ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಡೇಟಿಂಗ್ ಆ್ಯಪ್ಗಳ ಮೂಲಕ ಬೆಳೆಯುವ ಪ್ರೀತಿ-ಪ್ರೇಮ ಮತ್ತು ಆತುರದ ನಿರ್ಧಾರಗಳು ಎಂತಹ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ರಾಜಧಾನಿ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೇ ಸಾಕ್ಷಿಯಾಗಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ ಎರಡನೇ ಮದುವೆಯಾಗಿದ್ದ ದಂಪತಿ ನಡುವಿನ ವೈಷಮ್ಯ ವಿಕೋಪಕ್ಕೆ ತಿರುಗಿ, ಸಾರ್ವಜನಿಕವಾಗಿ ಪತ್ನಿಯ ಮೇಲೆಯೇ ಪತಿ ಮಚ್ಚಿನಿಂದ ಕೊಚ್ಚಿ ಆಸಿಡ್ ಎರಚಿರುವ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ.
ಪರಿಚಯ, ಮದುವೆ ಮತ್ತು ತಲೆದೋರಿದ ಬಿರುಕು
ಕೋಲ್ಕತ್ತಾ ಮೂಲದ ಮಧುಮಿತಾ (26) ಜೆ.ಪಿ. ನಗರದ ನಾರಾಯಣ ಕ್ಲಿನಿಕ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಗೆ ಡೇಟಿಂಗ್ ಆ್ಯಪ್ ಮೂಲಕ ತಮಿಳುನಾಡಿನ ಮಧುರೈ ಮೂಲದ ವೆಂಕಟೇಶನ್ (39) ಎಂಬಾತನ ಪರಿಚಯವಾಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತಿ-ಪತ್ನಿಯರಿಂದ ವಿಚ್ಛೇದನ ಪಡೆದಿದ್ದ ಇಬ್ಬರೂ 2023ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೇವಲ ಒಂದೇ ವರ್ಷಕ್ಕೆ ಇಬ್ಬರ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು. ಇದರಿಂದ ಬೇಸತ್ತ ಮಧುಮಿತಾ, ಪತಿಯಿಂದ ದೂರವಾಗಿ ಜೆ.ಪಿ. ನಗರದ ಪಿಜಿಯಲ್ಲಿ ವಾಸವಿದ್ದರು.
ದಾಳಿಗೆ ಪ್ರಮುಖ ಕಾರಣಗಳು: ಅನುಮಾನ ಮತ್ತು ‘ರೀಲ್ಸ್’ ಹುಚ್ಚು
ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಆಕೆಗೆ ಬೇರೆ ವ್ಯಕ್ತಿಗಳೊಂದಿಗೆ ಅಕ್ರಮ ಸಂಬಂಧವಿದೆ ಎಂದು ವೆಂಕಟೇಶನ್ ಸದಾ ಅನುಮಾನಪಡುತ್ತಿದ್ದನು. ಜೊತೆಗೆ ಮಧುಮಿತಾ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ‘ರೀಲ್ಸ್’ ಮಾಡಿ ಪೋಸ್ಟ್ ಮಾಡುತ್ತಿದ್ದುದು, ಪತಿ ಫೋನ್ ಮಾಡಿದಾಗ ಸ್ವೀಕರಿಸದೆ ನಿರ್ಲಕ್ಷಿಸುತ್ತಿದ್ದುದು ಆತನ ಕೋಪವನ್ನು ಮುಗಿಲು ಮುಟ್ಟಿಸಿತ್ತು. ಈ ವಿಷಯವಾಗಿ ಈ ಹಿಂದೆ ಹಲವು ಬಾರಿ ಕ್ಲಿನಿಕ್ ಬಳಿ ಬಂದು ಗಲಾಟೆ ಮಾಡಿದ್ದನು.
ಸ್ಕೂಟರ್ನಲ್ಲಿ 425 ಕಿ.ಮೀ ಪ್ರಯಾಣಿಸಿ ಬಂದಿದ್ದ ಸೈಕೋ ಪತಿ
ಪತ್ನಿಯನ್ನು ಕೊಲೆ ಮಾಡಲೇಬೇಕೆಂದು ಕಂಕಣ ಬದ್ಧನಾಗಿದ್ದ ವೆಂಕಟೇಶನ್, ಚೆನ್ನೈ ಹಾಗೂ ತಮಿಳುನಾಡಿನಲ್ಲಿ ಮಾರಕಾಸ್ತ್ರಗಳಾದ ಮಚ್ಚು, ಚಾಕು ಹಾಗೂ ಬಾತ್ರೂಮ್ ಕ್ಲೀನಿಂಗ್ಗೆ ಬಳಸುವ ಆಸಿಡ್ ಖರೀದಿಸಿದ್ದನು. ಬುಧವಾರ ರಾತ್ರಿ ತನ್ನ ಸ್ಕೂಟರ್ನಲ್ಲಿಯೇ ಮಧುರೈನಿಂದ ಸುಮಾರು 425 ಕಿ.ಮೀ ಪ್ರಯಾಣಿಸಿ ಬೆಂಗಳೂರಿಗೆ ಬಂದಿದ್ದನು.
