Site icon Kannada News-suddikshana

ಮುಂಗಾರು ಬೆಳೆಗೆ Bhadra Damನಿಂದ ನಾಳೆಯಿಂದ 120 ದಿನಗಳ ಕಾಲ ಭದ್ರಾ ಬಲದಂಡೆಗೆ ನೀರು

Bhadra Dam

ಶಿವಮೊಗ್ಗ: ಮುಂಗಾರು ಬೆಳೆಗೆ ಭದ್ರಾ ಡ್ಯಾಂ (Bhadra Dam)ನಿಂದ ಬಲದಂಡೆ ನಾಲೆಗೆ ಜು.22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು. ಎಡದಂಡೆ ನಾಲೆಗೆ ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ‌ ಹೇಳಿದರು.

ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26 ನೇ ಸಾಲಿನ ಮುಂಗಾರು ಬೆಳೆಗೆ ನೀರು ಹರಿಸುವ ಕುರಿತು ಸೋಮವಾರ ಮಲವಗೊಪ್ಪದ ಭದ್ರ ಕಾಡಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜು.22 ರಿಂದ ಬಲದಂಡೆ ನಾಲೆಗೆ 120 ದಿನಗಳ ಕಾಲ‌ ನೀರು ಹರಿಸಲು ಸಭೆ ನಿರ್ಧರಿಸಿದ್ದು, ಸುರಕ್ಷತಾ ಕ್ರಮ‌ಗಳನ್ನು ಕೈಗೊಂಡು ನೀರು ಬಿಡಬೇಕು. ಎಡದಂಡ ನಾಲೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದು . ಶೀಘ್ರದಲ್ಲೇ ಎಡದಂಡ ನಾಲೆಗೆ ನೀರು ಹರಿಸಲು ದಿನಾಂಕ ನಿಗದಿಗೊಳಿಸಲಾಗುವುದು. ಚಿಕ್ಕಮಗಳೂರು ಜಿಲ್ಲೆಗೆ ನೀರು ಹಂಚಿಕೆ ಕುರಿತು ನೀರಾವರಿ ಸಚಿವರೊಂದಿಗೆ ಸಭೆ ನಿಗದಿಪಡಿಸಿ ಮಾತನಾಡಬೇಕು ಎಂದರು.

ಕಾಡಾ ವ್ಯಾಪ್ತಿಯಲ್ಲಿ 537 ನೀರು ಬಳಕೆದಾರರ ಸಂಘಗಳಿದ್ದು, ಇವುಗಳಿಗೆ ನೀರು ಬಳಕೆ, ಇತರೆ ರೈತ ಚಟುವಟಿಕೆ ಕುರಿತು ಕಾರ್ಯಾಗಾರ ಮಾಡಿದರೆ ಒಳಿತು ಎಂದು ಸಲಹೆ ನೀಡಿದರು.

ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಅಂಶುಮಂತ್ ಮಾತನಾಡಿ, ಕಟ್ಟಕಡೆಯ ರೈತರಿಗೂ ಯಾವುದೇ ತೊಂದರೆಯಾಗದಂತೆ ನೀರು ಬಿಡುತ್ತೇವೆ. ರೈತರ ಹಿತ ಕಾಪಾಡಲು ಸದಾ ಸಿದ್ದವಾಗಿದ್ದೇವೆ. ತಾಂತ್ರಿಕ, ಕೃಷಿ ವಿಭಾಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ.‌ ಸವಳು ಜವಳು ಯೋಜನೆ ಜಾರಿ‌ ಮಾಡಲು ರೈತ ರ ಸಹಕಾರ ಬೇಕು. ಭೂಮಿ ಫಲವತ್ತತೆಯ, ಸುರಕ್ಷತೆ ಬಗ್ಗೆ ಸಹ ಕಾಡಾ ಕೆಲಸ ಮಾಡುತ್ತಿದೆ. ಕಾಡಾ ವ್ಯಾಪ್ತಿಯಲ್ಲಿ ೩೫ ನೀರಾವರಿ ಯೋಜನೆಗಳು ಬರುತ್ತವೆ. ೫೩೭ ನೀರು ಬಳಕೆದಾರರ ಸಂಘಗಗಳು ಇವೆ. 110 ಸಂಘಗಳಿಗೆ ಸರ್ಕಾರ ರೂ. 1 ಲಕ್ಷ ಅನುದಾನ ನೀಡಲಾಗಿದೆ. ಸಹಕಾರ ವ್ಯವಸ್ಥೆ ಇದೆ. ನರೇಗಾ ಸಹಭಾಗಿತ್ವ ದಲ್ಲಿ ಕೆಲಸಕ್ಕೆ ಮುಂದಾಗಿದ್ದೇವೆ. ಯಾವುದೇ ನೀರಾವರಿ ಸಮಸ್ಯೆ ಪರಿಹರಿಸಲು ಕಾಡಾ ಬದ್ದವಾಗಿದೆ ಎಂದರು.

ಸಭೆಯಲ್ಲಿ ಮುಂಗಾರು ಬೆಳೆಗೆ ನೀರು ಹರಿಸಲು ದಿನಾಂಕವನ್ನು ನಿರ್ಧರಿಸುವ ಕುರಿತು ಹಾಗೂ ನೀರಾವರಿಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಕುರಿತು ಜನಪ್ರತಿನಿಧಿಗಳು, ಸದಸ್ಯರು, ರೈತ ಮುಖಂಡರಿಂದ ಅಗತ್ಯ
ಸಲಹೆಗಳನ್ನು ಪಡೆಯಲಾಯಿತು.

ಭದ್ರಾವತಿ ತಾಲ್ಲೂಕಿನ ಕಾಗೆಕೋಡಮಗ್ಗೆ ನೀರು ಬಳಕೆದಾರರ ಸಂಘದ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನ ಬಂದಿದ್ದು, ಸಂಘದ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು. ಸಭೆಯಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ, ಶಾಂತನಗೌಡ, ಬಸವರಾಜಪ್ಪ, ಬಿ.ಪಿ.ಹರೀಶ್ ಮಾತನಾಡಿದರು. ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು, ಆಡಳಿತಾಧಿಕಾರಿ, ಮುಖ್ಯ ಇಂಜಿನಿಯರ್ , ಇತರೆ ಅಧಿಕಾರಿಗಳು ಹಾಜರಿದ್ದರು

Exit mobile version