ಪ್ರಯಾಗ್ರಾಜ್ (ಉತ್ತರ ಪ್ರದೇಶ): ಸಹೋದರನ ಪ್ರಿಯತಮೆಯನ್ನು ತಾನು ವಶಪಡಿಸಿಕೊಳ್ಳಬೇಕೆಂಬ ದುಷ್ಟ ಆಸೆಗೆ ಯುವಕನೊಬ್ಬ ತನ್ನ ಸ್ವಂತ ಸಹೋದರನನ್ನೇ ಸುತ್ತಿಗೆಯಿಂದ ಹೊಡೆದು, ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು 20 ವರ್ಷದ ಸುಮಿತ್ ಕುಮಾರ್ ಅಲಿಯಾಸ್ ಸಾಹಿಲ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಆತನ ಸೋದರಸಂಬಂಧಿ, 21 ವರ್ಷದ ಕಂಟೆಂಟ್ ಕ್ರಿಯೇಟರ್ ಶಿವಂ ರಾಯ್ ಎಂದು ಗುರುತಿಸಿ ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ರೀಚಾರ್ಜ್ನಿಂದ ಶುರುವಾಯ್ತು ಪ್ರೇಮ ಪ್ರಸಂಗ!
ಪೊಲೀಸ್ ವಿಚಾರಣೆ ವೇಳೆ ಆರೋಪಿ ಶಿವಂ ರಾಯ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸುಮಿತ್ನ ಪ್ರಿಯತಮೆಗೆ ಶಿವಂ ಆಗಾಗ ಮೊಬೈಲ್ ರೀಚಾರ್ಜ್ ಮಾಡಿಸುತ್ತಿದ್ದ. ಈ ಪ್ರಕ್ರಿಯೆಯಲ್ಲಿ ಆಕೆಯ ಜೊತೆ ನಿಕಟ ಸಂಪರ್ಕ ಬೆಳೆಸಿಕೊಂಡ ಶಿವಂ, ಆಕೆಯನ್ನು ತಾನೇ ಪಡೆಯಬೇಕೆಂದು ಯೋಜಿಸಿದ್ದ. ಇದಕ್ಕಾಗಿ ಸುಮಿತ್ನನ್ನು ದಾರಿಯಿಂದ ತೆಗೆದುಹಾಕಲು ನಿರ್ಧರಿಸಿದ್ದ.
ಕೊಲೆ ಮಾಡಿ ₹50 ಲಕ್ಷ ಕಪ್ಪಕ್ಕೆ ಬೇಡಿಕೆ!
ಜುಲೈ 23 ರಂದು ಸುಮಿತ್ನನ್ನು ಕಾಡಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಶಿವಂ, ಸುತ್ತಿಗೆಯಿಂದ ಆತನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಆತನ ಗುರುತು ಸಿಗದಂತೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಕೊಲೆಯ ನಂತರ ಪ್ರಕರಣದ ಹಾದಿ ತಪ್ಪಿಸಲು, ಸುಮಿತ್ನ ಮೊಬೈಲ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯನ್ನು ಬಳಸಿ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿದ್ದ. “ನಿಮ್ಮ ಮಗನನ್ನು ಅಪಹರಿಸಲಾಗಿದೆ, ಜೀವಂತವಾಗಿ ಬೇಕಿದ್ದರೆ ₹50 ಲಕ್ಷ ನೀಡಬೇಕು” ಎಂದು ಯುಪಿಐ (UPI) ಐಡಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮಗ ಜೀವಂತವಾಗಿದ್ದಾನೆ ಎಂದು ನಂಬಿದ ಕುಟುಂಬಸ್ಥರು ₹7,000 ಹಣವನ್ನು ವರ್ಗಾಯಿಸಿದ್ದರು.
ಸಿಸಿಟಿವಿ ಮತ್ತು ತಾಂತ್ರಿಕ ಸಾಕ್ಷ್ಯದಿಂದ ಸಿಕ್ಕಿಬಿದ್ದ ಆರೋಪಿ
ಸುಮಿತ್ ನಾಪತ್ತೆಯಾದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ಕರೆ ದಾಖಲೆಗಳ (Call Records) ತಾಂತ್ರಿಕ ಪರಿಶೀಲನೆ ನಡೆಸಿ ಶಿವಂ ರಾಯ್ನನ್ನು ವಶಕ್ಕೆ ಪಡೆದರು. ತೀವ್ರ ವಿಚಾರಣೆಯ ನಂತರ ಕೊಳೆತ ಹಾಗೂ ಭಾಗಶಃ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.





Leave a comment