Site icon Kannada News-suddikshana

ನಿರ್ಭಯದಿಂದ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಲು, ನಾಯಕರಾಗಲು ಸಾಧ್ಯ: ಜಿ. ಬಿ. ವಿನಯ್ ಕುಮಾರ್

ಜೀವನ

SUDDIKSHANA KANNADA NEWS/DAVANAGERE/DATE:14_10_2025

ದಾವಣಗೆರೆ: ಭಯ ಇದ್ದರೆ ದೂರ ಉಳಿದುಬಿಡುತ್ತೇವೆ. ನೇರವಾಗಿ ಎದುರಿಸುವ, ಬೆಳೆಸುವ ಶಕ್ತಿ ಬೆಳೆಸಿಕೊಂಡಿಲ್ಲ. ಇದು ದುರಂತ. ನಿರ್ಭಯದಿಂದ ಸಾಧನೆಯತ್ತ ಮುನ್ನಡೆದರೆ ಜೀವನದಲ್ಲಿ ನಾಯಕರಾಗಲು ಮತ್ತು ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಗೆಲ್ಲುವವರೆಗೆ ನಿರಂತರ ಪ್ರಯತ್ನ ಇರಬೇಕು. ಸವಾಲಾಗಿ ತೆಗೆದುಕೊಂಡು ಮುನ್ನಡೆದವರು ಇಂದು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.

READ ALSO THIS STORY: ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಅಮಲು ಬರುವ ಸಿರಫ್ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಐವರು ಆರೋಪಿಗಳ ಬಂಧನ!

ದಾವಣಗೆರೆ ಜಿಲ್ಲೆಯ ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವತಿಯಿಂದ ಬಿ.ಕಾಂ, ಬಿ.ಎ ಮತ್ತು ಬಿ.ಸಿ.ಎ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಿರಂತರ ಕಲಿಕೆ, ಶಿಕ್ಷಣ, ಜ್ಞಾನ ತುಂಬಾನೇ ಮುಖ್ಯ ಎಂದು ಪ್ರತಿಪಾದಿಸಿದರು.

ದಿನಕ್ಕೆ 2 ಗಂಟೆಗಳವರೆಗೆ ಇಂಗ್ಲೀಷ್ ಪದ ಕಲಿಯಲು ಶುರು ಮಾಡಿ. ಏಕಾಗ್ರತೆ, ತನ್ಮಯತೆಯಿಂದ ಕಲಿತರೆ ಇಂಗ್ಲೀಷ್ ಭಾಷೆಯಲ್ಲಿ ಪರಿಣಿತರಾಗುವುದು ಖಚಿತ. ಮೂರು ಸಾವಿರ ಇಂಗ್ಲೀಷ್ ಪದಗಳನ್ನು ಕಲಿತರೆ ನೀವು ಇಂಗ್ಲೀಷ್ ಮಾಧ್ಯಮದವರಿಗಿಂತ ಹೆಚ್ಚು ಬುದ್ಧಿಶಾಲಿಯಾಗುತ್ತೀರಿ. ಇದು ಉತ್ಪ್ರೇಕ್ಷೆಯಲ್ಲ. ಇಂಗ್ಲೀಷ್ ಕಲಿಯಲು, ಬರೆಯುವ ಪ್ರಯತ್ನ ಮಾಡಲು ಹೋಗಲ್ಲ. ಇದೇ ನಮ್ಮ ಸಮಸ್ಯೆ. ಭಯದಿಂದಲೇ ನಮಗೆ ಏಕೆ ಬೇಕೆಂದು ದೂರ ಉಳಿಯಬಾರದು. ಧೈರ್ಯದಿಂದ ಮುನ್ನುಗ್ಗಬೇಕು ಎಂದು ಕರೆ ನೀಡಿದರು.

