ಈರೋಡ್ (ತಮಿಳುನಾಡು): ತನ್ನ ಪತ್ನಿಯನ್ನು ಶಾಲೆಯ ಅಡುಗೆ ಕೆಲಸದಿಂದ ವಜಾಗೊಳಿಸಿದ ಕೋಪದಲ್ಲಿ, ಸರ್ಕಾರಿ ಶಾಲೆಯ ಬೆಳಗಿನ ಉಪಹಾರದ ಸಾಂಬಾರ್ಗೆ ಸಗಣಿ ಪುಡಿ (ಗೊಬ್ಬರ/ರಾಸಾಯನಿಕ ಬಣ್ಣದ ಪುಡಿ) ಬೆರೆಸಿ ಸೇಡು ತೀರಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಆರುಮುಗಂ (48) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ಆರೋಪಿ ಆರುಮುಗಂ ಪತ್ನಿ ಅಲಮ್ಮಲ್ ಈ ಹಿಂದೆ ರಾಮಬೈಯಾಲೂರು ಸರ್ಕಾರಿ ನಡುಪ್ರಾಥಮಿಕ ಶಾಲೆಯಲ್ಲಿ ಒಪ್ಪಂದದ ಆಧಾರದ ಮೇಲೆ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಅವರು ತಯಾರಿಸುತ್ತಿದ್ದ ಅಡುಗೆಯ ಗುಣಮಟ್ಟ ಸರಿ ಇಲ್ಲವೆಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯು ಅವರನ್ನು ಕೆಲಸದಿಂದ ತೆಗೆದುಹಾಕಿ ಬೇರೆ ಅಡುಗೆಯವರನ್ನು ನೇಮಿಸಿಕೊಂಡಿತ್ತು. ಇದರಿಂದ ಆಕ್ರೋಶಗೊಂಡ ಆರುಮುಗಂ ಶಾಲೆಯ ಮೇಲೆ ಸೇಡು ತೀರಿಸಿಕೊಳ್ಳಲು ಹುನ್ನಾರ ನಡೆಸಿದ್ದ.
ಮಗುವಿಗೆ ಆಮಿಷ ಒಡ್ಡಿ ಕೃತ್ಯ:
ಆಗಸ್ಟ್ 29ರಂದು ಆರುಮುಗಂ ಅದೇ ಗ್ರಾಮದ 8ನೇ ತರಗತಿಯ ಶಾಲಾ ಬಾಲಕಿಯೊಬ್ಬಳಿಗೆ 10 ರೂಪಾಯಿ ನೀಡಿ, ಅಂಗಡಿಯಿಂದ ಸಗಣಿ ಪುಡಿ ತಂದು ಸಾಂಬಾರ್ಗೆ ಬೆರೆಸುವಂತೆ ಪುಸಲಾಯಿಸಿದ್ದ. ಆ ಬಾಲಕಿಯು 5 ರೂಪಾಯಿಗೆ ತಿಂಡಿ ಖರೀದಿಸಿ, ಉಳಿದ 5 ರೂಪಾಯಿಯಲ್ಲಿ ಸಗಣಿ ಪುಡಿ ಖರೀದಿಸಿದ್ದಳು. ಆದರೆ, ಅದೃಷ್ಟವಶಾತ್ ಆ ಬಾಲಕಿಯು ವಿದ್ಯಾರ್ಥಿಗಳಿಗೆ ಬಡಿಸುವ ದೊಡ್ಡ ಪಾತ್ರೆಯ ಸಾಂಬಾರ್ಗೆ ಹಾಕದೇ, ಶಿಕ್ಷಕರು ರುಚಿ ನೋಡಲು ಪ್ರತ್ಯೇಕವಾಗಿ ಇರಿಸಿದ್ದ ಸಣ್ಣ ಪಾತ್ರೆಯ ಸಾಂಬಾರ್ಗೆ ಮಾತ್ರ ಆ ಪುಡಿಯನ್ನು ಬೆರೆಸಿದ್ದಳು.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಆಗಸ್ಟ್ 31ರಂದು ಬೆಳಗಿನ ಉಪಹಾರ ಬಡಿಸುವ ಮುನ್ನ ಶಾಲೆಯ ರೇವತಿ ಎಂಬ ಶಿಕ್ಷಕಿ ಸಾಂಬಾರ್ ರುಚಿ ನೋಡಿದಾಗ ಅದು ಅತಿಯಾದ ಕಹಿ ಮತ್ತು ಹಳದಿ ಬಣ್ಣದಿಂದ ಕೂಡಿರುವುದು ಕಂಡುಬಂತು. ತಕ್ಷಣ ಎಚ್ಚೆತ್ತುಕೊಂಡ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯಿನಿ ವಿಚಾರಣೆ ನಡೆಸಿದಾಗ ವಿದ್ಯಾರ್ಥಿನಿಯು ನಿಜಸಂಗತಿಯನ್ನು ಬಾಯ್ಬಿಟ್ಟಿದ್ದಾಳೆ.
ಸದ್ಯ ಶಾಲೆಯ ಮುಖ್ಯೋಪಾಧ್ಯಾಯಿನಿ ನೀಡಿದ ದೂರಿನನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 123ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರುಮುಗಂನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಬಡಿಸುವ ಆಹಾರಕ್ಕೆ ಯಾವುದೇ ಹಾನಿಯಾಗದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.





Leave a comment