Home ಕ್ರೈಂ ನ್ಯೂಸ್ ವಡ್ಲಪಟಿ ವಿಜಯಲಕ್ಷ್ಮಿ “ಸಿಲ್ಕ್ ಸ್ಮಿತಾ” ಆಗಿದ್ದೇ ರೋಚಕ: ಕೊನೆಯ ಕರೆಗಳು ಯಾರ್ಯಾರಿಗೆ ಮಾಡಿದ್ರು? ಸಾವಿನ ಹಿಂದಿನ ರಾತ್ರಿ ಆಕೆ ಹೇಳಲು ಬಯಸಿದ್ದಾದರೂ ಏನನ್ನು?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರುಸಿನಿಮಾ

ವಡ್ಲಪಟಿ ವಿಜಯಲಕ್ಷ್ಮಿ “ಸಿಲ್ಕ್ ಸ್ಮಿತಾ” ಆಗಿದ್ದೇ ರೋಚಕ: ಕೊನೆಯ ಕರೆಗಳು ಯಾರ್ಯಾರಿಗೆ ಮಾಡಿದ್ರು? ಸಾವಿನ ಹಿಂದಿನ ರಾತ್ರಿ ಆಕೆ ಹೇಳಲು ಬಯಸಿದ್ದಾದರೂ ಏನನ್ನು?

Share
ಸಿಲ್ಕ್ ಸ್ಮಿತಾ
Share

ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಮಾದಕ ನೋಟ ಹಾಗೂ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ನಟಿ ಸಿಲ್ಕ್ ಸ್ಮಿತಾ ತಮ್ಮ 35ನೇ ವಯಸ್ಸಿನಲ್ಲಿಯೇ ಚೆನ್ನೈನ ಸ್ವಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದರು.

1996ರ ಸೆಪ್ಟೆಂಬರ್ 23ರಂದು ಹೊರಬಿದ್ದ ಈ ಸುದ್ದಿ ಇಡೀ ಚಿತ್ರರಂಗವನ್ನೇ ತಲ್ಲಣಗೊಳಿಸಿತ್ತು. ಆದರೆ, ಅವರು ಆತ್ಮಹತ್ಯೆಗೆ ಶರಣಾಗುವ ಹಿಂದಿನ ರಾತ್ರಿ (ಸೆಪ್ಟೆಂಬರ್ 22) ಕೆಲವರಿಗೆ ಕರೆ ಮಾಡಿ ಏನೋ ತುರ್ತಾಗಿ ಮಾತನಾಡಲು ಯತ್ನಿಸಿದ್ದರು ಎಂಬ ವಿಚಾರ ಇಂದಿಗೂ ಅನೇಕ ಪ್ರಶ್ನೆಗಳನ್ನು ಬಾಕಿ ಉಳಿಸಿದೆ.

ಅನುರಾಧಾ ಮತ್ತು ರವಿಚಂದ್ರನ್‌ಗೆ ಮಾಡಿದ್ದ ಕರೆಗಳು:

ಸೆಪ್ಟೆಂಬರ್ 22ರ ಸಾಯಂಕಾಲ ಸಿಲ್ಕ್ ಸ್ಮಿತಾ ತಮ್ಮ ಆಪ್ತ ಸ್ನೇಹಿತೆ ಹಾಗೂ ನಟಿ ಅನುರಾಧಾ ಅವರಿಗೆ ಕರೆ ಮಾಡಿ, “ತುಂಬಾ ಮುಖ್ಯವಾದ ವಿಷಯ ಮಾತನಾಡಬೇಕಿದೆ, ತಕ್ಷಣವೇ ಮನೆಗೆ ಬಾ” ಎಂದು ಕೋರಿದ್ದರು. ಆದರೆ ಕೆಲವು ಕಾರಣಗಳಿಂದ ಅನುರಾಧಾ ಅವರಿಗೆ ಅಂದು ಹೋಗಲು ಸಾಧ್ಯವಾಗದೆ, “ನಾಳೆ ಬೆಳಿಗ್ಗೆ ಸಿಗೋಣ” ಎಂದಿದ್ದರು.

