SUDDIKSHANA KANNADA NEWS/DAVANAGERE/DATE:25_11_2025
ದಾವಣಗೆರೆ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಆಭರಣ ತಯಾರಕನ ಬೆದರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರು ಪಿಎಸ್ಐಗಳೂ ಸೇರಿದಂತೆ ಒಟ್ಟು ನಾಲ್ವರನ್ನು ದಾವಣಗೆರೆಯ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
READ ALSO THIS STORY: ಲೋಕಾಯುಕ್ತ ಬಲೆಗೆ ಬಿದ್ದ ಎಪಿಎಂಸಿ ಕೃಷಿ ಮಾರಾಟ ವಿಭಾಗದ ಸಹಾಯಕ ನಿರ್ದೇಶಕ!
ಪಿಎಸ್ಐ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣಕುಮಾರ್ ಬಂಧನಕ್ಕೊಳಗಾದ ಪಿಎಸ್ಐಗಳು. ದರೋಡೆಗೆ ಸಹಕರಿಸಿದ ದಾವಣಗೆರೆಯ ವಿನಾಯಕ ನಗರದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರ್ ಸೆರೆಯಾಗಿದ್ದಾರೆ.
ಘಟನೆ ಹಿನ್ನೆಲೆ:
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಜುಬಾಗ್ ನ ಪದ್ಮನಾಭ ನಗರ ನಿವಾಸಿ ಆಭರಣ ತಯಾರಿಕೆ ಕೆಲಸ ಮಾಡುತ್ತಿದ್ದ ಎಂ. ವಿಶ್ವನಾಥ್ ಅವರನ್ನು ಬೆದರಿಸಿ ದರೋಡೆ ಮಾಡಲಾಗಿತ್ತು. ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ವಿಶ್ವನಾಥ್ ನೀಡುತ್ತಿದ್ದರು. ಚಿನ್ನದ ವ್ಯಾಪಾರಿಗಳ ಬಳಿ ಗಟ್ಟಿ ಚಿನ್ನ, ಉಂಗುರ ಪಡೆದು ಕಾರವಾರಕ್ಕೆ ನವೆಂಬರ್ 24ರಂದು ವಿಶ್ವನಾಥ ಕಾರವಾರಕ್ಕೆ ಹೋಗುತ್ತಿದ್ದರು. ನವೆಂಬರ್ 24ರ ಮಧ್ಯರಾತ್ರಿ 12.30ಕ್ಕೆ ದಾವಣಗೆರೆ ಬಸ್ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ವಿಶ್ವನಾಥ್ ಅವರನ್ನು ಅಡ್ಡಗಟ್ಟಿ ಖಚಿತ ಮಾಹಿತಿ ಮೇರೆಗೆ ವಿಶ್ವನಾಥನನ್ನು ಹಿಂಬಾಲಿಸಿ ಇಬ್ಬರು ಪಿಎಸ್ಐಗಳು ಬಂದಿದ್ದರು.
