆ ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಸ್ರೋ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕರಾದ ಡಾ. ಮೈಲ್ಸ್ವಾಮಿ ಅಣ್ಣಾದೊರೈ ತಿಳಿಸಿದರು.
ಅವರು ನಗರದ ಜಿಎಂ ವಿಶ್ವವಿದ್ಯಾಲಯವು ಜಿಎಂಯು ಕ್ಯಾಂಪಸ್ನಲ್ಲಿರುವ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು.
ಪದವೀಧರರು ತಮ್ಮ ಶೈಕ್ಷಣಿಕ ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೆಮ್ಮೆಯ ಕ್ಷಣವಾಗಿದ್ದು, ಇದು ಅವರ ಜೀವನದ ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಅಭಿನಂದಿಸಿದರು. ವಿಶ್ವವಿದ್ಯಾಲಯದ ಪದವಿಯು ವೃತ್ತಿಜೀವನದ ಅವಕಾಶಗಳನ್ನು ತೆರೆಯುವುದರ ಜೊತೆಗೆ ಕನಸುಗಳನ್ನು ನನಸಾಗಿಸಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಸಹಾಯಕವಾಗುತ್ತದೆ ಎಂದರು.
ಇಂದಿನ ಕೃತಕ ಬುದ್ಧಿಮತ್ತೆ (AI) ಯುಗವು ಶಿಕ್ಷಣ, ಆರೋಗ್ಯ, ಕೈಗಾರಿಕೆ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪರಿವರ್ತನೆ ತರುತ್ತಿದ್ದು, ಭವಿಷ್ಯದ ನಾಯಕರಾದ ಯುವ ಪದವೀಧರರು ಈ ಬದಲಾವಣೆಯನ್ನು ಜವಾಬ್ದಾರಿಯಿಂದ ಮುನ್ನಡೆಸಬೇಕಿದೆ ಎಂದು ಹೇಳಿದರು. ತಂತ್ರಜ್ಞಾನವು ಮಾನವ ಸಾಮರ್ಥ್ಯವನ್ನು ವೃದ್ಧಿಸಬೇಕು; ಮಾನವೀಯತೆ, ನೈತಿಕತೆ ಮತ್ತು ಜವಾಬ್ದಾರಿಯನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬ ಸಲಹೆ ನೀಡಿದರು.
ಆಜೀವ ಕಲಿಕೆ ಇಂದಿನ ಯುಗದಲ್ಲಿ ಆಯ್ಕೆಯಲ್ಲ, ಅವಶ್ಯಕತೆ ಆಗಿದ್ದು, ನಿರಂತರ ಕಲಿಕೆ ಮತ್ತು ಹೊಂದಾಣಿಕೆಯೇ ಯಶಸ್ಸಿನ ಮೂಲ ಎಂದು ತಿಳಿಸಿದರು. ವೃತ್ತಿಪರ ಸಾಧನೆಯ ಜೊತೆಗೆ ಒಳ್ಳೆಯ ಮನುಷ್ಯನಾಗುವುದು, ಕುಟುಂಬ ಮತ್ತು ಸಮಾಜದ ಜವಾಬ್ದಾರಿಗಳನ್ನು ನಿಭಾಯಿಸುವುದೇ ನಿಜವಾದ ಯಶಸ್ಸು ಎಂದು ಹೇಳಿದರು.
ದೊಡ್ಡ ಕನಸುಗಳು, ದೃಢ ಗುರಿಗಳು, ಆಸಕ್ತಿ ಮತ್ತು ಸಮರ್ಪಣೆ ಯಶಸ್ಸಿನ ಕೀಲಿಕೈಗಳಾಗಿದ್ದು, ಭಾರತ ನೀಡಿರುವ ಅವಕಾಶಗಳಿಗೆ ಕೃತಜ್ಞತೆಯಿಂದ ಪ್ರತಿಫಲ ನೀಡಬೇಕೆಂದು ಪದವೀಧರರಿಗೆ ಕರೆ ನೀಡಿದರು. ಜೀವನದಲ್ಲಿ ವೈಯಕ್ತಿಕ ಹಾಗೂ ವೃತ್ತಿಪರ ಸಮತೋಲನ ಅಗತ್ಯವಾಗಿದ್ದು, ಸರಳ ಸಂತೋಷಗಳನ್ನು ಮರೆತರೆ ಬದುಕಿನ ಅರ್ಥ ಕಳೆದುಕೊಳ್ಳುತ್ತದೆ ಎಂದರು.
