Site icon Kannada News-suddikshana

ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ 11 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

SUDDIKSHANA KANNADA NEWS/ DAVANAGERE/ DATE:11-12-2023

ಕೊಚ್ಚಿ: ಕೇರಳದ ಶಬರಿಮಲೆ ದೇಗುಲದಲ್ಲಿ ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

ತಮಿಳುನಾಡಿನ 11 ವರ್ಷದ ಬಾಲಕಿ ಮೂರು ವರ್ಷದಿಂದಲೂ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಳು. ಬಾಲಕಿ ಯಾತ್ರಾರ್ಥಿಗಳ ಭಾರೀ ನೂಕುನುಗ್ಗಲಿನ ನಡುವೆ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಹೆಸರಾಂತ ಶಬರಿಮಲೆ ದೇವಸ್ಥಾನಕ್ಕೆ ಪ್ರಸ್ತುತ ಭಕ್ತಾದಿಗಳ ದಂಡು ಹರಿದು ಬರುತ್ತಿದೆ. ಕೆಲವು ಯಾತ್ರಾರ್ಥಿಗಳು 18 ಗಂಟೆಗಳವರೆಗೆ ದರ್ಶನಕ್ಕಾಗಿ ಕಾಯುತ್ತಿದ್ದರು, ಅನೇಕರು ಸರತಿ ವ್ಯವಸ್ಥೆಯನ್ನು ಉಲ್ಲಂಘಿಸಿದ್ದರಿಂದ ಅವ್ಯವಸ್ಥೆಗೆ ಕಾರಣವಾಗಿತ್ತು ಎನ್ನಲಾಗಿದೆ.

ದೀರ್ಘ ಸರತಿ ಸಾಲಿನ ಕಾರಣದಿಂದಾಗಿ, ಯಾತ್ರಿಕರು ಬ್ಯಾರಿಕೇಡ್‌ ಗಳ ಮೇಲೆ ಹಾರಿ, ಪವಿತ್ರ ಮೆಟ್ಟಿಲುಗಳ ಬಳಿ ನೂಕುನುಗ್ಗಲು ಉಂಟುಮಾಡಿದರು. ಹೆಚ್ಚುತ್ತಿರುವ ಜನಸಂದಣಿಯ ಕಾರಣದಿಂದಾಗಿ, ಕೇರಳ ಸಚಿವ ಕೆ. ರಾಧಾಕೃಷ್ಣನ್ ಮತ್ತು ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ತುರ್ತು ಸಭೆಯನ್ನು ಕರೆದಿದ್ದಾರೆ.

ವರ್ಚುವಲ್ ಕ್ಯೂ ಬುಕಿಂಗ್:

ವರ್ಚುವಲ್ ಕ್ಯೂ ಬುಕಿಂಗ್ ಮಿತಿಯನ್ನು 10,000 ರಷ್ಟು ಕಡಿಮೆ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದಿನಕ್ಕೆ 90 ಸಾವಿರವಿದ್ದ ಗರಿಷ್ಠ ಮಿತಿಯನ್ನು ದಿನಕ್ಕೆ 80 ಸಾವಿರಕ್ಕೆ ಇಳಿಸಲಾಗಿದೆ. ಅಲ್ಲದೆ ದರ್ಶನದ ಅವಧಿಯನ್ನು ಒಂದು ತಾಸು ಹೆಚ್ಚಿಸುವ ತೀರ್ಮಾನವನ್ನು ಟ್ರಾವಂಕೂರು ದೇವಸ್ವಂ ಬೋರ್ಡ್‌ ರವಿವಾರ ತೆಗೆದುಕೊಂಡಿದೆ.

ಇದುವರೆಗೆ ಅಪರಾಹ್ನ 4ರಿಂದ ರಾತ್ರಿ 11 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ಇತ್ತು, ಇದನ್ನು ಅಪರಾಹ್ನ 3ರಿಂದಲೇ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪಟ್ಟನಂತಿಟ್ಟ ಜಿಲ್ಲಾಡಳಿತ ತಿಳಿಸಿದೆ.

Exit mobile version