ಬೆಂಗಳೂರು: AEA ಅಕ್ರಮದಲ್ಲಿ ನಾನು ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯಲು ನಾನು ಸಿದ್ಧ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿದ್ಧರಿದ್ದಾರೆಯೇ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ವಿಶೇಷವಾಗಿ KPSCಯ 24 ಇಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ನನ್ನ ಪಾತ್ರವಿದೆ ಎಂದು ಆರೋಪಿಸುತ್ತಿರುವ ಕುಮಾರಸ್ವಾಮಿ ಅವರು ಇದಕ್ಕೆ ಒಂದಾದರೂ ದಾಖಲೆ ನೀಡಲಿ. ಪ್ರತಿನಿತ್ಯ ದಾಖಲೆಗಳಿಲ್ಲದೆ ಆರೋಪ ಮಾಡುವುದು ‘ಹಿಟ್ ಅಂಡ್ ರನ್’ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನನ್ನ ಪಾತ್ರ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಆರೋಪ ಸಾಬೀತಾಗದಿದ್ದರೆ ಬಿಜೆಪಿ–ಜೆಡಿಎಸ್ ನಾಯಕರು ರಾಜಕೀಯ ನಿವೃತ್ತಿಗೆ ಸಿದ್ಧರಿದ್ದಾರೆಯೇ? ಆರೋಪ ಮಾಡುವುದಕ್ಕಿಂತ ದಾಖಲೆ ತೋರಿಸುವ ಧೈರ್ಯ ತೋರಿಸಿ.
ರಾಜಕೀಯಕ್ಕಾಗಿ ಹಿಟ್ ಅಂಡ್ ರನ್ ಮಾಡುವುದು ಸುಲಭ. ಆದರೆ ಸತ್ಯವನ್ನು ದಾಖಲೆಗಳೊಂದಿಗೆ ಸಾಬೀತುಪಡಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
24 ಎಇಇ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಆಗಿರುವ ಲೋಪ ಏನು ಎನ್ನುವುದನ್ನು ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ಹೇಳುತ್ತಿಲ್ಲ. ಅವರು ಕೆಪಿಎಸ್ಸಿಯ ಯಾವುದೋ ತನಿಖಾ ವರದಿಯನ್ನು ಪ್ರಸ್ತಾಪಿಸಿದ್ದಾರಷ್ಟೆ.
ಆನಂದ್ ಸಿದ್ದಾರೆಡ್ಡಿ ಎಂಬುವವರು ಈ ಪಟ್ಟಿಯಲ್ಲಿ ಲೋಪವಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ಕೆಲವು ಅಭ್ಯರ್ಥಿಗಳ ಓಎಂಆರ್ ಶೀಟ್ಗಳನ್ನು ತಿದ್ದಲಾಗಿದೆ ಎಂದು ಅವರು ಆರೋಪಿಸಿದ್ದರು. ಈ ಸಂಬಂಧ ಕೆಪಿಎಸ್ಸಿ ಸಮಿತಿಯೊಂದನ್ನು ರಚಿಸಿತ್ತು. ಉಪಸಮಿತಿ ತನಿಖೆ ಹಂತದಲ್ಲಿ ಇರುವಾಗಲೇ ಕೆಪಿಎಸ್ಸಿಯು ಆಯ್ಕೆಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿತ್ತು. ಪರೀಕ್ಷೆ ನಡೆಸಿದ್ದು, ಆಯ್ಕೆ ಪಟ್ಟಿ ಪ್ರಕಟಿಸಿದ್ದು ಎಲ್ಲವೂ ಕೆಪಿಎಸ್ಸಿ. ಇದಕ್ಕೂ ಗ್ರಾಮೀಣಾಭಿವೃದ್ಧಿ ಇಲಾಖೆಗೂ ಯಾವ ಸಂಬಂಧವಿದೆ? ಪಟ್ಟಿಯನ್ನು ರದ್ದುಪಡಿಸುವ ಅವಕಾಶ ಮತ್ತು ಅಧಿಕಾರ ಆಯೋಗಕ್ಕೆ ಇತ್ತು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆ ವರದಿ ಕುರಿತು ನಮ್ಮ ಗಮನಕ್ಕೂ ತಿಳಿಸಿರಲಿಲ್ಲ. ಮಾಧ್ಯಮದಲ್ಲಿನ ವರದಿಗಳನ್ನು ಗಮನಿಸಿ, ಆಯ್ಕೆ ಪಟ್ಟಿ ಕುರಿತು ಮಾಹಿತಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯು ಕೆಪಿಎಸ್ಸಿಗೆ ಕೇಳಿದ್ದರೂ, ಅವರು ಯಾವ ಮಾಹಿತಿಯನ್ನೂ ನೀಡಿರಲಿಲ್ಲ. ಆದರೆ ಬಳಿಕ ಹಿಂದಿನ ಮೂವರು ಸದಸ್ಯರ ಸಮಿತಿಯನ್ನು ರದ್ದುಗೊಳಿಸಿ, ಐವರ ಹೊಸ ಸಮಿತಿಯನ್ನು ರಚಿಸಿದ್ದರು. 40 ಸಭೆಗಳನ್ನು ನಡೆಸಿದ್ದ ಈ ಸಮಿತಿ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಅದರ ಕುರಿತು ಯಾವ ಮಾಹಿತಿಯನ್ನೂ ನೀಡಿಲ್ಲ. ಆರೋಪ ಮಾಡಿದ್ದ ವ್ಯಕ್ತಿಯು ಸಮಿತಿ ಎದುರು ವಿಚಾರಣೆಗೆ ಹಾಜರಾಗಿರಲಿಲ್ಲ ಎಂದು ವರದಿಯಲ್ಲಿ ತಿಳಿಸಿದೆ ಎಂದಿದ್ದಾರೆ.
