Site icon Kannada News-suddikshana

ದಾವಣಗೆರೆ ಉತ್ತರಕ್ಕೆ ಕೇಸರಿ ಕಲಿ ಯಾರು: ಟಿಕೆಟ್ ಗೆ ಪಡೆಯಲು ನಡೀತಿದೆ ಪೈಪೋಟಿ…!

SUDDIKSHANA KANNADA NEWS/ DAVANAGERE

DATE: 01-04-2023

ದಾವಣಗೆರೆ: ದಾವಣಗೆರೆ ಉತ್ತರ (DAVANAGERE NORTH) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಯಾರಾಗ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಕಾಂಗ್ರೆಸ್ ನಿಂದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ (MALLIKARJUN) ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದ್ದು, ಎಸ್. ಎ. ರವೀಂದ್ರನಾಥ್ ಅವರಿಗೆ ವಯಸ್ಸು ಆಗಿರುವ ಹಾಗೂ ಆರೋಗ್ಯ ಸಮಸ್ಯೆಯಿಂದ ಸ್ಪರ್ಧಿಸುವುದು ಅನುಮಾನ. ಹಾಗಾಗಿ, ಉಳಿದವರು ಟಿಕೆಟ್ ಗೆ ತೀವ್ರ ಪೈಪೋಟಿ ಹಾಗೂ ಲಾಬಿ ನಡೆಸತೊಡಗಿದ್ದಾರೆ.

ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಸ್. ಟಿ. ವೀರೇಶ್ (S. T. VEERESH), ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಜೀವನ್ ಮೂರ್ತಿ, ಕೆ. ಎಂ. ಸುರೇಶ್ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದ್ರೆ, ಮೂವರಲ್ಲಿ ತೀವ್ರ ಪೈಪೋಟಿಗೆ ಏರ್ಪಟ್ಟಿದೆ.

S. T. VEERESH

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆಯಷ್ಟೇ ದಾವಣಗೆರೆ (DAVANAGERE) ಗೆ ಆಗಮಿಸಿ ವೋಟಿಂಗ್ ನಡೆಸಿದ್ದಾರೆ. ಆರ್ ಎಸ್ ಎಸ್ (RSS)  ಕಟ್ಟಾ ಕಾರ್ಯಕರ್ತರಾದ ವೀರೇಶ್, ಬಿಜೆಪಿಗೆ ದುಡಿದಿರುವ ಜಗದೀಶ್, ರೈತ ಮೋರ್ಚಾ ಮೂಲಕ ಗಮನ ಸೆಳೆದಿರುವ ಲೋಕಿಕೆರೆ ನಾಗರಾಜ್, ಬಿಜೆಪಿ ಹಿರಿಯ ಮುಖಂಡ ಜೀವನ್ ಮೂರ್ತಿ ಅವರ ಹೆಸರು ಚಾಲ್ತಿಯಲ್ಲಿದೆ.

B. S. JAGADEESH

ಚುನಾವಣೆಗೆ ಉಳಿದಿರುವುದು ಇನ್ನು ಕೆಲವೇ ದಿನಗಳಷ್ಟೇ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಘೋಷಿಸುತ್ತದೆಯಾ ಎಂಬ ಕುತೂಹಲವೂ ಗರಿಗೆದರಿದೆ. ನಾಯಕರು ಮಾತ್ರ ಟಿಕೆಟ್ (TICKET) ಪಡೆಲು ಶತಾಯಗತಾಯ ಯತ್ನ ಮುಂದುವರಿಸಿದ್ದಾರೆ. ಮತ್ತೊಂದೆಡೆ ರವೀಂದ್ರನಾಥ್ (RAVINDRANATH) ಅವರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಸಂಸದ ಜಿ. ಎಂ. ಸಿದ್ದೇಶ್ವರ ಅಥವಾ ಅವರ ಪುತ್ರ ಅನಿತ್ ಅವರ ಹೆಸರೂ ಸಹ ಕೇಳಿ ಬರುತ್ತಿದೆ. ಆದ್ರೆ, ಯಾರು ಮಲ್ಲಿಕಾರ್ಜುನ್ ಅವರ ವಿರುದ್ಧ ಯಾರು ಕಣಕ್ಕಿಳಿಯುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

