Home ದಾವಣಗೆರೆ ದಾವಣಗೆರೆ ದಕ್ಷಿಣ ಉಪಚುನಾವಣೆ: ಟಿಕೆಟ್ ನಿರ್ಧಾರ ನಾನಾಗಲಿ, ಮಲ್ಲಿಕಾರ್ಜುನ್ ಆಗಲಿ ಮಾಡಲ್ಲ – ಜಮೀರ್ ಅಹ್ಮದ್ ಟಾಂಗ್!
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ಉಪಚುನಾವಣೆ: ಟಿಕೆಟ್ ನಿರ್ಧಾರ ನಾನಾಗಲಿ, ಮಲ್ಲಿಕಾರ್ಜುನ್ ಆಗಲಿ ಮಾಡಲ್ಲ – ಜಮೀರ್ ಅಹ್ಮದ್ ಟಾಂಗ್!

Share
ದಾವಣಗೆರೆ
Share

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅಭ್ಯರ್ಥಿಗೆ ಟಿಕೆಟ್ ಕೊಡುವುದು ನಾನಾಗಲೀ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಗಲಿ ಅಲ್ಲ. ಪಕ್ಷದ ಹೈಕಮಾಂಡ್ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಅವರು ಮತ್ತೊಮ್ಮೆ ಟಾಂಗ್ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರು ಟಿಕೆಟ್ ಕೇಳಲೇಬಾರದಾ? ನಮ್ಮ ಹಕ್ಕು ಮಂಡಿಸಬಾರದಾ? ಯಾವ ಕ್ಷೇತ್ರವೂ ನಮ್ಮದಲ್ಲ, ಕಾಂಗ್ರೆಸ್ ಕ್ಷೇತ್ರ. ರಾಜ್ಯದ 224 ಕ್ಷೇತ್ರಗಳಿಗೂ ನಿರ್ಧಾರ ಮಾಡುವುದು ಪಕ್ಷದ ಹೈಕಮಾಂಡ್ ಹೊರೆತು ನಾವ್ಯಾರು ಅಲ್ಲ ಎಂದು ಹೇಳಿದರು.

ಅವರ ಕ್ಷೇತ್ರ ಇವರ ಕ್ಷೇತ್ರ ಎಂಬುದಿಲ್ಲ: 

ಅವರ ಕ್ಷೇತ್ರ ಇವರ ಕ್ಷೇತ್ರ ಎಂಬುದಿಲ್ಲ. ನಾನು ಕಾಂಗ್ರೆಸ್ ಶಿಸ್ತಿನ ಸಿಪಾಯಿ. 224 ಕ್ಷೇತ್ರವೂ ಕಾಂಗ್ರೆಸ್ ಕ್ಷೇತ್ರಗಳೇ. ತೀರ್ಮಾನ ಮಾಡುವುದು ಹೈಕಮಾಂಡ್. ಎಸ್. ಎಸ್. ಮಲ್ಲಿಕಾರ್ಜುನ್ ನನ್ನ ಆತ್ಮೀಯ ಸ್ನೇಹಿತರು. ಸಮಾಜದವರು ಒತ್ತಡ ಹಾಕಬೇಕು ಎಂದಿದ್ದಕ್ಕೆ ನಾನು ಪ್ರಯತ್ನಿಸುತ್ತಿದ್ದೇನೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಶಾಮನೂರು ಶಿವಶಂಕರಪ್ಪರ ಕುಟುಂಬ ಅಂತಲ್ಲ. ಯಾರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ತಿರುಗೇಟು ನೀಡಿದರು.

ನಾವು ಟಿಕೆಟ್ ಕೇಳಲೇಬಾರದಾ? 

ಟಿಕೆಟ್ ನಾನು ಕೊಡಲು ಆಗುತ್ತಾ? ಹೈಕಮಾಂಡ್ ನೀಡುವುದು. ನಾವು ಕೇಳಿದ್ದೇವೆ. ಶಾಮನೂರು ಶಿವಶಂಕರಪ್ಪರು ಇರುವಾಗ 2023ರ ವಿಧಾನಸಭೆ ಚುನಾವಣೆಯೇ ನನ್ನ ಕೊನೆ ಚುನಾವಣೆ ಎಂದಿದ್ದರು. ಮುಂದಿನ ಚುನಾವಣೆಯಲ್ಲಿ ನಾನೇ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುತ್ತೇನೆಂದು ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಹಳ ಜನರು ನನ್ನ ಬಳಿ ಬಂದಿದ್ದರು. ಕ್ಷೇತ್ರದಲ್ಲಿ 80ಸಾವಿರ ಮತಗಳು ಅಲ್ಪಸಂಖ್ಯಾತ ಸಮುದಾಯದ್ದು ಇದೆ. ಹಾಗಾಗಿ, ಟಿಕೆಟ್ ಅಲ್ಪಸಂಖ್ಯಾತರಿಗೆ ಕೊಡಿಸಿ ಎಂದು ಕೇಳಿದ್ದಾರೆ. ನಾವು ಟಿಕೆಟ್ ಕೇಳಲೇಬಾರದಾ ಎಂದು ಪ್ರಶ್ನಿಸಿದರು.

ನನ್ನ ಬಿಟ್ಟು ಯಾರ ಬಳಿ ಹೋಗಿ ಕೇಳಬೇಕು? 

ಅಲ್ಪಸಂಖ್ಯಾತ ನಾಯಕ ನಾನು. ನನ್ನನ್ನು ಬಿಟ್ಟು ಯಾರ ಬಳಿ ಹೋಗಿ ಕೇಳುತ್ತಾರೆ? ನನ್ನ ಹತ್ತಿರ ತಾನೇ ಬರಬೇಕು. ನಾನು ವರದಿಯನ್ನು ಹೈಕಮಾಂಡ್ ಗೆ ಕೊಡುತ್ತೇನೆ. ಪಕ್ಷದ ಹಿರಿಯ ನಾಯಕರು, ವರಿಷ್ಠರು ನಿರ್ಧರಿಸುತ್ತಾರೆ. ಹಾಗಾಗಿ, ಅವರವರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಟಿಕೆಟ್ ಕೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.

ಮುಸ್ಲಿಂರಿಗೆ ಹೈಕಮಾಂಡ್ ಬಿಫಾರಂ ಕೊಟ್ಟಿತ್ತು:

ನಾನು ಸ್ಪರ್ಧೆ ಮಾಡುವ ಕ್ಷೇತ್ರಕ್ಕೆ ಬಂದು ಅಲ್ಪಸಂಖ್ಯಾತರು ಕ್ಷೇತ್ರ ಬಿಟ್ಟುಕೊಡಿ ಎಂದರೆ ಬಿಟ್ಟುಕೊಡುತ್ತೇನೆ. ಈ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಸೈಯದ್ ಸೈಫುಲ್ಲಾ ಅವರಿಗೆ ಬಿ ಫಾರಂ ನೀಡಿತ್ತು. ಅಲ್ಪಸಂಖ್ಯಾತರಿಗೆ ಮನ್ನಣೆ ಕೊಟ್ಟಿತ್ತು. ಅಜ್ಜ ಗಟ್ಟಿಮುಟ್ಟಾಗಿದ್ದರು. ಇಷ್ಟು ಬೇಗ ಹೋಗ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ವಸತಿ ಇಲಾಖೆಯಲ್ಲಿನ ಕೆಲಸಗಳನ್ನು ನನ್ನ ಬಳಿ ಬಂದು ಮಾಡಿಸಿಕೊಂಡು ಹೋಗುತ್ತಿದ್ದರು. ಅವರು ಇಷ್ಟು ಬೇಗ ಹೋಗುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅನಿರೀಕ್ಷಿತವಾಗಿ ಉಪಚುನಾವಣೆ ಬಂದಿದೆ. ಎಲ್ಲರೂಒಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಜಮೀರ್ ಅಹ್ಮದ್ ಹೇಳಿದರು.

Share

Leave a comment

Leave a Reply

Your email address will not be published. Required fields are marked *