ಇಸ್ರೋನ ಚಂದ್ರಯಾನ–3, ಮಂಗಳಯಾನಗಳಂತಹ ಸಾಧನೆಗಳನ್ನು ಉಲ್ಲೇಖಿಸಿದ ಅವರು, “ಅಸಾಧ್ಯ”ವೆಂದು ಭಾಸವಾಗುವದೇ ಸಾಧ್ಯವಾಗುತ್ತದೆ ಎಂಬುದಕ್ಕೆ ಇವು ಉದಾಹರಣೆಗಳಾಗಿವೆ ಎಂದು ಹೇಳಿದರು. ನವೀನತೆ ಮತ್ತು ನಿರ್ದೋಷ ಪ್ರಶ್ನಿಸುವ ಮನೋಭಾವ ಕೈಕೈ ಹಿಡಿದು ಸಾಗಬೇಕೆಂದು ಸಲಹೆ ನೀಡಿದರು.
ರಾಷ್ಟ್ರದ ಶಕ್ತಿ ಅದರ ಮಾನವ ಸಂಪನ್ಮೂಲದಲ್ಲಿದ್ದು, ಯುವ ಪದವೀಧರರು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು ಎಂದು ತಿಳಿಸಿದರು. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿ, ಆತ್ಮವಿಶ್ವಾಸ, ಪ್ರಾಮಾಣಿಕತೆ ಮತ್ತು ವೃತ್ತಿಪರ ನೈತಿಕತೆಯೊಂದಿಗೆ ರಾಷ್ಟ್ರಸೇವೆಯಲ್ಲಿ ತೊಡಗಬೇಕೆಂದು ಕರೆ ನೀಡಿದರು.
ಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್ ತನ್ನ ಬದ್ಧತೆಯನ್ನು ಯಶಸ್ವಿಯಾಗಿ ನೆರವೇರಿಸಿಕೊಂಡಿದ್ದು, ತಂತ್ರಜ್ಞಾನ ಸಹಿತ ವಾತಾವರಣದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಜೊತೆಗೆ, ಉನ್ನತ ಮಟ್ಟದ ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆಯೊಂದಿಗೆ ಅವರ ಜ್ಞಾನಕ್ಕೆ ಮೌಲ್ಯವನ್ನು ಸೇರಿಸಿದೆ ಎಂಬುದು ನನಗೆ ತಿಳಿದಿದೆ ಎಂದರು.
ಈ ಪ್ರತಿಷ್ಠಿತ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಲು ನೀವು ಯೋಗ್ಯರಾಗಿರುವಿರಿ ಎಂಬುದರಲ್ಲಿ ನನಗೆ ಪೂರ್ಣ ವಿಶ್ವಾಸವಿದೆ. ಇಂದಿನ ದಿನಗಳಲ್ಲಿ ನಮ್ಮ ದೇಶಕ್ಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ತರಬೇತಿ ಪಡೆದ ಮಾನವ ಸಂಪನ್ಮೂಲ ಅಗತ್ಯವಿದೆ. ತರಬೇತಿ ಪಡೆದ ಮಾನವ ಸಂಪನ್ಮೂಲವೇ ಯಾವುದೇ ರಾಷ್ಟ್ರದ ನಿಜವಾದ ಸಂಪತ್ತು ಎಂದರು.
ನಮ್ಮ ತಾಯಿ ಭೂಮಿ ಸುಮಾರು 12,700 ಕಿಲೋಮೀಟರ್ ವ್ಯಾಸ ಹೊಂದಿದೆ. ಅದು ಸೂರ್ಯನ ಸುತ್ತ ಸರಾಸರಿ ಗಂಟೆಗೆ ಸುಮಾರು 30 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಅಂದರೆ, ಈ ಕ್ಷಣ ನಾವು ಎಲ್ಲರೂ ಬಾಹ್ಯಾಕಾಶದಲ್ಲಿ ಗಂಟೆಗೆ 1,00,000 ಕಿಲೋಮೀಟರ್ಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದರು.
