ದಾವಣಗೆರೆ: ನಗರದ ಹಳೇ ಕುಂದುವಾಡ ಮುಖ್ಯ ರಸ್ತೆಯಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ವಿವಾದಕ್ಕೆ ಕೊನೆಗೂ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.
ಬಿಂದಾಸ್ ಬಾರ್ ಹಾಗೂ ಶಿವಗಂಗಾ ಕಲ್ಯಾಣ ಮಂಟಪದ ಎದುರಿನ ವಿವಾದಿತ ಜಾಗದಲ್ಲಿ ಪಾಲಿಕೆಯು ಸಿಸಿ ರಸ್ತೆ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಘಟನೆಯ ಹಿನ್ನೆಲೆ:
ಈ ಹಿಂದೆ ಟ್ರ್ಯಾಕ್ಟರ್ ಶೋ ರೂಂ ಮಾಲೀಕರು “ಈ ಜಾಗ ನನಗೆ ಸೇರಿದ್ದು” ಎಂದು ರಸ್ತೆಗೆ ತಂತಿ ಬೇಲಿ ಹಾಕಿದ್ದರು. ಇದರಿಂದ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಮಳೆ ಬಂದಾಗ ರಸ್ತೆಯಲ್ಲೇ ನೀರು ಹರಿಯುತ್ತಿದ್ದುದರಿಂದ ಸಾರ್ವಜನಿಕರು ಹೈರಾಣಾಗಿದ್ದರು.
ಗ್ರಾಮಸ್ಥರ ಸಂಘಟಿತ ಹೋರಾಟ:
ಸಮಸ್ಯೆ ಬಗೆಹರಿಸುವಂತೆ ಹಳೇ ಕುಂದುವಾಡ ಗ್ರಾಮಸ್ಥರು ಹಲವು ಬಾರಿ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಸ್ಪಂದಿಸದಿದ್ದಾಗ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ್ದಲ್ಲದೆ, ತಂತಿ ಬೇಲಿಯನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಧಿಕಾರಿಗಳ ದಿಟ್ಟ ಕ್ರಮ:
ಗ್ರಾಮಸ್ಥರ ಆಕ್ರೋಶ ಹಾಗೂ ಮಾಧ್ಯಮಗಳ ವರದಿಗಾರಿಕೆಗೆ ಎಚ್ಚೆತ್ತ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ರೇಣುಕಾ ಅವರು ವಿವಾದಿತ ಜಾಗದ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿ, ಎರಡು ಹಂತಗಳಲ್ಲಿ ಸಿಸಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಮುಂದಿನ ಒತ್ತಾಯ:
ವಿವಾದಿತ ರಸ್ತೆ ಪೂರ್ಣಗೊಂಡಿದ್ದರೂ, ಕುಂದುವಾಡ ಕೆರೆ ಸಮೀಪದ ಮುಖ್ಯ ರಸ್ತೆಯಲ್ಲಿ ಮತ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಈ ರಸ್ತೆಯ ಕಾಮಗಾರಿ ಈಗಾಗಲೇ ಟೆಂಡರ್ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.





Leave a comment