Site icon Kannada News-suddikshana

ಎಲ್ಲಾ ಬ್ಯಾಂಕ್ ಗಳು ಭದ್ರತಾ ಮಾನದಂಡಪಾಲನೆ ಮಾಡುವುದು ಕಡ್ಡಾಯ: ಖಡಕ್ ಸೂಚನೆ ನೀಡಿದ ಉಮಾ ಪ್ರಶಾಂತ್

SUDDIKSHANA KANNADA NEWS/ DAVANAGERE/ DATE:21-01-2025

ದಾವಣಗೆರೆ: ಬ್ಯಾಂಕ್‍ಗಳ ದರೋಡೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಭದ್ರತಾ ಮಾನದಂಡದ ಜೊತೆಗೆ ಸಿಬ್ಬಂದಿಗಳ ಮಾಹಿತಿ ಸಂಗ್ರಹದಲ್ಲಿ ನಿರ್ಲಕ್ಷ್ಯತೆ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ತಿಳಿಸಿದರು.

ಅವರು ಜಿಲ್ಲಾ ಪೋಲಿಸ್ ಕಛೇರಿಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕಗಳ ಭದ್ರತೆಗಾಗಿ ಬ್ಯಾಂಕಿನ ಎಲ್ಲಾ ವ್ಯವಸ್ಥಾಪಕರುಗಳಿಗೆ ಆಯೋಜಿಸಲಾಗಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕಿನ ವ್ಯವಸ್ಥಾಪಕರುಗಳು ಬ್ಯಾಂಕ್‍ಗೆ ಬೇಕಾದ ಹೈಸೆಕ್ಯೂರಿಟಿ ಸಿಸಿ ಕ್ಯಾಮೆರಾಗಳ ಜೊತೆಗೆ ಅಲರಾಮ್‍ಗಳನ್ನು ಅಳವಡಿಸಿಕೊಳ್ಳಬೇಕು. ಬ್ಯಾಂಕ್‍ನ ಸೆಕ್ಯುರಿಟಿ ಸಿಬ್ಬಂದಿಯ ಮಾಹಿತಿ ಸಂಗ್ರಹದ ಜೊತೆಗೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸೆಕ್ಯುರಿಟಿ ಕುರಿತು ಚರ್ಚಿಸಬೇಕಾಗುತ್ತದೆ ಎಂದು ಹೇಳಿದರು.

ಬ್ಯಾಂಕ್‍ನ ಒಳಗೆ ಸ್ಟ್ರಾಂಗ್ ರೂಂ ಡಿಜಿಲಾಕರ್, ಸ್ಟ್ರೋಕ್ ಡಿಟೆಕ್ಟರ್ಗಗಳು, ಹೀಟ್ ಡಿಟೆಕ್ಟರ್‍ಗಳು, ಬ್ಯಾಂಕುಗಳ ಬಳಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಬಂದಲ್ಲಿ ಅಂತಹವರ ಮಾಹಿತಿಯನ್ನು ಪೊಲೀಸ್ ಠಾಣೆಗಳಿಗೆ ನೀಡುವಂತೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತಿಳಿಸಿ ಸ್ಟ್ರಾಂಗ್ ರೂಮ್‍ಗೆ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿದಿನ ಭೇಟಿ ನೀಡುವ ನಮೂನೆಯಲ್ಲಿ ದಾಖಲು ಮಾಡಬೇಕು. ಬ್ಯಾಂಕ್‍ಗಳಿಗೆ ಪ್ರತಿದಿನ ಬೀಟ್ ಪೊಲೀಸರು ಭೇಟಿ ನೀಡುವ ಬಗ್ಗೆ ಇ-ಬೀಟ್ ವ್ಯವಸ್ಥೆ ಮಾಡುವುದು. ಪ್ರತಿ ಬೀಟ್ ಸಿಬ್ಬಂದಿಗಳು ಭೇಟಿ ನೀಡುತ್ತಿರುವ ಬಗ್ಗೆ ರಾತ್ರಿ ಗಸ್ತಿನ ಉಸ್ತುವಾರಿ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ಮಾಡಲು ಸೂಚನೆ ನೀಡಿದರು.

ಜಿಲ್ಲಾ ಕಂಟ್ರೋಲ್ ರೂಂನವರು ಪ್ರತಿದಿನ ಬ್ಯಾಂಕ್‍ಗಳಿಗೆ ಬೀಟ್ ಸಿಬ್ಬಂದಿಗಳು ಹಾಗೂ ರಾತ್ರಿ ಗಸ್ತಿನ ಅಧಿಕಾರಿಗಳು ಭೇಟಿ ನೀಡುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ಪಡೆದು ನಮೂದು ಮಾಡುವುದು. ಹೊರವಲಯಗಳಲ್ಲಿರುವ ಬ್ಯಾಂಕ್‍ಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕೆಂದು ಸೂಚನೆ ನೀಡಿದರು.

ಠಾಣಾ ವ್ಯಾಪ್ತಿಯ ಪಿಐ ಮತ್ತು ಪಿಎಸ್‍ಐ ರವರು ಸೆಕ್ಯೂರಿಟಿ ಆಡಿಟ್ ವರದಿಯನ್ನು ಕಡ್ಡಾಯವಾಗಿ ಪಡೆದು ಜಿಲ್ಲಾ ಪೊಲೀಸ್ ಕಚೇರಿಗೆ ಕಳುಹಿಸಿಕೊಡಬೇಕು. ಬ್ಯಾಂಕುಗಳ ಒಳಭಾಗ ಮತ್ತು ಹೊರಭಾಗದಲ್ಲಿ, ಎಟಿಎಂ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಮೋಷನ್ ಸಿಸಿ ಟಿವಿಗಳನ್ನು ಅಳವಡಿಸಿ ಈ ಛಾಯಾಚಿತ್ರ ಮತ್ತು ರೆಕಾಡಿರ್ಂಗ್‍ನ್ನು ಡ್ರೈವ್‍ನಲ್ಲಿ ಸೇವ್ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಮಹಾಪೌರರಾದ ಚಮನ್‍ಸಾಬ್ ಕೆ, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಉಪ ಪೊಲೀಸ್ ಅಧೀಕ್ಷಕರಾದ ಮಂಜುನಾಥ್, ಎಎಸ್‍ಪಿ ಸ್ಯಾಮ್ ವರ್ಗೀಸ್ ಮತ್ತು ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.

Exit mobile version