ರೈಟ್ ಸಹೋದರರು ಮನುಷ್ಯರು ಗಾಳಿಯಲ್ಲಿ ಹಾರುವುದು ಅಸಾಧ್ಯವೆಂದು ತಿಳಿಯದೆ ವಿಮಾನವನ್ನು ಕಂಡುಹಿಡಿದರು. ಇದೇ ರೀತಿಯಲ್ಲಿ, ಇಸ್ರೋ ತಂಡವು ಚಂದ್ರಯಾನ, ಮಂಗಳಯಾನ ಮತ್ತು ಆದಿತ್ಯ-ಎಲ್1 ಮಿಷನ್ಗಳಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿತು. ಕಡಿಮೆ ಬಜೆಟ್, ಸೀಮಿತ ಸಮಯ ಮತ್ತು ಸೀಮಿತ ಸಂಪನ್ಮೂಲಗಳ ನಡುವೆಯೂ ಚಂದ್ರ, ಮಂಗಳ ಹಾಗೂ ಸೂರ್ಯನತ್ತ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧ್ಯವಿಲ್ಲವೆಂದು ತಿಳಿಯದೆ ಅವರು ಸಾಧನೆ ಮಾಡಿದರು ಎಂದರು.
ಇತ್ತೀಚೆಗೆ ಚಂದ್ರಯಾನ-3 ಮೂಲಕ ಚಂದ್ರನ ದಕ್ಷಿಣ ಧ್ರುವದ ಸಮೀಪ ಸುರಕ್ಷಿತ ಹಾಗೂ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮಾಡಿ, ಭಾರತೀಯ ವಿಜ್ಞಾನಿಗಳು ಅಲ್ಪ ಬಜೆಟ್ನಲ್ಲಿಯೇ ಮಹಾನ್ ಸಾಧನೆ ಮಾಡಬಲ್ಲರು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಇದು ಕೋಟ್ಯಂತರ ಮನಸ್ಸುಗಳಿಗೆ ಪ್ರೇರಣೆಯಾಗಿತ್ತು. ಸಾರಾಂಶವಾಗಿ ಹೇಳುವುದಾದರೆ, ನಿರ್ದೋಷಿತ್ವ ಮತ್ತು ನವೀನತೆ ಕೈಕೈ ಹಿಡಿದು ಸಾಗುತ್ತವೆ. ಆದ್ದರಿಂದ, ನವೀನತೆ ತರುವವರಾಗಲು ನಿಮ್ಮ ನಿರ್ದೋಷ ಪ್ರಶ್ನಿಸುವ ಮನೋಭಾವವನ್ನು ಕಾಪಾಡಿ ಮತ್ತು ಪೋಷಿಸಿ ಎಂದರು.
ಮಾಜಿ ಕೇಂದ್ರ ಸಚಿವರಾದ ಡಾ. ಜಿ.ಎಂ. ಸಿದ್ದೇಶ್ವರ್ ಅವರು, ಪ್ರತಿ ವರ್ಷದಂತೆ ಜಿಎಂ ವಿಶ್ವವಿದ್ಯಾಲಯದ ೨೦೨೩-೨೦೨೫ನೇ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಎಂಸಿಎ ವಿಭಾಗದಲ್ಲಿ ೯.೭೯ ಸಿಜಿಪಿಎ ಶ್ರೇಣಿ ಪಡೆದ ಸ್ವಾತಿಮುತ್ತು ಎಸ್.ಆರ್ ಮತ್ತು ಎಂಬಿಎ ವಿಭಾಗದಲ್ಲಿ ೯.೩೨ ಸಿಜಿಪಿಎ ಶ್ರೇಣಿ ಪಡೆದ ಸಂಕೇತ್ ಎಸ್ ಇವರುಗಳಿಗೆ ಜಿ. ಮಲ್ಲಿಕಾರ್ಜುನಪ್ಪ ಅವರ ಹೆಸರಿನಡಿಯ ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳು ಭವಿಷ್ಯದಲ್ಲಿ ಬೆಳೆಯಬೇಕೆಂಬ (ಅಭಿವೃದ್ಧಿ ಕಾಣುವ) ಸದಾಶಯದೊಂದಿಗೆ ಅವರ ಶೈಕ್ಷಣಿಕ ಪ್ರಗತಿಗಾಗಿ ನಮ್ಮ ಜಿಎಂಯು ಸಂಸ್ಥೆ ಶ್ರಮಿಸುತ್ತಿದ್ದು, ದಾವಣಗೆರೆ ಸುತ್ತಮುತ್ತಲಿನ ೫-೬ ಜಿಲ್ಲೆಗಳಲ್ಲಿ ಜಿಎಂಯು ಉತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದ ಅವರು, ಬೇರೆ ದೇಶಗಳಲ್ಲಿ ಉದ್ಯೋಗ, ಬೆಳವಣಿಗೆಗಾಗಿ ನೆಲೆ ನಿಂತಿರುವ ಯುವ ಸಮೂಹವು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿದ ತಂದೆ-ತಾಯಿಯ ರಕ್ಷಣೆ ಮರೆಯುವಂತಹ ಸ್ಥಿತಿ ಇದ್ದು, ಅವರ ರಕ್ಷಣೆಯ ಹೊಣೆ ತಮ್ಮ ಮೇಲಿರುವುದನ್ನು ಮರೆಯಬಾರದೆಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಅವರು, ಪದವಿ ಮತ್ತು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಇದೇ ವೇಳೆ ಎಂಬಿಎ ವಿಭಾಗದ 263 ವಿದ್ಯಾರ್ಥಿಗಳು, ಎಂಸಿಎ ವಿಭಾಗದ 44 ವಿದ್ಯಾರ್ಥಿಗಳು ಹಾಗೂ ಎಂಕಾಂ ವಿಭಾಗದ 11 ವಿದ್ಯಾರ್ಥಿಗಳು ಒಟ್ಟು 318 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು.
ಜಿಎಂಯು ಕುಲಪತಿಗಳಾದ ಡಾ. ಎಸ್. ಆರ್. ಶಂಕಪಾಲ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಹ ಕುಲಪತಿಗಳಾದ ಡಾ. ಎಚ್. ಡಿ. ಮಹೇಶಪ್ಪ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋದಿಸಿದರು. ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ. ಎಸ್ ವಂದಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಣೇಶ್ ಜಿ ಟಿಲ್ವೆ ಮುಖ್ಯ ಅತಿಥಿಗಳ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಡಿಆರ್ಡಿಒ ಆಡಳಿತ ಮಂಡಳಿ ಮಾಜಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಕೆ. ದಿವ್ಯಾನಂದ್, ಶ್ರೀಮತಿ ಗಾಯತ್ರಿ ಸಿದ್ದೇಶ್ವರ್, ಜಿಎಂ ವಿಶ್ವವಿದ್ಯಾಲಯದ ಜಿಎಂಬಿಎಸ್ ಡೀನ್ ಡಾ. ಡಿ. ರವಿನಾಥ್, ಜಿಎಂಎಸ್ಎಲ್ ಡೀನ್ ಡಾ. ಬಿ ಎಸ್ ರೆಡ್ಡಿ, ಎಫ್ಸಿಐಟಿ ಡೀನ್ ಡಾ. ಶ್ವೇತಾ ಮರಿಗೌಡರ್, ಎಫ್ಬಿಎಎಸ್ ಡೀನ್ ಡಾ. ಸಂತೋಷ್ ಬಿ ಎಂ, ಎಸ್ಸಿಎಸ್ಟಿ ನಿರ್ದೇಶಕರಾದ ಡಾ. ಸಂಜಯ್ ಪಾಂಡೆ ಎಂ.ಬಿ, ಎಫ್ಇಟಿ ನಿರ್ದೇಶಕರಾದ ಡಾ. ಪ್ರವೀಣ್ ಜೆ, ಸ್ಕೂಲ್ ಆಫ್ ಕಾಮರ್ಸ್ ನಿರ್ದೇಶಕರಾದ ಡಾ. ಶ್ವೇತಾ ಎಚ್ಎಸ್, ಉಪ ಕುಲಸಚಿವರಾದ (ಮೌಲ್ಯಮಾಪನ) ಡಾ. ವೀರಭದ್ರಸ್ವಾಮಿ ಬಿ.ಎನ್, ಡಾ. ನಸ್ರೀನ್ ತಾಜ್ ಎಂ.ಬಿ ಸೇರಿದಂತೆ ವಿವಿಧ ವಿಭಾಗಗಳ ನಿರ್ದೇಶಕರು, ಡೀನ್ ಗಳು, ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.





Leave a comment