SUDDIKSHANA KANNADA NEWS/ DAVANAGERE/ DATE:02_08_2025
ದಾವಣಗೆರೆ: ತೆಲಂಗಾಣದ ವ್ಯಕ್ತಿಗೆ ನಕಲಿ ಬಂಗಾರ ನೀಡಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
READ ALSO THIS STORY: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ: ಅಸ್ಥಿಪಂಜರದ ಅವಶೇಷಗಳ ಪತ್ತೆ ಬಳಿಕ ಎಸ್ಐಟಿ ತನಿಖೆ ಶುರು, ಢವ..ಢವ.. ಶುರುವಾಗಿರೋದು ಯಾರಿಗೆ?
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬಟ್ಟನಳ್ಳಿ ಗ್ರಾಮದ ಪ್ರಕಾಶ್ (29), ಮಾರಪ್ಪ(58) ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂದಿಸಿದಂತೆ ಒಟ್ಟು 7,50,000 ರೂಪಾಯಿ ನಗದು,2.500 ಗ್ರಾಂ ಅಸಲಿ ಬಂಗಾರದ ನಾಣ್ಯಗಳು ಮತ್ತು 505 ಗ್ರಾಂ ನಕಲಿ ಬಂಗಾರದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಮೇ 29ರಂದು ತೆಲಂಗಾಣ ರಾಜ್ಯದ ನಾಲಗೊಂಡ ಜಿಲ್ಲೆಯ ಚಳಕುರ್ತಿಯಲ್ಲಿ ವ್ಯವಸಾಯ ಮಾಡುತ್ತಿದ್ದ ರಮಾವತ್ ಭಾಸ್ಕರ್ ಅವರು ಮೂವರು ಅಪರಿಚಿತ ವ್ಯಕ್ತಿಗಳು ಮೋಸ ಮಾಡಿ ನಕಲಿ ಬಂಗಾರದ ಚೂರುಗಳನ್ನು ನೀಡಿ ತಮ್ಮ ಬಳಿ ಇದ್ದ 8 ಲಕ್ಷ ರೂ ನಗದು ಮತ್ತು ಸುಮಾರು 20,000 ರೂ. ಮೌಲ್ಯದ ಮೊಬೈಲ್ ಅನ್ನು ಹೆದರಿಸಿ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ ಎಂದು ಜಗಳೂರು ಪೊಲೀಸರಿಗೆ ದೂರು ನೀಡಿದ್ದರು.
ಜಗಳೂರು ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯರ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳನ್ನು ಪತ್ತೆ ಹಚ್ಚಿದ ಜಗಳೂರು ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ, ಜಗಳೂರು ಪೊಲೀಸ್ ಠಾಣೆಯ ಪಿಎಸ್ ಐ ಗಾದಿಲಿಂಗಪ್ಪ, ಶರಣಬಸಪ್ಪ, ಆಶಾ, ಸಿಬ್ಬಂದಿಗಳಾದ ಎಎಸ್ಐಗಳಾದ ವೆಂಕಟೇಶ ಜಿ.ಟಿ., ಕೆ. ನಟರಾಜ, ನಾಗರಾಜಯ್ಯ, ನಾಗಭೂಷಣ, ಪ್ರಸನ್ನ, ಪ್ರಸನ್ನ, ಉಮಾಶಂಕರ ಎಸ್.ಎಂ, ನಾಗರಾಜಪ್ಪ, ಚೈತ್ರ ಸಿ,. ಮಧುರಾ ಜಿ.ಎಂ. ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.