ಸಿಂಗೂರು/ಸಿದ್ದಿಪೇಟೆ: ನಿವೃತ್ತಿಯ ಹಣ ಮತ್ತು ಆಸ್ತಿ ವಿಚಾರಕ್ಕಾಗಿ ಪತಿ-ಪತ್ನಿ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಪತ್ನಿಯೇ ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಭೀಕರ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ನಡೆದಿದೆ.
ಆಸಿಫಾಬಾದ್ನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ (Commercial Tax Officer) ಸೇವೆ ಸಲ್ಲಿಸುತ್ತಿದ್ದ ವೆಂಕಟೇಶಂ ಕೊಲೆಯಾದ ದುರ್ದೈವಿ. ಇವರ ಪತ್ನಿ ರಾಜಮಣಿ ಎಎನ್ಎಂ (Auxiliary Nurse Midwife) ಆಗಿ ಕೆಲಸ ಮಾಡುತ್ತಿದ್ದಾರೆ.
ವೆಂಕಟೇಶಂ ಅವರು ಇದೇ ತಿಂಗಳು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಲಿದ್ದರು. ಅವರಿಗೆ ಬರಬೇಕಿದ್ದ ನಿವೃತ್ತಿ ವೇತನದ ಹಣ ಹಾಗೂ ಕುಟುಂಬದ ಆಸ್ತಿ ಹಂಚಿಕೆ ವಿಷಯವಾಗಿ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಸೋಮವಾರವೂ ಇದೇ ವಿಚಾರಕ್ಕೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಆಕ್ರೋಶಗೊಂಡ ರಾಜಮಣಿ ಭಾರವಾದ ಕಲ್ಲಿನಿಂದ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ವೆಂಕಟೇಶಂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು ಆರೋಪಿ ರಾಜಮಣಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.





Leave a comment