Site icon Kannada News-suddikshana

ಪ್ರತಿಭಟನೆ ವೇಳೆ ರೈತ ಹೋರಾಟಗಾರನಿಗೆ ಹೃದಯಾಘಾತವಾಗಿ ಸಾವು!

ಹೃದಯಾಘಾತ

SUDDIKSHANA KANNADA NEWS/ DAVANAGERE/DATE:01_09_2025

ದಾವಣಗೆರೆ: ಎನ್ ಬಿ ಎಫ್ ಸಿ ಬ್ಯಾಂಕ್ ಗಳ ಸರ್ಫೇಸಿ ಕಾಯ್ದೆ ದುರುಪಯೋಗವಾಗುತ್ತಿದೆ. ಹಾಗಾಗಿ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕಾಯ್ದೆ ಬದಲಾಯಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವನಹಳ್ಳಿ ಮಂಜುನಾಥ್ ಬಣದಿಂದ ಪ್ರತಿಭಟನೆ ನಡೆಸುವ ವೇಳೆ ರೈತ ಮುಖಂಡರೊಬ್ಬರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೇ ಹೃದಯಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.

READ ALSO THIS STORY: “ಒಳ್ಳೆಯ ಸ್ಥಾನಮಾನಕ್ಕೆಂದು ಬರುವವರ ತಡೆಯಲು ಸಾವಿರಾರು ಪಡೆಗಳಿರುವ ದುಷ್ಟ ಸಮಾಜ ನಮ್ಮದು”: ಜಿ. ಬಿ. ವಿನಯ್ ಕುಮಾರ್ ಬೇಸರ

ಮಲ್ಲಿಗೇನಹಳ್ಳಿ ಹನುಮಂತಪ್ಪ ಮೃತಪಟ್ಟ ರೈತ ಹೋರಾಟಗಾರ. ದಾವಣಗೆರೆಯ ಜಯದೇವ ವೃತ್ತದಲ್ಲಿ ಎನ್ ಬಿ ಎಫ್ ಸಿ ಬ್ಯಾಂಕುಗಳು ಸರ್ಫೇಸಿ ಕಾಯ್ದೆ ಬಳಸಿ ರೈತರಿಗೆ ನೀಡುತ್ತಿರುವ ಕಿರುಕುಳವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಮಲ್ಲಿಗೆನಹಳ್ಳಿ ಹನುಮಂತಪ್ಪನವರು ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಬಾಪೂಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು.

ಸಂಘಟನೆಯ ತಾಲೂಕು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದರು. ದೇವರು ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಹುಚ್ಚುವನಹಳ್ಳಿ ಮಂಜುನಾಥ್ ಅವರು ತಿಳಿಸಿದ್ದಾರೆ.

Exit mobile version