SUDDIKSHANA KANNADA NEWS/ DAVANAGERE/ DATE:28-09-2023
ದಾವಣಗೆರೆ (Davanagere): ಪಿಕ್ನಿಕ್ ಗೆ ತೆರಳಿದ್ದ ತಂದೆ ಮಗ ನೀರಿನಲ್ಲಿ ಮುಳುಗಿ ಸಾವು ಕಂಡ ಘಟನೆ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ನಡೆದಿದೆ.
ಈ ಸುದ್ದಿಯನ್ನೂ ಓದಿ:
ಸೆ. 29ಕ್ಕೆ ದಾವಣಗೆರೆ (Davanagere) ಬಂದ್ ಹಿನ್ನೆಲೆ: ದಾವಣಗೆರೆ ವಿವಿ ಪರೀಕ್ಷೆ ಅ.1ಕ್ಕೆ ಮುಂದೂಡಿಕೆ
ಮಿಟ್ಲಕಟ್ಟೆ ಗ್ರಾಮದ ಚಂದ್ರಪ್ಪ(42), ಮಗ ಶೌರ್ಯ(9) ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ರಜೆ ಹಿನ್ನೆಲೆ ಡ್ಯಾಂ ನೋಡಲು ತೆರಳಿದ್ದ ಅಪ್ಪ ಮಗ ಸಾವು ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇಬ್ಬರು ಮಕ್ಕಳೊಂದಿಗೆ ಡ್ಯಾಂ ನೋಡಲು ಚಂದ್ರಪ್ಪ ಮತ್ತು ಅವರ ಪತ್ನಿ ಬಂದಿದ್ದರು. ಈ ವೇಳೆ ಇಬ್ಬರು ಪುತ್ರರು ನೀರಿನಲ್ಲಿ ಈಜಾಡುತ್ತಿದ್ದರು. ಈ ವೇಳೆ ನೀರಿನ ಸುಳಿಗೆ ಸಿಲುಕಿದ ಇಬ್ಬರು ಪುತ್ರರೂ ಕೊಚ್ಚಿ ಹೋಗುತ್ತಿದ್ದರು.
ಕೂಡಲೇ ಚಂದ್ರಪ್ಪ ಅವರು, ಓರ್ವ ಪುತ್ರನನ್ನು ದಡಕ್ಕೆ ತಂದು ಬಿಟ್ಟರು. ಆದ್ರೆ, ಮತ್ತೊಬ್ಬನನ್ನು ಕಾಪಾಡುವ ವೇಳೆ ಪುತ್ರನೊಂದಿಗೆ ತಂದೆಯೂ ನೀರಿನಲ್ಲಿ ಕೊಚ್ಚಿ ಹೋದರು. ತೀವ್ರ ಅಸ್ವಸ್ಥರಾಗಿದ್ದ ಚಂದ್ರಪ್ಪ ಅವರನ್ನು ಬದುಕಿಸಲು ಆಸ್ಪತ್ರೆಗೆ ಕರೆತರಲಾಯಿತಾದರೂ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶೌರ್ಯನ ಶವಕ್ಕಾಗಿ ಡ್ಯಾಂನಲ್ಲಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ಮುಂದುವರಿಸಿದ್ದಾರೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದರು.