ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಸರಣಿ ಕಳ್ಳತನ, ಕೊಲೆ ಮತ್ತು ಡಕಾಯಿತಿಯಂತಹ ಗಂಭೀರ ಪ್ರಕರಣಗಳನ್ನು ಭೇದಿಸುವಲ್ಲಿ ದಾವಣಗೆರೆ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನ್ಯಾಮತಿ, ಚನ್ನಗಿರಿ, ಸಂತೇಬೆನ್ನೂರು ಹಾಗೂ ಕೆಟಿಜೆ ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 8 ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು, 11 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
534.76 ಗ್ರಾಂ ಬಂಗಾರದ ಆಭರಣಗಳು ವಶ:
ಬಂಧಿತರಿಂದ ಒಟ್ಟು 534.76 ಗ್ರಾಂ ಬಂಗಾರದ ಆಭರಣಗಳು, 639.56 ಗ್ರಾಂ ಬೆಳ್ಳಿ ಆಭರಣಗಳು, ಒಂದು ದುಬಾರಿ ಅರ್ಮಾನಿ ಎಕ್ಸ್ ಚೆಂಚ್ ವಾಚ್ ಮತ್ತು ಒಂದು ಜಾನುವಾರು ಸೇರಿದಂತೆ ಒಟ್ಟು ಅಂದಾಜು 70.61 ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಚನ್ನಗಿರಿ ಕೇಸ್:
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಹೆಚ್. ಟಿ. ಶೇಖರ್ ಅವರು, ಚನ್ನಗಿರಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಕುಖ್ಯಾತ ಕಳ್ಳರ ತಂಡ ಸೇರಿ ನಾಲ್ವರ ಬಂಧಿಸಿದ್ದು. ರೂ. 18 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದೆ
ಎಂದು ಮಾಹಿತಿ ನೀಡಿದರು.
ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಒಂಟಿ ಮನೆಯಲ್ಲಿ ವೃದ್ಧ ದಂಪತಿ ದರೋಡೆ ಮಾಡಿದ್ದ ಐವರು ಅಂತಾರಾಜ್ಯ ದರೋಡೆಕೋರರ ಸೆರೆ ಹಿಡಿಯಲಾಗಿದ್ದು, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು
ತಿಳಿಸಿದರು.
ಕೆಟಿಜೆ ನಗರ ಪೊಲೀಸರ ಕಾರ್ಯಾಚರಣೆ:
ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಕಳ್ಳತನ ಮಾಡಿದ್ದ 72 ಗಂಟೆಯೊಳಗೆ ಬಂಧಿಸಲಾಗಿದ್ದು, ಬಂಧಿತನಿಂದ ರೂ. 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈತ
ಖತರ್ನಾಕ್ ಖದೀಮನಾಗಿದ್ದು, ಈತನ ಮೇಲೆ ಒಟ್ಟು 19 ಹಗಲು ವೇಳೆ ಕಳ್ಳತನ ಮಾಡಿದ್ದ ಕೇಸ್ ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ನ್ಯಾಮತಿ ಕೊಲೆ ಕೇಸ್ ಆರೋಪಿ ಬಂಧನ:
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ 64 ವರ್ಷದ ವೃದ್ಧೆ ಕಮಲಮ್ಮ ಕತ್ತು ಹಿಸುಕಿ ಕೊಂದಿದ್ದ ಆರೋಪಿ ಬಂಧಿಸಲಾಗಿದೆ. ಈತ ಆನ್ ಲೈನ್ ಗೇಮ್ ಚಟಕ್ಕೆ ಬಲಿಯಾಗಿದ್ದ. ಸಾಲ ತೀರಿಸಲು ಒಂಟಿ ವೃದ್ಧೆ ಕೊಲೆ ಮಾಡಿ ಆಭರಣ ದೋಚಿದ್ದ . ಬಂಧಿತನಿಂದ ರೂ. 8.44 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.





Leave a comment