Site icon Kannada News-suddikshana

ಜನವರಿ 5ರಿಂದಲೇ ಭದ್ರಾ ಡ್ಯಾಂ ನೀರು ಕಾಲುವೆಗಳಲ್ಲಿ ಹರಿಸುವಂತೆ ಒತ್ತಾಯಿಸ್ತಿರುವುದ್ಯಾಕೆ? ಡಿಸಿ ಏನಂದ್ರು?

SUDDIKSHANA KANNADA NEWS/ DAVANAGERE/ DATE:01-01-2025

ದಾವಣಗೆರೆ: ಭದ್ರಾ ಡ್ಯಾಂ ನೀರಿನ ಲಭ್ಯತೆಯಿಂದ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 60 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಭದ್ರಾ ಡ್ಯಾಂ ಜಿಲ್ಲೆಯ ರೈತರ ಜೀವನಾಡಿ. ಜನವರಿ 5ರಿಂದ ಭದ್ರಾ ಡ್ಯಾಂ ನೀರನ್ನು ಕಾಲುವೆಗಳಲ್ಲಿ ಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟವು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿತು.

ಪ್ರಸ್ತುತ ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯುವ ಸಲುವಾಗಿ ಕೊಳವೆಬಾವಿ ಮತ್ತಿತ್ತರ ನೀರಿನ ಸೌಲಭ್ಯ ಇರುವವರು ಈಗಾಗಲೇ ಸಸಿಮಡಿ ತಯಾರಿಸಿ, ಬೀಜ ಚೆಲ್ಲಿದ್ದಾರೆ. ಇನ್ನುಳಿದ ಕೆಲವು ರೈತರು ಸಸಿಮಡಿಗೆ ಬೀಜ ಚೆಲ್ಲಲು ಕಾಲುವೆಗಳಲ್ಲಿ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಇನ್ನು ಕೆಲವು ರೈತರು ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ಚೆಲ್ಲುವ ಪದ್ಧತಿ ಅನುಸರಿಸುವವರೂ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಆದ್ದರಿಂದ ಜನವರಿ 5ನೇ ತಾರೀಖಿನಿಂದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದೆ.

ಪ್ರಸ್ತುತ ಡ್ಯಾಂನಲ್ಲಿ ನೀರಿನ ಮಟ್ಟ 183 ಅಡಿ ಇದ್ದು, ಡ್ಯಾಂ ತುಂಬಿದೆ. ನೀರು ಬಿಡುವುದು ತಡವಾದರೆ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆಗೆ ಅನಾನುಕೂಲವಾಗುತ್ತದೆ. ಆದ್ದರಿಂದ ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ಕರೆದು ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದೆ.

ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಮತ್ತು ಹೂಳನ್ನು ತೆಗೆಯಿಸಿ, ನೀರು ಸರಾಗವಾಗಿ ಕೊನೆಯ ಭಾಗಕ್ಕೆ ಹರಿಯುವಂತೆ ಮಾಡಬೇಕು. ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ಮಾಡಿಸಿ, ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕು.
ಡ್ಯಾಂ ನಿರ್ವಹಣೆಯ ಕ್ರೇನ್ ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಡ್ಯಾಂ ತಳಭಾಗದ ಬಫರ್ ಜೋನ್ ಪ್ರದೇಶದಲ್ಲಿ ಯಾವುದೇ ರೀತಿಯ ಅವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಮನವಿ ಮಾಡಿದೆ.

ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಅಣಬೇರು ಕುಮಾರಸ್ವಾಮಿ, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್, ಕುರ್ಕಿ ರೇವಣಸಿದ್ದಪ್ಪ, ಕುಂದುವಾಡದ ಜಿಮ್ಮಿ ಹನುಮಂತಪ್ಪ ಮತ್ತಿತರರು ಹಾಜರಿದ್ದರು.

ಡಿಸಿ ಭರವಸೆ

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಯವರು, ಆದಷ್ಟು ಬೇಗ ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Exit mobile version