ದಾವಣಗೆರೆ: ದಾವಣಗೆರೆ ನಗರವು ಮಾರ್ಚ್ 4 ರಂದು ಅಪರೂಪದ ಆಧ್ಯಾತ್ಮಿಕ ಘಟನೆಗೆ ಸಾಕ್ಷಿಯಾಗಲಿದೆ. ಭೌತಿಕ ಸುಖ-ಸಂತೋಷಗಳನ್ನು ತ್ಯಜಿಸಿ, ಜೈನ ಧರ್ಮದ ಅತ್ಯುನ್ನತ ಸನ್ಯಾಸತ್ವ ದೀಕ್ಷೆಯನ್ನು ಸ್ವೀಕರಿಸಲು ದಾವಣಗೆರೆಯ ನಾಲ್ವರು ಸಜ್ಜಾಗಿದ್ದಾರೆ. ಪರಮಪೂಜ್ಯ ಆಚಾರ್ಯ ಶ್ರೀ ಅಭಯ್ ಶೇಖರ್ ಸುರೀಶ್ವರ್ ಜೀ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಈ ದೀಕ್ಷಾ ವಿಧಿಗಳು ನೆರವೇರಲಿವೆ.
ವೈರಾಗ್ಯದ ಹಾದಿಯಲ್ಲಿ ಸುಶಿಕ್ಷಿತರು ಮತ್ತು ಉದ್ಯಮಿಗಳು:
ದೀಕ್ಷೆ ಸ್ವೀಕರಿಸುತ್ತಿರುವವರಲ್ಲಿ ಪುಣೆಯ ಸಿಂಬೋಸಿಸ್ನಿಂದ MBA ಮುಗಿಸಿರುವ ಮುಮುಕ್ಷು ಕ್ರುನಾಲಿ ಬೇನ್ (30), B.Com ಪದವೀಧರೆ ಮುಮುಕ್ಷು ದೀಕ್ಷಿತ ಬೇನ್ (28) ಸೇರಿದ್ದಾರೆ. ಇನ್ನು ವಿಶೇಷವೆಂದರೆ, ದಾವಣಗೆರೆಯ ಹೆಸರಾಂತ ಲಲಿತ್ ಗಾರ್ಮೆಂಟ್ಸ್ ಮಾಲೀಕರಾದ ಮುಮುಕ್ಷು ಭರತ್ ಜೈನ್ (52) ಹಾಗೂ ಅವರ ಧರ್ಮಪತ್ನಿ ಮುಮುಕ್ಷು ಆರತಿ ಬೇನ್ (50) ದಂಪತಿಗಳೂ ಸಹ ಸನ್ಯಾಸತ್ವಕ್ಕೆ ಮೊರೆ ಹೋಗುತ್ತಿದ್ದಾರೆ.
ದೀಕ್ಷೆ ಸ್ವೀಕರಿಸುತ್ತಿರುವ ಮುಮುಕ್ಷುಗಳ ವಿವರ:
ಮುಮುಕ್ಷು ಕ್ರುನಾಲಿ ಬೇನ್ (30 ವರ್ಷ): ಪುಣೆಯ ಸಿಂಬೋಸಿಸ್ ಕಾಲೇಜಿನ MBA ಪದವೀಧರೆ. ಶ್ರೀ ಕಮಲೇಶ್ ಜೈನ್ ಹಾಗೂ ಶ್ರೀಮತಿ ಬಬಿತಾ ಜೈನ್ ಅವರ ಪುತ್ರಿ.
ಮುಮುಕ್ಷು ದೀಕ್ಷಿತ ಬೇನ್ (28 ವರ್ಷ): ದಾವಣಗೆರೆಯ B.Com ಪದವೀಧರೆ. ಶ್ರೀ ಅರುಣ್ ಕುಮಾರ್ ಜೈನ್ ಹಾಗೂ ಶ್ರೀಮತಿ ಅನ್ನಪೂರ್ಣ ಬಾಯಿ ಅವರ ಪುತ್ರಿ.
ಮುಮುಕ್ಷು ಭರತ್ ಜೈನ್ (52 ವರ್ಷ): ದಾವಣಗೆರೆಯ ಉದ್ಯಮಿ (ಲಲಿತ್ ಗಾರ್ಮೆಂಟ್ಸ್). ವಿಶೇಷವೆಂದರೆ, ಇವರ ಇಬ್ಬರು ಪುತ್ರರು ಈಗಾಗಲೇ ಜೈನ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ.
ಮುಮುಕ್ಷು ಆರತಿ ಬೇನ್ (50 ವರ್ಷ): ಮುಮುಕ್ಷು ಭರತ್ ಜೈನ್ ಅವರ ಧರ್ಮಪತ್ನಿ.
ಪತಿ-ಪತ್ನಿಯರಿಬ್ಬರೂ ಜೊತೆಯಾಗಿ ವೈರಾಗ್ಯದ ಹಾದಿ ಹಿಡಿಯುತ್ತಿರುವುದು ಅಪರೂಪದ ಸಂಗತಿ.
ಭರತ್ ಜೈನ್ ಅವರ ಇಬ್ಬರು ಪುತ್ರರು ಈಗಾಗಲೇ ಮೂರು ವರ್ಷಗಳ ಹಿಂದೆಯೇ ದೀಕ್ಷೆ ಪಡೆದು ಮುನಿಗಳಾಗಿರುವುದು ಗಮನಾರ್ಹ.
ಮೂರು ದಿನಗಳ ಕಾರ್ಯಕ್ರಮದ ವಿವರ:
ಮಾರ್ಚ್ 2 (ರಾತ್ರಿ 8ಗಂಟೆ):
ಬಿಳ್ಕೊಡುಗೆ ಸಮಾರಂಭ (ಸ್ಥಳ: ಬಾಳೆಹೊನ್ನೂರು ತೋಟದ ಆವರಣ, ಅರುಣಾ ಟಾಕೀಸ್ ಎದುರು).
ಮಾರ್ಚ್ 3 (ಬೆಳಗ್ಗೆ 9 ಗಂಟೆ):
ಚೌಕಿಪೇಟೆಯ ಶ್ರೀ ಸುಪಾರ್ಶ್ವನಾಥ್ ಜೈನ ದೇವಸ್ಥಾನದಿಂದ ಹಂಸ್ಭಾವಿ ಸರ್ಕಲ್, ಚಾಮರಾಜಪೇಟೆ, ಮಂಡಿಪೇಟೆ ಮುಖಾಂತರ ರೇಣುಕಾ ಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.
ಮಾರ್ಚ್ 4 ಬೆಳಗ್ಗೆ 6 ಗಂಟೆಗೆ ಬಾಳೆಹೊನ್ನೂರು ತೋಟದ ಆವರಣದಲ್ಲಿ ಅಧಿಕೃತ ದೀಕ್ಷಾ ಸ್ವೀಕೃತಿ ವಿಧಿವಿಧಾನಗಳು ನೆರವೇರಲಿವೆ.
ಶ್ರೀ ಸುಪಾರ್ಶ್ವನಾಥ ಜೈನ್ ಶ್ವೇತಾಂಬರ ಮೂರ್ತಿ ಪೂಜ್ಯಕ ಸಂಘವು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಲು ವಿನಂತಿಸಿದೆ.









Leave a comment