SUDDIKSHANA KANNADA NEWS/DAVANAGERE/DATE:16_12_2025
ಬೆಂಗಳೂರು: ಮಹಾತ್ಮ ಗಾಂಧಿ ಹೆಸರನ್ನಷ್ಟೇ ಅಲ್ಲದೇ, ಅವರ “ಸ್ವರಾಜ್ಯ”ದ ಯೋಚನೆಯನ್ನೂ ಹೊಸಕಿ ಹಾಕಲು ಹೊರಟಿರುವ ಮೋದಿ ಸರ್ಕಾರದ ಬಡ ಜನ ವಿರೋಧಿ ಕ್ರಮದ ವಿರುದ್ಧವಾಗಿ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಹೋರಾಟಕ್ಕೂ ಮುಂದಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ “ಮಹಾತ್ಮ ಗಾಂಧಿ ನರೇಗಾ” ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಮಾನವ ದಿನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿದೆ ಎಂದು ಎಕ್ಸ್ ನಲ್ಲಿ ಆರೋಪಿಸಿದ್ದಾರೆ.
2023-24ರ ಅವಧಿಯಲ್ಲಿ : 14 ಕೋಟಿಗಳಷ್ಟಿದ್ದ ಮಾನವ ದಿನಗಳ ಸಂಖ್ಯೆಯನ್ನು 2024-25ರ ಸಾಲಿನಲ್ಲಿ : 13 ಕೋಟಿಗೆ ಇಳಿಸಲಾಯಿತು, ನಂತರ 2025-26ರ ಸಾಲಿನಲ್ಲಿ : 9 ಕೋಟಿ ಮಾನವ ದಿನಗಳಿಗೆ ಇಳಿಸಿ, ಕಳೆದ ಮೂರು ವರ್ಷಗಳಲ್ಲಿ ಒಟ್ಟು 6 ಕೋಟಿ ಮಾನವ ದಿನಗಳನ್ನು ಕರ್ನಾಟಕ ರಾಜ್ಯಕ್ಕೆ ನಿರಾಕರಿಸಲಾಗಿದೆ ಎಂದು ದೂರಿದ್ದಾರೆ.
ಈ ಯೋಜನೆ ಬಡಜನರ ಔದ್ಯೋಗಿಕ ಹಕ್ಕು. ಕಳೆದ ಮೂರು ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಬರೋಬ್ಬರಿ 80.25 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯಡಿ ಉದ್ಯೋಗ ಒದಗಿಸಲಾಗಿದೆ. ಈ ಪೈಕಿ 25.63 ಲಕ್ಷ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿದ್ದು, 9.48 ಲಕ್ಷ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ
ಎಂದು ಮಾಹಿತಿ ನೀಡಿದ್ದಾರೆ.
ಇಡೀ ರಾಜ್ಯದಲ್ಲಿ 2023ರಿಂದ ಇಂದಿನವರೆಗೆ ಒಟ್ಟು ₹21,411 ವೆಚ್ಚದಲ್ಲಿ 15.94 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳನ್ನು ಸೃಜಿಸಲಾಗಿದೆ. ಇಂತಹ ಕ್ರಾಂತಿಕಾರಕ ಯೋಜನೆಯನ್ನು, ಬಡಜನರ ಔದ್ಯೋಗಿಕ ಹಕ್ಕಿನ ಆಧಾರಿತ ಕಾರ್ಯಕ್ರವನ್ನು ಕೇಂದ್ರ ಸರ್ಕಾರದ ಬೆರಳೆಣಿಕೆ ಅಧಿಕಾರಿಗಳ ಮರ್ಜಿಯ ಆಧಾರಿತ ಕಾರ್ಯಕ್ರಮವನ್ನಾಗಿ ಬದಲಿಸಲು ಹೊರಟಿರುವುದು ಅಕ್ಷಮ್ಯ ಅಪರಾಧವೇ ಹೌದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.





Leave a comment