ದಾವಣಗೆರೆ: ಮುಂಬರುವ ಈದ್ ಮಿಲಾದ್ ಹಾಗೂ ಗಣೇಶೋತ್ಸವದ ಆಚರಣೆ ಸಂದರ್ಭದಲ್ಲಿ ಅತಿಯಾದ ಶಬ್ಧದಿಂದ ಉಂಟಾಗುತ್ತಿರುವ ಶಬ್ಧ ಮಾಲಿನ್ಯವನ್ನು ತಡೆಗಟ್ಟಲು ಡಿಜೆ ಬಳಕೆ ಸಂಪೂರ್ಣ ನಿಷೇಧಿಸುವಂತೆ ಪ್ರಕೃತಿ ಸಂರಕ್ಷಣಾ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಉತ್ಸವಗಳ ವೇಳೆ ಕೆಲವೆಡೆ ಡಿಜೆ ಸೌಂಡ್ ವ್ಯವಸ್ಥೆಯನ್ನು ಅತಿಯಾದ ಶಬ್ಧದೊಂದಿಗೆ ಬಳಸುತ್ತಿರುವುದರಿಂದ ಸಾರ್ವಜನಿಕರಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಹಾಗೂ ಮಕ್ಕಳ ಆರೋಗ್ಯ ಮತ್ತು ನೆಮ್ಮದಿಗೆ ತೀವ್ರ ತೊಂದರೆಯಾಗುತ್ತಿದೆ. ಕಳೆದ ಬಾರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಿಜೆ ಸೌಂಡ್ ನಿಂದ ಉಂಟಾದ ಗಲಾಟೆಗಳು ಹಾಗೂ ಸಾವು ನೋವುಗಳು ಸಂಭವಿಸಿರುವುದು ಕಳವಳಕಾರಿಯಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಂಸ್ಥೆಯ ಮುಖಂಡರು ಮನವಿ ಮಾಡಿದರು.
ಕಳೆದ ಬಾರಿ ಜಿಲ್ಲೆಯಲ್ಲಿ ಜಿಲ್ಲಾಡಳಿತವು ಡಿಜೆ ಸೌಂಡ್ಗೆ ಕಟ್ಟುನಿಟ್ಟಿನ ನಿಯಂತ್ರಣ ವಿಧಿಸಿ ಹಬ್ಬದ ಆಚರಣೆಯನ್ನು ಶಾಂತಿಯುತವಾಗಿ ನಿರ್ವಹಿಸಲು ಉತ್ತಮ ಮಾದರಿಯನ್ನು ರೂಪಿಸಿತ್ತು. ಅದೇ ರೀತಿಯಲ್ಲಿ ಈ ಬಾರಿಯೂ ಸುಪ್ರೀಂ ಕೋರ್ಟ್ ನಿರ್ದೇಶನಗಳಂತೆ ಹಾಗೂ ಶಬ್ಧ ಮಾಲಿನ್ಯ ನಿಯಂತ್ರಣ ನಿಯಮಗಳಂತೆ ಕಟ್ಟುನಿಟ್ಟಾಗಿ ಡಿಜೆ ಬಳಕೆ ನಿಷೇಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕೃತಿ ಸಂರಕ್ಷಣಾ ಸಂಸ್ಥೆಯ ರಾಜ್ಯಾಧ್ಯಕ್ಷ ಕೆ. ಬಿ. ಕೊಟ್ರೇಶ್, ಉಪಾಧ್ಯಕ್ಷ ಸುಲ್ತಾನಪ್ಪ ಗೊಣ್ಣಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ದೇವರಮನೆ, ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್, ಗುರುಸಿದ್ಧ ಸ್ವಾಮಿ, ಎಂ. ಹನುಮಂತಪ್ಪ, ರಮೇಶ್ ವಾಲ್ಮೀಕಿ, ಪ್ರಸನ್ನ ಬೆಳಕೆರೆ, ಕೇಶವ್, ಎಂ. ಶೇಟ್, ಪ್ರಕಾಶ್, ನಾಗರಾಜ್ ಸುರ್ವೆ, ಮಣಿಕಂಠ ಮಾರುತಿ, ಅರುಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





Leave a comment