ಹೀಗಾಗಿ ಕೆಪಿಎಸ್ಸಿ ಅಂತಿಮ ಆಯ್ಕೆ ಪಟ್ಟಿ ಅನ್ವಯ RDPR ಇಲಾಖೆಯಿಂದ ನೇಮಕಾತಿ ಆದೇಶ ಹೊರಡಿಸಲಾಗಿತ್ತು. ಅವರೇ ನೀಡಿದ ಆಯ್ಕೆಪಟ್ಟಿಯಲ್ಲಿನ ಕೊನೆಯ ಅಭ್ಯರ್ಥಿಯ ನೇಮಕಾತಿ ಆದೇಶ ನೀಡಿದ ಮರುದಿನ ತನಿಖಾ ಉಪಸಮಿತಿಯು ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಮಾಜಿ ಮುಖ್ಯಮಂತ್ರಿಗಳಿಗೆ ಹೋಗಿ ವರದಿ ನೀಡುತ್ತಾರೆ. ಆದರೆ ಅದನ್ನು ನಮಗೆ ನೀಡಿ ಎಂದು ಪತ್ರ ಬರೆದರೂ ಆರ್ಡಿಪಿಆರ್ ಇಲಾಖೆಗೆ ಯಾವ ವರದಿಯನ್ನೂ ನೀಡಿರಲಿಲ್ಲ. ಹೈಕೋರ್ಟ್ನ ಬಾಕಿ ಇರುವ ನಿರ್ಧಾರದಂತೆ ನಾವು ಷರತ್ತುಬದ್ಧ ಆದೇಶ ಹೊರಡಿಸಿದ್ದೆವು. ಈ ರೀಷಿ ಷರತ್ತುಬದ್ಧ ಆದೇಶ ಹಲವಾರು ಇಲಾಖೆಗಳಲ್ಲಿ ಈ ಹಿಂದೆ ನೀಡಲಾಗಿತ್ತು. ಇದರಲ್ಲಿ ಅಕ್ರಮ ಏನಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕೆಪಿಎಸ್ಸಿ ತನಿಖಾ ವರದಿಯನ್ನು ಕುಮಾರಸ್ವಾಮಿ ಅವರ ಬಳಿಯೇ ಪಡೆದುಕೊಳ್ಳಿ. ವರದಿಯು ನಮಗಿಂತಲೂ ಮುಂಚೆ ಅವರಿಗೇ ಸಿಕ್ಕಿರಬಹುದು. ಇದರಲ್ಲಿ ಆರ್ಡಿಪಿಆರ್ ವಿರುದ್ಧ ಆರೋಪವಿದೆಯೇ? ಓಎಂಆರ್ ಶೀಟ್ ತಿದ್ದಿದ್ದಾರೆ ಎಂದರೆ, ಅದು ಯಾರ ವಶದಲ್ಲಿ ಇರುತ್ತದೆ? ಕೆಪಿಎಸ್ಸಿ ಬಳಿ ತಾನೆ? ಜೆಡಿಎಸ್ನವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲವೇ? ನಮಗೂ ಅದಕ್ಕೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
- AEE scam allegations
- HD Kumaraswamy
- Hit and run politics
- Karnataka Politics
- KPSC recruitment controversy
- OMR sheet tampering
- Political War of Words.
- Priyank Kharge
- RDPR department
- ಆರ್ಡಿಪಿಆರ್ ಇಲಾಖೆ
- ಎಇಇ ನೇಮಕಾತಿ ವಿವಾದ
- ಎಚ್.ಡಿ. ಕುಮಾರಸ್ವಾಮಿ
- ಒಎಂಆರ್ ಶೀಟ್ ತಿದ್ದಾಟ
- ಕರ್ನಾಟಕ ರಾಜಕೀಯ
- ಕೆಪಿಎಸ್ಸಿ ಅಕ್ರಮ
- ಪ್ರಿಯಾಂಕ್ ಖರ್ಗೆ
- ಹಿಟ್ ಅಂಡ್ ರನ್ ರಾಜಕಾರಣ





Leave a comment