S. S. MALLIKARJUN

2013ರಲ್ಲಿ ಬಿಜೆಪಿ (BJP)ಯ ಎಸ್. ಎ. ರವೀಂದ್ರನಾಥ್ ಅವರ ವಿರುದ್ಧ ಮಲ್ಲಿಕಾರ್ಜುನ್ ಭಾರೀ ಅಂತರದಲ್ಲಿ ಜಯಗಳಿಸಿದ್ದರು. ಆದ್ರೆ, 2018ರಲ್ಲಿ ಕಾಂಗ್ರೆಸ್ (CONGRESS) ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ್ ವಿರುದ್ಧ ಎಸ್. ಎ. ರವೀಂದ್ರನಾಥ್ ಜಯಭೇರಿ ಬಾರಿಸಿದ್ದರು. ಸಚಿವರಾಗಿದ್ದ ಮಲ್ಲಿಕಾರ್ಜುನ್ ಅವರ ವಿರುದ್ಧ ವಿರೋಚಿತ ಗೆಲುವು ಸಾಧಿಸಿದ್ದರು. ಆದ್ರೆ, ಈಗ ಪರಿಸ್ಥಿತಿ ಬದಲಿದೆ. ಮಲ್ಲಿಕಾರ್ಜುನ್ ಅವರು ಸಹ ಈ ಬಾರಿಯ ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದಾರೆ. ಮತ್ತೆ ಕೈ ಕಿಲಕಿಲ ಅನ್ನುವಂತೆ ಮಾಡುವ ಪಣ ತೊಟ್ಟಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ಬಿಜೆಪಿಯು ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಿ ಮಲ್ಲಿಕಾರ್ಜುನ್ ರನ್ನು ಸೋಲಿಸಬೇಕೆಂಬ ರಣತಂತ್ರ ಹೆಣೆದಿದೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಆದ ಬಳಿಕ ರವೀಂದ್ರನಾಥ್ ಅವರೇ ಕಣಕ್ಕಿಳಿಯುತ್ತಿದ್ದರು. ಆದ್ರೆ, ಈ ಬಾರಿ ಬೇರೆಯವರಿಗೆ ಟಿಕೆಟ್ ನೀಡುವುದು ಖಚಿತ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳುತ್ತಿದ್ದರೂ, ಎಸ್. ಎ. ರವೀಂದ್ರನಾಥ್ ಅವರು ಯಾರಿಗೆ ತಮ್ಮ ಬೆಂಬಲ ಸೂಚಿಸುತ್ತಾರೆ ಎಂಬ ಕುತೂಹಲದ ಜೊತೆಗೆ ಆಕಾಂಕ್ಷಿಗಳ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್,ಮಾಜಿ‌ ಮೇಯರ್ ಎಸ್ .ಟಿ. ವೀರೇಶ್, ಬಿಜೆಪಿ ರೈತಮುಖಂಡ ಲೋಕಿಕೆರೆ ನಾಗರಾಜ್ ಹಾಗೂ ದಾವಣಗೆರೆ- ಹರಿಹರ ಬ್ಯಾಂಕ್ ನ ನಿರ್ದೇಶಕ ಎನ್.ಎ. ಮುರುಗೇಶ್, ಜೀವನ್ ಮೂರ್ತಿ ಸೇರಿದಂತೆ ಹಲವು ಆಕಾಂಕ್ಷಿಗಳು ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಎಂಬುದು ಕೆಲ ದಿನಗಳಲ್ಲೇ ಗೊತ್ತಾಗಲಿದೆ.

ಕೆಲ ಆಕಾಂಕ್ಷಿಗಳು ಪಕ್ಷದ ವರಿಷ್ಠರ ಮೂಲಕ ತಮಗೆ ಟಿಕೆಟ್ ನೀಡಬೇಕು ಎಂಬ ಒತ್ತಡವನ್ನೂ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಈಗಾಗಲೇ ವರಿಷ್ಠರು  ಆಕಾಂಕ್ಷಿಗಳ ಬಗ್ಗೆ ವರದಿ ಪಡೆದಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

Exit mobile version