ಬೆಂಗಳೂರು: ಪಡೆದಿದ್ದ ಸಾಲದ ಬಡ್ಡಿ ಹಾಗೂ ವಾರಾಂತ್ಯದ ಕಂತಿನ ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸಲಿಲ್ಲ ಎಂಬ ಕಾರಣಕ್ಕೆ 30 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಿ, ಕತ್ತಿಯಿಂದ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿ ವೀಡಿಯೋ ರೆಕಾರ್ಡ್ ಮಾಡಿದ ಭೀಕರ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಸಂಪೂರ್ಣ ವಿವರ:
ಸಂತ್ರಸ್ತ ಮಹಿಳೆಯು ಸುಮಾರು ಎರಡು ವರ್ಷಗಳ ಹಿಂದೆ ರೇಷ್ಮಾ ಭಾನು ಎಂಬುವವರಿಂದ 1 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ನಂತರ ರೇಷ್ಮಾ ಅವರ ಮೂಲಕವೇ ನಜ್ರತ್ ಬೇಗಂ ಎಂಬುವವರಿಂದ ವಾರದ ಕಂತಿನ ಆಧಾರದ ಮೇಲೆ ಹೆಚ್ಚುವರಿಯಾಗಿ 50,000 ರೂಪಾಯಿ ಸಾಲ ಪಡೆದುಕೊಂಡಿದ್ದರು. ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಮಹಿಳೆಯು ಕಳೆದ ಕೆಲ ವಾರಗಳಿಂದ ಕಂತು ಮತ್ತು ಬಡ್ಡಿ ಪಾವತಿಸುವುದನ್ನು ನಿಲ್ಲಿಸಿದ್ದರು. ಸಾಲಗಾರರ ಕಿರುಕುಳ ತಾಳಲಾರದೆ ರೇಷ್ಮಾ ಅವರ ಫೋನ್ ಸಂಖ್ಯೆಯನ್ನು ಬ್ಲಾಕ್ ಮಾಡಿ, ಬಾಪೂಜಿನಗರದಲ್ಲಿರುವ ತಾಯಿಯ ಮನೆಗೆ ತೆರಳಿದ್ದರು.
ಕೆಲಸದ ನೆಪದಲ್ಲಿ ಕರೆಸಿ ಅಪಹರಣ:
ಆಗಸ್ಟ್ 27 ರಂದು, ನಜ್ರತ್ ಬೇಗಂ ನೊಂದ ಮಹಿಳೆಗೆ ಕರೆ ಮಾಡಿ ‘ಕೆಲಸವಿದೆ ಹಾಗೂ ಹಣ ಕೊಡುತ್ತೇನೆ’ ಎಂದು ನಂಬಿಸಿ ಗೊಲ್ಲರಹಟ್ಟಿಯ ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಸಂತ್ರಸ್ತೆ ತನ್ನ ಮಗನೊಂದಿಗೆ ಅಲ್ಲಿಗೆ ತೆರಳಿದಾಗ, ರೇಷ್ಮಾ ಭಾನು, ಆಕೆಯ ಪತಿ ಸುಹೇಲ್ ಮತ್ತು ಇತರರು ಏಕಾಏಕಿ ಮನೆಗೆ ನುಗ್ಗಿ ಬಾಗಿಲು ಹಾಕಿದ್ದಾರೆ. ಬಡ್ಡಿ ಸಮೇತ 11 ಲಕ್ಷ ರೂಪಾಯಿ ನೀಡುವಂತೆ ಪಟ್ಟು ಹಿಡಿದ ಸುಹೇಲ್, ಮಹಿಳೆಯ ಕೈಗೆ ಕತ್ತಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ.
ಅಲ್ಲಿಂದ ಸಂತ್ರಸ್ತೆ ಮತ್ತು ಆಕೆಯ ಮಗನನ್ನು ಆಟೋರಿಕ್ಷಾದಲ್ಲಿ ಕುಂಬಳಗೋಡು ಬಳಿಯ ಮನೆಗೆ ಕರೆದೊಯ್ದು ಬಂಧನದಲ್ಲಿಡಲಾಗಿತ್ತು. ನಂತರ ಮಗನನ್ನು ತಾಯಿಯ ಮನೆ ಬಳಿ ಬಿಟ್ಟು ಬಂದ ಆರೋಪಿಗಳು, ಮಹಿಳೆಯನ್ನು ಅರ್ಧನಗ್ನಗೊಳಿಸಿ ಮೊಬೈಲ್ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಣ ನೀಡದಿದ್ದರೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಮಹಿಳೆ ಕಾಣೆಯಾಗಿರುವ ಬಗ್ಗೆ ಆಕೆಯ ತಾಯಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳ ನೆರವಿನಿಂದ ಮಹಿಳೆ ಇರುವ ಸ್ಥಳವನ್ನು ಪತ್ತೆಹಚ್ಚಿ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮಾ ಭಾನು, ನಜ್ರತ್ ಬೇಗಂ ಹಾಗೂ ಸುಹೇಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ವಿವಿಧ ಕಠಿಣ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
- assault case
- Bengaluru Crime News.
- Bengaluru police rescue
- BNS Sections
- Chandra Layout police
- extortion threat
- Kumbalgodu
- loan harassment
- Reshma Banu
- woman kidnapped
- ಕುಂಬಳಗೋಡು
- ಚಂದ್ರಾಲೇಔಟ್ ಪೊಲೀಸ್ ಠಾಣೆ
- ಬೆಂಗಳೂರು ಅಪರಾಧ ಸುದ್ದಿ
- ಬೆಂಗಳೂರು ಪೊಲೀಸರು
- ಮಹಿಳೆಯ ಅಪಹರಣ
- ರೇಷ್ಮಾ ಭಾನು
- ವಿವಸ್ತ್ರಗೊಳಿಸಿ ಹಲ್ಲೆ
- ವೀಡಿಯೋ ಬೆದರಿಕೆ
- ಸಾಲದ ಕಿರುಕುಳ
- ಹಲ್ಲೆ ಪ್ರಕರಣ





Leave a comment