Home ದಾವಣಗೆರೆ ದಾವಣಗೆರೆ ಬಿಜೆಪಿಯಲ್ಲಿ ಬಂಡಾಯದ ಕಿಚ್ಚು: ಅಭ್ಯರ್ಥಿಗಳ ಘೋಷಿಸಿದ ಬಿಎಸ್ ವೈ ವಿರುದ್ಧ ಜಿಲ್ಲಾ ಮುಖಂಡರ ರೋಷಾಗ್ನಿ!
ದಾವಣಗೆರೆಬೆಂಗಳೂರು

ದಾವಣಗೆರೆ ಬಿಜೆಪಿಯಲ್ಲಿ ಬಂಡಾಯದ ಕಿಚ್ಚು: ಅಭ್ಯರ್ಥಿಗಳ ಘೋಷಿಸಿದ ಬಿಎಸ್ ವೈ ವಿರುದ್ಧ ಜಿಲ್ಲಾ ಮುಖಂಡರ ರೋಷಾಗ್ನಿ!

Share
ದಾವಣಗೆರೆ
Share

ದಾವಣಗೆರೆ: “ಭಾರತೀಯ ಜನತಾ ಪಾರ್ಟಿ ಒಂದು ವಿಭಿನ್ನ ಸಿದ್ಧಾಂತದ ಪಕ್ಷ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೊನ್ನಾಳಿಯಲ್ಲಿ ನಡೆದ ಎಂ.ಪಿ. ರೇಣುಕಾಚಾರ್ಯರ ಹುಟ್ಟುಹಬ್ಬದ ವೇದಿಕೆಯಲ್ಲಿ ಜಿಲ್ಲೆಯ ಬಹುತೇಕ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಕಾಲಿಕವಾಗಿ ಘೋಷಣೆ ಮಾಡಿರುವುದು ಖಂಡನೀಯ” ಎಂದು ಜಿಲ್ಲಾ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ಕಳೆದ ಎರಡು ದಿನಗಳ ಹಿಂದೆ ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ್ದ ಯಡಿಯೂರಪ್ಪನವರು, ಚುನಾವಣೆಗೂ ಎರಡು ವರ್ಷ ಮೊದಲೇ ರೇಣುಕಾಚಾರ್ಯ (ಹೊನ್ನಾಳಿ), ಮಾಡಾಳ್ ವಿರೂಪಾಕ್ಷಪ್ಪ (ಚನ್ನಗಿರಿ), ಬಸವರಾಜ್ ನಾಯ್ಕ್ (ಮಾಯಕೊಂಡ), ಎಸ್.ವಿ. ರಾಮಚಂದ್ರ (ಜಗಳೂರು) ಮತ್ತು ಕರುಣಾಕರ ರೆಡ್ಡಿ (ಹರಪನಹಳ್ಳಿ) ಅವರನ್ನು ಗೆಲ್ಲಿಸಿ ರೇಣುಕಾಚಾರ್ಯರನ್ನು ಮಂತ್ರಿ ಮಾಡಲು ಸಹಕರಿಸುವಂತೆ ಕೋರಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಖಂಡರ ಆಕ್ಷೇಪದ ಪ್ರಮುಖ ಅಂಶಗಳು:

ಅಭ್ಯರ್ಥಿಗಳ ವಿಶ್ವಾಸಾರ್ಹತೆ:

ಘೋಷಿತ ಅಭ್ಯರ್ಥಿಗಳು ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಡಾ. ರವಿಕುಮಾರ್ ಮತ್ತು ಆನಂದ್ ಅವರಂತಹ ಬಿಜೆಪಿ ಆಕಾಂಕ್ಷಿಗಳನ್ನು ಕಾಂಗ್ರೆಸ್‌ಗೆ ಕಳುಹಿಸಿಕೊಟ್ಟು ಬಿಜೆಪಿ ಸೋಲಿಗೆ ಇವರೇ ಕಾರಣರಾಗಿದ್ದಾರೆ ಎಂದು ಮುಖಂಡರು ದೂರಿದ್ದಾರೆ.

ಕಾರ್ಯಕರ್ತರ ಕಡೆಗಣನೆ:

ಪಕ್ಷವನ್ನು ತಳಮಟ್ಟದಿಂದ ಕಟ್ಟುವಂತೆ ಆದೇಶ ನೀಡುವ ಬದಲು, ಕೇವಲ ವ್ಯಕ್ತಿಗತ ಹಿತಾಸಕ್ತಿಗಾಗಿ ಅಭ್ಯರ್ಥಿಗಳನ್ನು ಘೋಷಿಸಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿದ ಅವಮಾನ ಎಂದು ಮುಖಂಡರು ಗುಡುಗಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಸದೃಢಗೊಳಿಸುವ ಬದಲು, ಕಾಂಗ್ರೆಸ್ ಹಿತಾಸಕ್ತಿ ಕಾಪಾಡುವ ನಾಯಕರ ಪರ ಯಡಿಯೂರಪ್ಪನವರು ಬ್ಯಾಟ್ ಬೀಸುತ್ತಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ ಎಂದು
ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಹೆಚ್. ಪಿ. ರಾಜೇಶ್, ಅಣಬೇರು ಜೀವನಮೂರ್ತಿ, ಶಿವಕುಮಾರ್, ಶ್ಯಾಮ್, ಮಹೇಶ್ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles