ಬೆಳಗಾವಿ: ಮತದಾನವು ಸಂವಿಧಾನದತ್ತವಾಗಿ ಪ್ರತಿಯೊಬ್ಬ ವಯಸ್ಕರಿಗೂ ದೊರಕಿರುವ ಹಕ್ಕು. ಆದರೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಜನಸಾಮಾನ್ಯರಿಗೆ ನೀಡಿದ ಬಾಬಾ ಸಾಹೇಬರಿಗೆ ಬಿಜೆಪಿಗರು ಅವಮಾನ ಮಾಡಿದ್ದಾರೆ. ಸಂವಿಧಾನದ ಘನತೆ ಹಾಗೂ ಪ್ರಜಾಪ್ರಭುತ್ವದ ನಂಬಿಕೆ ಎರಡಕ್ಕೂ ಅಪಚಾರ ಎಸಗುತ್ತಿರುವ ಬಿಜೆಪಿಗರು ಮತಗಳ್ಳತನದ ನೀಚ ಕೃತ್ಯಕ್ಕೆ ಇಳಿದಿರುವುದು ಅಕ್ಷಮ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಆಳಂದ ಕ್ಷೇತ್ರದಲ್ಲಿ ಕೇವಲ 70 ರೂಪಾಯಿಗೆ ಶಾಸಕರ ಹುದ್ದೆಯನ್ನು ಮಾರಾಟ ಮಾಡಲು ಹೊರಟಿದ್ದು ಬಹಳ ಗಂಭೀರ ವಿಚಾರ. ಚುನಾವಣಾ ಪ್ರಕ್ರಿಯೆಯನ್ನು ಹರಾಜು ಹಾಕುವ ಹೀನತನದ ಬಗ್ಗೆ ಸದನದಲ್ಲಿ ಚರ್ಚೆಯಾಗುವುದು ಅತ್ಯಗತ್ಯ ಎಂದು ಒತ್ತಾಯಿಸಿದರು.
ಬಿಜೆಪಿ ನಾಯಕರು ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡ’ ಎಂಬಂತೆ ಚರ್ಚೆಗೆ ಅವಕಾಶ ನೀಡಲು ತಕರಾರು ತೆಗೆಯುತ್ತಿದ್ದಾರೆ. ಬಿಜೆಪಿಗರ ಕಳ್ಳಾಟ ಇಡೀ ರಾಜ್ಯಕ್ಕೆ ತಿಳಿಯಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ದೇಶದ ಯಾವುದೇ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಕರ್ನಾಟಕದ ಇಕೋ ಸಿಸ್ಟಂ ಬಹಳಷ್ಟು ಮುಂದಿದೆ. ರಾಜ್ಯಕ್ಕೆ ಬಂಡವಾಳ ಹರಿದು ಬರುತ್ತಿದೆ ಎಂದರೆ ಅದು ನಮ್ಮಲ್ಲಿರುವ ಪ್ರತಿಭಾವಂತ ಮಾನವ ಸಂಪನ್ಮೂಲವೇ ಕಾರಣ ಎಂದರು.
ನಮ್ಮಲ್ಲಿ ವಿಶ್ವದರ್ಜೆಯ 1,777 ಜಿಟಿಟಿಸಿ ಮತ್ತು ಐಟಿಐಗಳಿವೆ. ಜಿಸಿಸಿಯಲ್ಲಿ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. AI ನಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನ ಪಡೆದಿದ್ದೇವೆ. ಏಷ್ಯಾ ಮತ್ತು ಜಗತ್ತಿನ ಅತಿ ಹೆಚ್ಚು ಮಾನವ ಸಂಪನ್ಮೂಲ ಸಾಂದ್ರತೆ ಇರುವುದು ಕರ್ನಾಟಕದಲ್ಲಿ ಎಂದು ತಿಳಿಸಿದರು.
ಸದನದಲ್ಲಿ ಸದಸ್ಯರು ಹೇಳಿದಂತೆ ಬೆಂಗಳೂರಿನ ಆಚೆಗೂ ಪ್ರತಿಭೆಗಳನ್ನು ಬೆಳೆಸುವ ಮತ್ತು ಉದ್ಯಮಗಳನ್ನು ಉತ್ತೇಜಿಸುವುದು ಅಗತ್ಯ. ಅದಕ್ಕಾಗಿ ಭಾರತದ ಅತಿ ದೊಡ್ಡ ಕೌಶಲ್ಯ ವೃದ್ಧಿ ಯೋಜನೆಯಾದ ನಿಪುಣ ಮತ್ತು ಲೀಪ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗುಣಮಟ್ಟದ ಹೊಸ ತರಬೇತಿ, ಹೊಸ ತಂತ್ರಜ್ಞಾನವನ್ನು ಪೂರ್ಣಗೊಳಿಸುವುದು ನಮ್ಮ ಬದ್ಧತೆಯಾಗಿದೆ. ನಮ್ಮ ಸ್ಪರ್ಧೆ ಒಡಿಶಾ, ಆಂಧ್ರಪ್ರದೇಶದಂತಹ ರಾಜ್ಯಗಳಲ್ಲದೆ, ನಮ್ಮಲ್ಲಿರುವ ಮಾನವ ಸಂಪನ್ಮೂಲವು ಚೀನಾದೊಂದಿಗೆ ಸ್ಪರ್ಧಿಸುವ ನಿಟ್ಟಿನಲ್ಲಿ ನಮ್ಮ ಯೋಜನೆ ಹಾಗೂ ನೀತಿಗಳನ್ನು ರೂಪಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಉದಾಹರಣೆಗೆ, ಅಸ್ಸಾಂನಲ್ಲಿ ಸ್ಥಾಪಿಸಲಾಗುತ್ತಿರುವ ಟಾಟಾ ಕಂಪನಿಯ ಸೆಮಿಕಂಡಕ್ಟರ್ ಉದ್ಯಮದ ಮಾನವ ಸಂಪನ್ಮೂಲಕ್ಕೆ ತರಬೇತಿ ನಡೆಯುತ್ತಿರುವುದು ಬೆಂಗಳೂರಿನಲ್ಲಿ. ಕೌಶಲ್ಯಾಭಿವೃದ್ಧಿ, ಬಹುಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಲೀಪ್ ಕಾರ್ಯಕ್ರಮದಡಿ ಕ್ಲಸ್ಟರ್ ಆಧಾರದಲ್ಲಿ ಉದ್ಯಮ ಹಾಗೂ ಕೌಶಲ್ಯವನ್ನು ವಿಸ್ತರಿಸುತ್ತಿದ್ದೇವೆ. ಇದನ್ನು ಚುರುಕುಗೊಳಿಸಲು ಇನ್ನಷ್ಟು ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.





Leave a comment