Site icon Kannada News-suddikshana

ಅನಾಥಾಶ್ರಮದಲ್ಲಿ ಅರ್ಥಪೂರ್ಣ ಯುಗಾದಿ, ಜನ್ಮದಿನ ಆಚರಣೆ: ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

SUDDIKSHANA KANNADA NEWS

DAVANAGERE

ದಾವಣಗೆರೆ: ನಗರದ ಖಾಸಗಿ ವಾಹಿನಿ ಜಿಲ್ಲಾ ವರದಿಗಾರ ಮಧು ನಾಗರಾಜ್ ಕುಂದುವಾಡ ಅವರ ಧರ್ಮಪತ್ನಿ ಮಧುರ ಅವರು ನಗರದ ಹೊರ ವಲಯದ ಅನಾಥ ಆಶ್ರಮದಲ್ಲಿ ಯುಗಾದಿ ಹಬ್ಬ ಆಚರಿಸಿ, ಹೋಳಿಗೆ ಊಟದ ವ್ಯವಸ್ಥೆ ಮಾಡಿ ಜನ್ಮದಿನ ಆಚರಿಸಿಕೊಂಡು ಸಾರ್ಥಕತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ದಾವಣಗೆರೆಯ ಹೊರ ವಲಯದಲ್ಲಿರುವ ತುರ್ಚಗಟ್ಟ ಬಳಿ ಇರುವ ಸಾಧನ ವೃದ್ದಾಶ್ರಮದಲ್ಲಿ ಅನಾಥರೊಂದಿಗೆ ಮಧುರ ಇವರು ಯುಗಾದಿ ಹಬ್ಬದ ಜೊತೆಗೆ ಜನ್ಮದಿನ ಆಚರಿಸಿ ಮಾದರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಸಂಸ್ಥಾಪಕಿ ಡಾ. ಪುಷ್ಪಲತಾ ಪವಿತ್ರಾರಾಜ್, ಇಂತಹ ಆಶ್ರಮಗಳು ಉಳಿಯುವುದು ಇಂತಹ ದಾನಿಗಳಿಂದಲೇ. ಮಧು ನಾಗರಾಜ್ ಅವರು ಮಾಧ್ಯಮ ಕ್ಷೇತದಲ್ಲಿ ಬಡವರಿಗೆ, ನಿರ್ಗತಿಕರಿಗೆ, ರೈತರಿಗೆ ನೆರವಾಗುತ್ತಿದ್ದಾರೆ. ಅವರ ಪತ್ನಿ ಮಧುರ ಅವರು ಸಹ ಸಮಾಜ ಸೇವೆ ಮನೋಭಾವನೆ ರೂಢಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

70ರಿಂದ 80 ಮಂದಿಗೆ ಅನಾಥರ ಜೊತೆ ಯುಗಾದಿ ಹಬ್ಬ, ಜನ್ಮದ ದಿನ ಆಚರಿಸಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ. ಎಷ್ಟೇ ಹಣವಿದ್ದರೂ ಸಹಾಯ ಮಾಡಲು ಯಾರು ಮುಂದೆ ಬರುವುದಿಲ್ಲ. ಎಲ್ಲಾ ಅನಾಥರ ಆಶೀರ್ವಾದ ಮಧು ನಾಗರಾಜ್ ಅವರ ದಂಪತಿ ಮೇಲೆ ಇರಲಿದೆ. ದಂಪತಿಯ ಈ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಮಧು ನಾಗರಾಜ್ ಕುಂದುವಾಡ, ಸಣ್ಣ ನಿಂಗಪ್ಪ, ನಿಂಗಪ್ಪ, ನೇತ್ರಮ್ಮ, ಮಾನ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

Exit mobile version