Site icon Kannada News-suddikshana

ಕೆಲಸ ಮಾಡುತ್ತಿದ್ದ ಬ್ಯಾಂಕ್ ಗೆ ಕನ್ನ: ಆರೋಪಿ ಬಂಧನ, ರೂ. 3 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ವಶ!

SUDDIKSHANA KANNADA NEWS/ DAVANAGERE/ DATE-14-05-2025

ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಬ್ಯಾಂಕ್ ನೌಕರನನ್ನು ಪೊಲೀಸರು ಬಂಧಿಸಲಾಗಿದೆ. 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರದ ಆಭರಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋಲ್ಡ್ ಲೋನ್ ಆಫೀಸರ್ ಟಿ.ಪಿ. ಸಂಜಯ್ ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ ಏನು?

ಕಳೆದ ಏಪ್ರಿಲ್ 22ರಂದು ಸಿ.ಎಸ್.ಬಿ. ಬ್ಯಾಂಕ್ ವ್ಯವಸ್ಥಾಪಕ ಕೆ. ಬಿ. ಶಿವಕುಮಾರ್ ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಮ್ಮ ಬ್ಯಾಂಕ್ ಗೋಲ್ಡ್ ಲೋನ್ ಆಫೀಸರ್ ಸಂಜಯ್ ಟಿ.ಪಿ. ಬ್ಯಾಂಕಿನ ಗ್ರಾಹಕರು ಅಡಮಾನ ಮಾಡಿದ ಸಾಲದ ಖಾತೆಗಳಲ್ಲಿನ ಒಟ್ಟು 3157.10 ಗ್ರಾಂ ತೂಕದ ಆಭರಣಗಳನ್ನು ನಮ್ಮ ಗಮನಕ್ಕೆ ಬಾರದ ಹಾಗೆ ಮೋಸ ಮಾಡಿದ್ದಾರೆ. ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಕಳ್ಳತನ ಮಾಡಿಕೊಂಡು ಹೋಗಿ ಬ್ಯಾಂಕಿಗೆ ಮೋಸ ಮಾಡಿ ನಷ್ಟವುಂಟು ಮಾಡಿರುತ್ತಾನೆ ಎಂದು ದೂರಿದ್ದರು.

ಆರೋಪಿತನಾದ ಸಂಜಯ್.ಟಿ.ಪಿ. ಪತ್ತೆ ಮಾಡಿ ನಮ್ಮ ಗ್ರಾಹಕರ ಬಂಗಾರದ ಆಭರಣಗಳನ್ನು ಪತ್ತೆ ಮಾಡಿ ಕೊಡಿ ಅಂತ ದೂರು ನೀಡಿದ ಮೇರೆಗೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಹಾಗು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಎಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ್ ಮತ್ತು ಜಿ. ಮಂಜುನಾಥ್. ಜಿ., ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ಪಿ ಶರಣ ಬಸವೇಶ್ವರ, ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್. ಹೆಚ್.ಎಸ್., ಅಧಿಕಾರಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು.

ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಆರೋಪಿತನಾದ ಸಂಜಯ್ ನನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಆರೋಪಿಯು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ ಬಂಗಾರದ ಆಭರಣಗಳನ್ನು ದಾವಣಗೆರೆ ನಗರದ ಪೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಹಾಗೂ ಪಿ.ಬಿ.ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಪೈನಾನ್ಸ್ ಶಾಖೆಯಲ್ಲಿ ಅಡಮಾನ ಇಟ್ಟಿದ್ದ.

ಕಳ್ಳತನವಾದ ಸುಮಾರು 2 ಕೋಟಿ 61 ಲಕ್ಷದ 4 ಸಾವಿರ ರೂ ಬೆಲೆ ಬಾಳುವ 3 ಕೆ.ಜಿ 643 ಗ್ರಾಂ ಪಿರ್ಯಾದಿಯವರ ಬಾಬ್ತು ದಾವಣಗೆರೆ ಸಿ.ಎಸ್.ಬಿ ಬ್ಯಾಂಕ್ ಗ್ರಾಹಕರು ಅಡಮಾನ ಮಾಡಿದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.

ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಬ್ಯಾಂಕ್ ಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ಅವರ ಅಪರಾಧಿಕ ಹಿನ್ನೆಲೆಯ ಬಗ್ಗೆ ಪೂರ್ವಪರ ಪರಿಶೀಲಿಸಿ ನೇಮಕ ಮಾಡಿಕೊಳ್ಳುವಂತೆ ಎಸ್ಪಿ ಉಮಾ ಪ್ರಶಾಂತ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಪ್ರಕರಣದಲ್ಲಿ ಆರೋಪಿ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್. ಎಸ್. ಸುನೀಲ್ ಕುಮಾರ್, ಪಿಎಸ್ಐ ಆರ್. ಲತಾ ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ., ನಾಗರಾಜ್, ಗೀತಾ ಸಿ.ಕೆ., ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಬಿ. ಜಾಧವ್, ಶಿವಕುಮಾರ್ ಅವರನ್ನು ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

Exit mobile version