ಮಫ್ತಿಯಲ್ಲಿ ಬಂದು ಕೊರಳಪಟ್ಟಿ ಹಿಡಿದು ಕೆಳಗಿಳಿಸಿ ತಾವು ಪೊಲೀಸ್ ಅಧಿಕಾರಿಗಳೆಂದು ಬೆದರಿಕೆ ಹಾಕಿದ್ದಾರೆ. ಬಳಿಕ ನೀವು ಪೊಲೀಸ್ ಅಧಿಕಾರಿ ಅಂತಾ ನಾನು ಹೇಗೆ ನಂಬಲಿ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ. ಆಗ ಐಡಿ ತೋರಿಸಿ ಬಸ್ ನಿಲ್ದಾಣದ ಹೊರಗೆ ನಿಂತ ಪೊಲೀಸ್ ಜೀಪ್ನಲ್ಲಿ ಪಿಎಸ್ಐ ಮಾಳಪ್ಪ, ಪ್ರವೀಣಕುಮಾರ್ ಕೂರಿಸಿದ್ದಾರೆ. ಬಳಿಕ ಕೆಟಿಜೆ ನಗರ ಠಾಣೆಯವರೆಗೂ ಪೊಲೀಸ್ ಜೀಪ್ನಲ್ಲಿ ಪಿಎಸ್ಐಗಳು ಕರೆದುಕೊಂಡು ಬಂದಿದ್ದಾರೆ. ಬಳಿಕ ಅಲ್ಲಿಂದ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ವಿಶ್ವನಾಥ್ ಅವರನ್ನು ಪಿಎಸ್ಐಗಳು ಕರೆದೊಯ್ದಿದ್ದಾರೆ
ನಿನ್ನ ಬಳಿ ಇರುವ ಚಿನ್ನದ ಗಟ್ಟಿ, ಆಭರಣ ಕೊಡು ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ತಾನು ಆಭರಣ ತಯಾರಿಸಿ ಕೊಡುವ ಕೂಲಿ ಕೆಲಸ ಮಾಡುತ್ತೇನೆ ಎಂದಿದ್ದ ವಿಶ್ವನಾಥ್ ಅವರಿಗೆ ಬೆದರಿಸಿ 76 ಗ್ರಾಂ ಚಿನ್ನದ ಗಟ್ಟಿ, 2.15 ಗ್ರಾಂ ಬೇಬಿ ರಿಂಗ್ ಅನ್ನು ಬಲವಂತವಾಗಿ ಪಿಎಸ್ಐಗಳು ಕಸಿದುಕೊಂಡಿದ್ದಾರೆ. ಚಿನ್ನದ ಗಟ್ಟಿ, ಬೇಬಿ ಉಂಗುರ ಕಿತ್ತುಕೊಂಡು ಕಾರಿನಲ್ಲಿ ವಿಶ್ವನಾಥನನ್ನು ದಾವಣಗೆರೆ ಬಸ್ ನಿಲ್ದಾಣಕ್ಕೆ ಬಿಟ್ಟಿದ್ದ ಪಿಎಸ್ಐ ಮಾಳಪ್ಪ, ಪ್ರವೀಣ್ ಕುಮಾರ್ ಆ ನಂತರ ಸ್ಥಳದಿಂದ ಕಾಲ್ಕಿತ್ತಿದ್ದರು.
ಊರಿಗೆ ಹೋಗಿ ನಡೆದ ಘಟನೆ ಬಗ್ಗೆ ಕುಟುಂಬದವರಿಗೆ ವಿವರಿಸಿದ್ದಾರೆ. ಬಳಿಕ ದಾವಣಗೆರೆಗೆ ಮರಳಿದ್ದ ವಿಶ್ವನಾಥ್ ಕೆಟಿಜೆ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮಾಡಿ ಪಿಎಸ್ಐ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣಕುಮಾರ್ ಬಂಧಿಸಿದ್ದಾರೆ. ಇಬ್ಬರು ಪಿಎಸ್ಐಗಳಿಗೆ ಮಾಹಿತಿ ನೀಡಿ ಸಹಾಯ ಮಾಡಿದ ಆರೋಪದ ಮೇರೆಗೆ ದಾವಣಗೆರೆ ಮೂಲದ ಇಬ್ಬರು ಆಭರಣ ತಯಾರಕರಾದ ಸತೀಶ್ ರೇವಣ್ಕರ್, ಶಿರಸಿ ಮೂಲದ ನಾಗರಾಜ್ ರೇವಣ್ಕರ್ ನನ್ನೂ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು, ನಕಲಿ ಗನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಟಿಜೆ ನಗರ ಠಾಣೆಯಲ್ಲಿ ತಡರಾತ್ರಿವರೆಗೂ ಇಬ್ಬರು ಪಿಎಸ್ಐಗಳ ವಿಚಾರಣೆ ನಡೆಸಲಾಗಿದೆ. ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರೇ ಭಕ್ಷಕರಾದರೇ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.






Leave a comment