SUDDIKSHANA KANNADA NEWS/ DAVANAGERE/ DATE:08-05-2023
ದಾವಣಗೆರೆ (DAVANAGERE): ಮತದಾರರಿಗೆ ಆಮೀಷ ಒಡ್ಡಿ ಮತ ಸೆಳೆಯುವ ಉದ್ದೇಶದಿಂದ ಬೆಳ್ಳಿಯ ಗಣೇಶ ವಿಗ್ರಹ ಹಂಚುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ನಗರದ ಎಸ್ ಜೆ ಎಂ ನಗರದ 16 ನೇ ಕ್ರಾಸ್ ನಲ್ಲಿ
ನಡೆದಿದೆ.
ಹಿರೇಕೆರೂರಿನ 22 ವರ್ಷದ ತೇಜಸ್ (THEJAS) ಎಂಬ ಯುವಕ ಪ್ರಚಾರ ಮಾಡುತ್ತಾ ಬೆಳ್ಳಿ ಗಣೇಶ (GANESHA) ಮೂರ್ತಿ ಹಂಚಲು ಬಂದಿದ್ದ. ಈತನ ಬಳಿ 2 ಚಿಕ್ಕ ಬೆಳ್ಳಿಯ ಗಣೇಶ ಮೂರ್ತಿಗಳು ಸಿಕ್ಕಿವೆ. ಈ ವೇಳೆ ವಿಚಾರಣೆ ನಡೆಸಿದಾಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ (BJP)ಅಭ್ಯರ್ಥಿ ಪರ ಮತದಾರರಿಗೆ ಆಮಿಷ ಒಡ್ಡಲು ಹಂಚಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಕ್ಷಿಣ ವಿಭಾಗದ ಫ್ಲೈಯಿಂಗ್ ಸ್ಕ್ವಾಡ್ ನ ಗಿರೀಶ್ ಅವರು, ಮಾಹಿತಿ ಪಡೆದುಕೊಂಡರು. ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ತನಿಖೆ ಮುಂದುವರಿದಿದೆ.
ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲು:
ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಮೆರವಣಿಗೆ ಹಾಗೂ ಸಭೆ ನಡೆಸಿದ ಆರೋಪದ ಮೇರೆಗೆ ಬಿಜೆಪಿ (BJP) ಮುಖಂಡರು (LEADERS)ಹಾಗೂ ಕಾರ್ಯಕರ್ತರನ್ನು
ಬಡಾವಣೆ ಠಾಣೆ (BADAVANE) ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.
ನೂರಾರು ಬಿಜೆಪಿ ಕಾರ್ಯಕರ್ತರು ಬಾವುಟ ಗಳನ್ನು ಹಿಡಿದುಕೊಂಡು ಬಂದು ಗುಂಡಿ ವೃತ್ತದ ಬಳಿ ಗುಂಪು ಸೇರಿದರು. ಈ ವೇಳೆ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಾ ಬಾವುಟಗಳು, ಧ್ವನಿವರ್ಧಕಗಳನ್ನು ಬಳಸಿಕೊಂಡು ಮೆರವಣಿಗೆ ನಡೆಸಿದರು. ಗುಂಡಿ ವೃತ್ತದಿಂದ ಶ್ರೀ ಸದ್ಜ್ಯೋತಿ ಮಠದ ಕಡೆ ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಆ ಸಮಯದಲ್ಲಿ ಕೆಲವರು ಅಲ್ಲಿಂದ ಹೋಗಿದ್ದಾರೆ. ಉಳಿದವರು ಸದ್ಜ್ಯೋತಿ ಮಠದಲ್ಲಿ ಭಾಷಣ ಮಾಡುತ್ತಿದ್ದರು.
ಕಾರ್ಯಕ್ರಮದ ಆಯೋಜಕ ಚೇತನ್ ಗೆ ಮೆರವಣಿಗೆ, ಮಠದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿರುವ ಬಗ್ಗೆ ವಿಚಾರಿಸಿದಾಗ ಅನುಮತಿ ಪಡೆದಿರಲಿಲ್ಲ. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಹಾಗೂ ಸದಸ್ಯ ಪ್ರಸನ್ನ ಕುಮಾರ್ ಸೇರಿದಂತೆ ಸುಮಾರು 25 ಜನಕ್ಕೂ ಹೆಚ್ಚು ಜನರು ಇದ್ದರು. ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದು ತಿಳಿದಿದ್ದರೂ ಕೂಡ ಬಿಜೆಪಿ ಕಾರ್ಯಕರ್ತರು ಅಕ್ರಮವಾಗಿ ಗುಂಪು ಕಟ್ಟಿಕೊಂಡು, ಅನಧಿಕೃತವಾಗಿ ರಸ್ತೆ ತಡೆದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡಿ ಆಂಜನೇಯ ಭಾವ ಚಿತ್ರ ಇರುವ ಬಾವುಟಗಳನ್ನು ಹಿಡಿದು ಮೆರವಣಿಗೆ ಮಾಡಿಧಾರ್ಮಿಕ ಸ್ಥಳ ಸದ್ಜ್ಯೋತಿ ಮಠವನ್ನು ದುರ್ಬಳಕೆ ಮಾಡಿಕೊಂಡು ಪ್ರಚೋದನಕಾರಿ ಭಾಷಣ ಮಾಡಿ ಚುನಾವಣೆ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಗ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.