ಪೆನುಕೊಂಡ/ದಾವಣಗೆರೆ: ಆಂಧ್ರಪ್ರದೇಶದ ಇತಿಹಾಸ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರವಾದ ಪೆನುಕೊಂಡದ ಹಜರತ್ ಖ್ವಾಜಾ ಸೈಯದ್ ಷಾ ಬಾಬಾ ಫಕ್ರುದ್ದೀನ್ ದರ್ಗಾಕ್ಕೆ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಸಮರ್ಥ್ ಶಾಮನೂರು ಅವರು ಜಂಟಿಯಾಗಿ ಭೇಟಿ ನೀಡಿ, ವಿಶೇಷ ಭಕ್ತಿ ಸಮರ್ಪಿಸಿದರು.
ದರ್ಗಾಕ್ಕೆ ಆಗಮಿಸಿದ ಸಚಿವರು ಮತ್ತು ಶಾಸಕರನ್ನು ದರ್ಗಾದ ಧರ್ಮದರ್ಶಿಗಳು ಹಾಗೂ ಪ್ರಮುಖರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಚಿವರು ಹಾಗೂ ಶಾಸಕರು ಬಾಬಾ ಫಕ್ರುದ್ದೀನ್ ಅವರ ಪವಿತ್ರ ಗದ್ದುಗೆಗೆ ಜಿಯಾರತ್ ನೆರವೇರಿಸಿ, ಚಾದರ್ ಸಮರ್ಪಿಸುವ ಮೂಲಕ ಶ್ರದ್ಧಾಭಕ್ತಿಗಳಿಂದ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
“ಪೆನುಕೊಂಡದ ಹಜರತ್ ಬಾಬಾ ಫಕ್ರುದ್ದೀನ್ ದರ್ಗಾವು ಶತಶತಮಾನಗಳಿಂದಲೂ ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವೈಕ್ಯತೆಯ ಮಹೋನ್ನತ ಕೇಂದ್ರವಾಗಿದೆ. ಇಲ್ಲಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿರುವುದು ಮನಸ್ಸಿಗೆ ಅಪಾರ ಶಾಂತಿ ಮತ್ತು ತೃಪ್ತಿಯನ್ನು ತಂದಿದೆ. ಇಡೀ ನಾಡಿನ ಜನತೆಗೆ ಒಳಿತಾಗಲಿ, ರಾಜ್ಯದಲ್ಲಿ ಸುಖ-ಶಾಂತಿ ನೆಲೆಸಲಿ ಹಾಗೂ ನಾಡಿನ ಪ್ರತಿಯೊಬ್ಬ ಜನತೆಯೂ ಉತ್ತಮ ಆರೋಗ್ಯ, ಆಯುಷ್ಯ ಮತ್ತು ಐಶ್ವರ್ಯದಿಂದ ಬಾಳುವಂತಾಗಲಿ ಎಂದು ಬಾಬಾ ಅವರಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದೇನೆ,” ಎಂದರು.
ಶಾಸಕ ಸಮರ್ಥ್ ಶಾಮನೂರು ಅವರು ಮಾತನಾಡಿ, ಈ ಐತಿಹಾಸಿಕ ಧಾರ್ಮಿಕ ಕೇಂದ್ರದ ದರ್ಶನ ಪಡೆದದ್ದು ಸೌಭಾಗ್ಯದ ಸಂಗತಿಯಾಗಿದ್ದು, ಕ್ಷೇತ್ರವು ಎಲ್ಲರಿಗೂ ಸನ್ಮತಿಯನ್ನು ಕರುಣಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ದಾವಣಗೆರೆಯ ಪ್ರಮುಖ ಮುಖಂಡರು, ದರ್ಗಾದ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.





Leave a comment