ಅದೇ ರಾತ್ರಿ ಅವರು ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೂ ಸತತವಾಗಿ ಕರೆ ಮಾಡಲು ಯತ್ನಿಸಿದ್ದರು. ‘ಹಳ್ಳಿ ಮೇಷ್ಟ್ರು’ ಸಿನಿಮಾದಲ್ಲಿ ತಮ್ಮ ಜೊತೆ ಅಭಿನಯಿಸಿದ್ದ ರವಿಚಂದ್ರನ್ ಅವರ ಮೇಲೆ ಸಿಲ್ಕ್ ಸ್ಮಿತಾ ಅವರಿಗೆ ಅಪಾರ ಗೌರವವಿತ್ತು. ಆದರೆ, ಅಂದು ರವಿಚಂದ್ರನ್ ಅವರು ಶೂಟಿಂಗ್‌ನಲ್ಲಿದ್ದ ಕಾರಣ ಹಾಗೂ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆ ಕರೆ ಸಂಪರ್ಕಗೊಳ್ಳಲಿಲ್ಲ. ಮಾರನೇ ದಿನ ಬೆಳಿಗ್ಗೆ ಸಿಲ್ಕ್ ಸ್ಮಿತಾ ಅವರ ಸಾವು ಸಂಭವಿಸಿತ್ತು. “ಒಂದೊಮ್ಮೆ ನಾನು ಆ ಕರೆ ಸ್ವೀಕರಿಸಿದ್ದರೆ, ಆಕೆಯ ಮನಸ್ಸಿನ ಹತಾಶೆಯನ್ನು ತಿಳಿದು ಜೀವ ಉಳಿಸಬಹುದಿತ್ತೇನೋ” ಎಂದು ರವಿಚಂದ್ರನ್ ಹಲವು ಬಾರಿ ನೆನೆದು ಭಾವುಕರಾಗಿದ್ದರು.

ಡೆತ್‌ನೋಟ್‌ನಲ್ಲಿದ್ದ ನೋವಿನ ಸಂಗತಿಗಳು:

ಅವರ ಮನೆಯಲ್ಲಿ ದೊರೆತ ಸೂಸೈಡ್ ನೋಟ್‌ನಲ್ಲಿ ತಮಗಾದ ವಂಚನೆ, ಏಕಾಂಗಿತನ ಹಾಗೂ ಆರ್ಥಿಕ ಕಷ್ಟಗಳ ಬಗ್ಗೆ ಉಲ್ಲೇಖಿಸಲಾಗಿತ್ತು. ಚಿತ್ರರಂಗದಲ್ಲಿ ತಮ್ಮನ್ನು ಕೇವಲ ಗ್ಲಾಮರ್ ವಸ್ತುವಾಗಿ ಬಳಸಿಕೊಂಡರು ಹಾಗೂ ಪ್ರೀತಿಯ ಹೆಸರಿನಲ್ಲಿ ನಂಬಿದವರು ತಮಗೆ ದ್ರೋಹ ಬಗೆದರು ಎಂದು ಅವರು ಬರೆದಿದ್ದರು.

ಕೇವಲ 4ನೇ ತರಗತಿಯವರೆಗೆ ಓದಿ, ಚಿಕ್ಕ ವಯಸ್ಸಿನಲ್ಲೇ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಮನೆ ಬಿಟ್ಟು ಬಂದಿದ್ದ ವಡ್ಲಪಟಿ ವಿಜಯಲಕ್ಷ್ಮಿ, ಮುಂದೆ ‘ಸಿಲ್ಕ್ ಸ್ಮಿತಾ’ ಆಗಿ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಮೆರೆದಿದ್ದರು. ಆದರೆ, ಕೊನೆ ಕ್ಷಣದಲ್ಲಿ ತಮ್ಮ ಮನಸ್ಸಿನ ಭಾರವನ್ನು ಹಂಚಿಕೊಳ್ಳಲು ಯತ್ನಿಸಿದರೂ, ಆ ಸಂಭಾಷಣೆಗಳು ಅಪೂರ್ಣವಾಗಿಯೇ ಉಳಿದುಹೋದವು.

Share

Leave a comment

Leave a Reply

Your email address will not be published. Required fields are marked *