ಬೆಳಗಿನ ಜಾವವೇ ನಡೆದ ಭೀಕರ ಕೃತ್ಯ
ಗುರುವಾರ ಬೆಳಿಗ್ಗೆ 9:15ರ ಸುಮಾರಿಗೆ ಮಧುಮಿತಾ ಉಪಹಾರಕ್ಕಾಗಿ ಕ್ಲಿನಿಕ್ನಿಂದ ಹೊರಬರುತ್ತಿದ್ದಂತೆ, ಹೆಲ್ಮೆಟ್ ಧರಿಸಿ ಹೊಂಚು ಹಾಕಿ ಕುಳಿತಿದ್ದ ವೆಂಕಟೇಶನ್ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಮಧುಮಿತಾ ಪ್ರಾಣಭಯದಿಂದ ಕ್ಲಿನಿಕ್ನ ಬೇಸ್ಮೆಂಟ್ ಪಾರ್ಕಿಂಗ್ ಕಡೆಗೆ ಓಡಿದಾಗ, ಆಕೆಯನ್ನು ಬೆನ್ನಟ್ಟಿ ಮಚ್ಚಿನಿಂದ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಭೀಕರವಾಗಿ ಕೊಚ್ಚಿದ್ದಾನೆ. ಬಳಿಕ ತನ್ನ ಬಳಿಯಿದ್ದ ಆಸಿಡ್ ಅನ್ನು ಆಕೆಯ ದೇಹದ ಮೇಲೆ ಎರಚಿದ್ದಾನೆ.
ಸಮಯಪ್ರಜ್ಞೆ ಮೆರೆದ ಟ್ರಾಫಿಕ್ ಪೊಲೀಸರು
ಸಾರ್ವಜನಿಕರು ಆತನತ್ತ ಕಲ್ಲು ತೂರಿ ತಡೆಯಲು ಯತ್ನಿಸಿದಾಗ ಆತ ಅವರ ಮೇಲೆಯೂ ದಾಳಿಗೆ ಮುಂದಾಗಿದ್ದನು. ಈ ಸೌಂಡ್ ಕೇಳಿ ಹತ್ತಿರದ ಸಿಗ್ನಲ್ನಲ್ಲಿದ್ದ ಜೆ.ಪಿ. ನಗರ ಟ್ರಾಫಿಕ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ವೆಂಕಟೇಶ್ ಹಾಗೂ ಹೆಡ್ ಕಾನ್ಸ್ಟೇಬಲ್ ಮಧು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ವೆಂಕಟೇಶನ್ ಪೊಲೀಸರ ಮೇಲೆಯೂ ಮಚ್ಚು ಬೀಸಲು ಯತ್ನಿಸಿದಾಗ, ಕಂಠೀರವ ಸಬ್ಇನ್ಸ್ಪೆಕ್ಟರ್ ಸ್ಥಳದಲ್ಲಿದ್ದ ಬಿದಿರಿನ ಮೆದೆಯಿಂದ ಆತನಿಗೆ ಹೊಡೆದು ಅಸ್ತ್ರವನ್ನು ಕೆಳಗೆ ಬೀಳಿಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ.
ಪ್ರಸ್ತುತ ತೀವ್ರವಾಗಿ ಗಾಯಗೊಂಡಿರುವ ಮಧುಮಿತಾ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
- Bengaluru Crime News.
- Bengaluru News
- Bengaluru police
- Dating App Murder Attempt
- Domestic Violence Bengaluru
- JP Nagar Acid Attack
- Machete Attack JP Nagar
- Nurse Attacked Bengaluru
- Venkatesan Madhumita Case
- ಕೌಟುಂಬಿಕ ಕಲಹ
- ಜೆಪಿ ನಗರ ಆಸಿಡ್ ದಾಳಿ
- ಡೇಟಿಂಗ್ ಆ್ಯಪ್ ಹತ್ಯೆ ಯತ್ನ
- ನರ್ಸ್ ಮೇಲೆ ಹಲ್ಲೆ
- ಬೆಂಗಳೂರು ಕ್ರೈಮ್ ನ್ಯೂಸ್
- ಬೆಂಗಳೂರು ಪೊಲೀಸ್
- ಬೆಂಗಳೂರು ಸುದ್ದಿ
- ರೀಲ್ಸ್ ಹುಚ್ಚು
- ವೆಂಕಟೇಶನ್ ಮಧುಮಿತಾ ಪ್ರಕರಣ





Leave a comment