ಬದುಕಿನಲ್ಲಿ ಕಷ್ಟ ಎಂದು ಕೈಕಟ್ಟಿ ಕುಳಿತುಕೊಂಡರೆ ಅಡಿಯಾಳಾಗಿ ಉಳಿದುಬಿಡುತ್ತೇವೆ. ತಂತ್ರಜ್ಞಾನಕ್ಕೆ ತಕ್ಕಂತೆ ಬುದ್ಧಿಮಟ್ಟ ಬೆಳೆಸಿಕೊಳ್ಳದಿದ್ದರೆ ಮನುಷ್ಯರ ಗುಲಾಮರಾಗಲ್ಲ. ಯಂತ್ರಗಳ ಗುಲಾಮರಾಗುತ್ತೇವೆ. ಇಷ್ಟು ವರ್ಷಗಳ ಕಾಲ ನಾವು ತಂತ್ರಜ್ಞಾನ
ನಿಯಂತ್ರಣ ಮಾಡುತ್ತಿದ್ದೆವು. ಕಂಪ್ಯೂಟರ್ ಆಚೆ ಹೊರ ಬಂದು ಮನುಷ್ಯನ ಬುದ್ಧಿ, ಸಾಮರ್ಥ್ಯ ಮೀರಿದಂಥ ತಂತ್ರಜ್ಞಾನ ಈಗ ಬೆಳೆದಿದೆ. ರೊಬೊ ಎಲ್ಲಾ ಕೆಲಸವನ್ನೂ ಮಾಡುತ್ತವೆ. ಕೃಷಿ ಕ್ಷೇತ್ರಕ್ಕೂ ಕಾಲಿಡಲಿದೆ. ಮನುಷ್ಯಕ್ಕಿಂತ ಜಾಸ್ತಿ ರೊಬೊಟ್ಸ್ ಕೆಲಸ ಮಾಡುತ್ತವೆ. ಇನ್ನು ಮುಂದಿನ ಕೇವಲ ಹತ್ತು ವರ್ಷದಲ್ಲಿ ರೊಬೊಟ್ ಮೇಲೆ ನಾವೆಲ್ಲರೂ ಅವಲಂಬಿತರಾಗಿಬಿಡುತ್ತೇವೆ. ಅಮೆರಿಕಾದಲ್ಲಿ ಇದು ಆಗುತ್ತಿದೆ. ಇದು ವಾಸ್ತವ. ಶಿಕ್ಷಣದ ಪಠ್ಯಪುಸ್ತಕ, ಪಠ್ಯೇತರ ಪುಸ್ತಕಗಳು, ಕಲೆ, ಸಾಹಿತ್ಯ ಸೇರಿದಂತೆ ಇತರೆ ಪುಸ್ತಕಗಳನ್ನು ಓದಿ ಪ್ರಪಂಚದ ಜ್ಞಾನ ತಿಳಿದುಕೊಳ್ಳಿ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ಯಾವ್ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ಬಗ್ಗೆ ಈಗಿನಿಂದಲೇ ಚಿಂತಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ಪೀಠಿಕೆಯಲ್ಲಿನ ಅಂಶಗಳು ನಮಗೆ ಸಂಬಂಧವೇ ಇಲ್ಲವೆಂಬಂತೆ ನಾವು ಬದುಕುತ್ತಿದ್ದೇವೆ. ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ. ಸಮಾನತೆ ಮತ್ತು ಸ್ವಾತಂತ್ರ್ಯ ಕೇವಲ ಪುಸ್ತಕಕಷ್ಟೇ ಸೀಮಿತವಾಗಿದೆ. ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಕ್ಕಿದೆಯಾ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಿದೆ. ಅನ್ಯಾಯದ ವಿರುದ್ಧ ಯಾವಾಗ ಮಾತನಾಡಲು ಶುರು ಮಾಡುತ್ತೇವೆಯೋ ಆಗ ನ್ಯಾಯ ಜಯಸುತ್ತೇವೆಂದರ್ಥ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಸಮಾನತೆ ಈಗಲೂ ಇದೆ. ಸರ್ಕಾರಿ ಪ್ರಥಮ ಕಾಲೇಜು ಹಾಗೂ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿ ಬರುವ ವಿದ್ಯಾರ್ಥಿಗಳನ್ನು ಅಕ್ಕಪಕ್ಕ ಕೂರಿಸಿದರೆ ಕನ್ನಡ ಮಾಧ್ಯಮದಲ್ಲಿ ಓದಿದ ಶಾಲೆಯ ಮಕ್ಕಳು ಚುರುಕಾಗಿರುವುದಿಲ್ಲ. ಸರ್ಕಾರವು
ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿಲ್ಲ. ಕೌಶಲ, ಮೂಲಭೂತ ಸೌಲಭ್ಯ ಒದಗಿಸುವ ಇಚ್ಚಾಶಕ್ತಿ ತೋರುತ್ತಿಲ್ಲ. ಹಾಗಾಗಿ ಒಳಗೆ ಕೂಪಮಂಡೂಕರಾಗಿ ವಿದ್ಯಾರ್ಥಿಗಳಿದ್ದು, ನಮ್ಮ ಪರಿಸರದ ಆಚೆಗಿನ ವಿಚಾರಗಳು,
ಅವಕಾಶಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಗುಲಾಮರಾಗಿಬಿಡುತ್ತೇವೆ. ಯುವನಿಧಿ, ಗೃಹಲಕ್ಷ್ಮಿ ಯೋಜನೆಯಡಿ ಈಗ ನೀಡುತ್ತಿರುವ ಹಣ ಮುಂದೆ ಹತ್ತು ಪಟ್ಟಾಗಬಹುದು. ಆದರೆ ಅತ್ಯಂತ ಆಗರ್ಭ ಶ್ರೀಮಂತರಡಿ ಗುಲಾಮರಾಗಿಯೇ ಬದುಕುವಂಥ ಸ್ಥಿತಿ ಮುಂದುವರಿಯುತ್ತದೆ ಅಷ್ಟೇ. ಕರ್ನಾಟಕದ ಆಚೆ ಹೋದಾಗ ಕನ್ನಡಿಗ ಎಂದು ಗುರುತಿಸುತ್ತಾರೆ. ಇದು ನಮ್ಮ ಅಸ್ಮಿತೆ. ಭಾರತದ ದೇಶದ ಆಚೆ ಹೋದರೆ ಭಾರತೀಯ ಎಂದು ಗುರುತಿಸುತ್ತಾರೆ. ಇದನ್ನು ಮೀರಿ ವೈಯಕ್ತಿಕ ಸಾಧನೆ ಮಾಡಬೇಕು. ಇದು ಸಾಧ್ಯವಾಗಬೇಕಾದರೆ ಐಎಎಸ್, ಉದ್ಯಮಿಗಳು, ರಾಜಕಾರಣದ ಯಶಸ್ಸು ಸೇರಿದಂತೆ ನಮ್ಮ ಸಾಮರ್ಥ್ಯದ ಮೇಲೆ ಗುರುತಿಸುವಂತಾಗಬೇಕು. ದಬ್ಬಾಳಿಕೆ ವಿರುದ್ಧ ಸಿಡಿದೇಳಬೇಕಾದರೆ ನಮ್ಮಲ್ಲಿನ ಶಕ್ತಿ, ಮೌಲ್ಯ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಶ್ರೀಮಂತರ ದುರಂಹಕಾರ ಕಡಿಮೆಯಾಗುತ್ತದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್, ಹೊನ್ನಾಳಿ ಹಿರಿಯ ಮುಖಂಡ ರಾಜು ಕಣಗಣ್ಣನವರ್, ಯುವ ಮುಖಂಡ ದಿಡಗೂರು ಸುದೀಪ್, ಅರ್ಥಶಾಸ್ತ್ರ ಅಧ್ಯಾಪಕ ರೇವಣಸಿದ್ದಪ್ಪ, ಅರ್ಥಶಾಸ್ತ್ರದ ಮುಖ್ಯಸ್ಥೆ ಡಾ. ನಮ್ರತಾ, ರಾಜ್ಯಶಾಸ್ತ್ರ ಅಧ್ಯಾಪಕ ಚಂದ್ರಪ, ಅಧ್ಯಾಪಕರಾದ ಗಿರೀಶ್, ನವೀನ್, ಗ್ರಂಥಪಾಲಕ ರಾಜಶೇಖರ ಹಾಗೂ ಕಾಲೇಜಿನ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version