Site icon Kannada News-suddikshana

ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಇಸ್ಪೀಟ್ ಅಡ್ಡೆ ಮೇಲೆ ಸಿಇಎನ್ ದಾಳಿ, 26 ಜನರ ಬಂಧನ – 24.86 ಲಕ್ಷ ರೂ. ವಶ!

SUDDIKSHANA KANNADA NEWS/ DAVANAGERE/ DATE:22-02-2025

ದಾವಣಗೆರೆ (Davanagere): ದಾವಣಗೆರೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 26 ಜನರನ್ನು ಬಂಧಿಸಿರುವ ಸಿಇಎನ್ ಪೊಲೀಸರು 24.86 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ನಗರದ ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ ಮ್ಯಾಂಗೋ ಹೋಟೆಲ್ ನಲ್ಲಿ ಅಂದರ್ ಬಾಹರ್ ಇಸ್ಫೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ (Police) ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್ ಮತ್ತು ಮಂಜುನಾಥ ರವರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ರವರ ನೇತೃತ್ವದಲ್ಲಿ ದಾಳಿ ನಡೆದಿದೆ.

ಪಿ.ಎಸ್.ಐ ಸುನೀಲ್ ಬಿ ತೇಲಿ ಹಾಗೂ ಸಿಬ್ಬಂದಿರವರನ್ನು ಒಳಗೊಂಡ ತಂಡ ಸ್ಥಳಕ್ಕೆ ದಾಳಿ ಮಾಡಿದೆ. ಈ ವೇಳೆ ಅಂದರ್ ಬಾಹರ್ ಇಸ್ಫೀಟ್ ಜೂಜಾಟದಲ್ಲಿ ತೊಡಗಿದ್ದ 26 ಜನರನ್ನು ವಶಕ್ಕೆ ಪಡೆದು ಆರೋಪಿತರಿಂದ ಅಂದರ್ ಬಾಹರ್ ಇಸ್ಫೀಟ್ ಜೂಜಾಟದಲ್ಲಿ ತೊಡಗಿಸಿದ್ದ 24,86,500 ರೂ. ನಗದು ಮತ್ತು ಇಸ್ಫೀಟ್ ಎಲೆಗಳನ್ನು ವಶಕ್ಕೆ ಪಡೆದಿದೆ. ಆರೋಪಿತರ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಲಂ 79,80 ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ* ದಾಖಲಾಗಿದೆ.

ಅಂದರ್ ಬಾಹರ್ ಇಸ್ಫೀಟ್ ಜೂಜಾಟದ ಮೇಲೆ ನಡೆದ ದಾಳಿಯಲ್ಲಿ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ಗೋವಿಂದರಾಜು, ಶಿವಕುಮಾರ, ಅಶೋಕ, ಲೋಹಿತ್, ಉಮೆಶ್, ಅಂಜಿನಪ್ಪ, ನಿಜಲಿಂಗಪ್ಪ, ರವಿಕುಮಾರ, ಲಿಂಗರಾಜು, ಬುಡೇನ್ ವಲಿ, ಸುರೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

ಇಷ್ಟೊಂದು ಮೊತ್ತ ಇಟ್ಟು ಇಸ್ಪೀಟ್ ಆಡುತ್ತಿದ್ದರಿಂದ ಎಸ್ಪಿ ಉಮಾ ಪ್ರಶಾಂತ್ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ 26 ಜನರು ಹಾಗೂ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ದಾವಣಗೆರೆಯಲ್ಲಿ ಇಸ್ಪೀಟ್
ಅಡ್ಡೆಗಳ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಅಕ್ರಮಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.

Exit mobile version