ಬೆಂಗಳೂರು: “ಕಾಂಗ್ರೆಸ್ ಪಕ್ಷವೇ ನಮಗೆ ಮುಖ್ಯ. ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು. ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ನಮಗೆ ನಮ್ಮ ಪಕ್ಷ, ಕಾರ್ಯಕರ್ತರು, ಸಿದ್ದಾಂತದ ಮೇಲೆ ದೊಡ್ಡ ನಂಬಿಕೆಯಿದೆ. ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಬೇಕು ಎಂದು ಯುವ ಶಾಸಕರಾದ ರಿಜ್ವಾನ್ ಹರ್ಷದ್ ಹಾಗೂ ಸಲೀಂ ಅಹಮದ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಅವರು ಯಶಸ್ವಿಯಾಗಿ ಮನವೊಲಿಸಿದ್ದಾರೆ” ಎಂದರು.
“ನಾಮಪತ್ರ ವಾಪಸ್ ಪಡೆಯಲು ಕಡಿಮೆ ಸಮಯ ಇದ್ದ ಕಾರಣಕ್ಕೆ ಹಿಂಪಡೆಯಲು ಆಗಲಿಲ್ಲ. ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಾದಿಕ್ ಪೈಲ್ವಾನ್ ಅವರು ಮಾತನಾಡಿ, ‘ನಾನು ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ. ಪಕ್ಷ ಬೆಳೆಸಿದ್ದೇನೆ. ನನ್ನ ಮಗ ಯೂತ್ ಕಾಂಗ್ರೆಸ್ ಅಧ್ಯಕ್ಷ, ತಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ’ ಎಂದು ಹೇಳಿದರು” ಎಂದರು.
“ಅವಕಾಶ ನೀಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ಏಕೆಂದರೆ ಕಳೆದ 40 ವರ್ಷದಿಂದ ಪಕ್ಷದ ಕೆಲಸ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹಾಗೂ ಸಾದಿಕ್ ಅವರು ರಾಮ ಲಕ್ಷ್ಮಣರಂತೆ ಒಟ್ಟಿಗೆ ಕೆಲಸ ಮಾಡಿದ್ದಾರೆ” ಎಂದರು.
“ನನ್ನ ಪಕ್ಷಕ್ಕೆ ನಾನು ದ್ರೋಹ ಮಾಡುವುದಿಲ್ಲ. ಕಾಂಗ್ರೆಸ್ಸಿಗನಾಗಿ ನಾನು ಇರುತ್ತೇನೆ ಎಂದು ಸಾದಿಕ್ ಅವರು ಹೇಳಿದ್ದಾರೆ. ಎಲ್ಲಾ ನಾಯಕರ ಪರವಾಗಿ ಸಾದಿಕ್ ಅವರಿಗೆ ಅಭಿನಂದಿಸುತ್ತೇನೆ. ಪಕ್ಷ ಯಾವಾಗಲೂ ಅವರ ನಿಯತ್ತು, ಶಿಸ್ತು, ತ್ಯಾಗಕ್ಕೆ ಗೌರವ ಸಲ್ಲಿಸುತ್ತದೆ. ಅವರಿಗೆ ಮತ್ತೆ ಪಕ್ಷದ ಶಾಲು ಹಾಕುವ ಅವಶ್ಯಕತೆ ಇಲ್ಲ ಏಕೆಂದರೆ. ಅವರ ಹೃದಯದಲ್ಲಿ ಕಾಂಗ್ರೆಸ್ ಪಕ್ಷವಿದೆ” ಎಂದರು.
ಶಿವಶಂಕರಪ್ಪರಿಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲುವು
ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುತ್ತವೆಯೇ ಎಂದು ಕೇಳಿದಾಗ, “ಯಾವುದೇ ಕಾರಣಕ್ಕೂ ವಿಭಜನೆ ಆಗುವುದಿಲ್ಲ. ಬೇರೆ ಸಮುದಾಯಗಳೂ ಆಗುವುದಿಲ್ಲ. ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳ ಅಂತರದಿಂದ ಅವರ ಮೊಮ್ಮಗ ಸಮರ್ಥ್ ಗೆಲ್ಲುತ್ತಾರೆ. ಅವರು ಸಾಕಿದಂತಹ ಮಗ. ಗೆಲ್ಲುತ್ತಾನೆ ಎನ್ನುವ ವಿಶ್ವಾಸವಿದೆ. ದಾವಣಗೆರೆಗೆ ಕೊಡುಗೆಯನ್ನು ಇಡೀ ರಾಜ್ಯ ನೋಡುವಂತೆ ಆ ಕುಟುಂಬ ಕೊಟ್ಟಿದೆ. ಜನ ಅವರನ್ನ ಸ್ಮರಿಸುತ್ತಿದ್ದಾರೆ”ಎಂದರು.
ಉಪಚುನಾವಣೆಯಲ್ಲಿ ಒಂದಷ್ಟು ಜನರ ಅಸಮಾಧಾನ ಹಾಗೂ ಅಮಾನತು ಬಗ್ಗೆ ಕೇಳಿದಾಗ, “ಅಮಾನತಿಗೆ ನಾನು ಸಹಿ ಹಾಕಿಲ್ಲ. ಸ್ಥಳೀಯವಾಗಿ ಇದು ಆಗಿದೆ. ನಾನು ಹಾಗೂ ಮುಖ್ಯಮಂತ್ರಿಯವರು ಇದರ ಬಗ್ಗೆ ಮಾತನಾಡಿದ್ದೇವೆ. ಈ ವಿಚಾರವನ್ನ ಬಹಿರಂಗಗೊಳಿಸುವುದಿಲ್ಲ. ಜಮೀರ್, ಜಬ್ಬಾರ್, ನಜೀರ್ ಅವರು ಎಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಏನು ಹೇಳುತ್ತದೆಯೋ ಅದನ್ನು ಕೇಳುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಪೈಲ್ವಾನ್, ಉಸ್ತಾದ್ ಇರಬಹುದು ಎಲ್ಲರೂ ನಮ್ಮವರೇ. ಚುನಾವಣೆ ಸಮಯದಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಬಂದೇ ಬರುತ್ತದೆ. ನಾವು ಅದನ್ನು ನಿಭಾಯಿಸುತ್ತೇವೆ” ಎಂದರು.
ಚುನಾವಣಾ ಕಣದಿಂದ ಹಿಂದೆ ಸರಿಯಲು ಏನಾದರೂ ಡಿಮ್ಯಾಂಡ್ ಇದೆಯೇ ಎಂದು ಕೇಳಿದಾಗ, “ಯಾವ ಡಿಮ್ಯಾಂಡ್ ಕೂಡ ಇಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಿಸುವುದೇ ಡಿಮ್ಯಾಂಡ್” ಎಂದರು.





Leave a comment