ಜಮ್ಮು: ಜಮ್ಮುವಿನ ಪ್ರಸಿದ್ಧ ಮತ್ತು ಐತಿಹಾಸಿಕ ರಘುನಾಥ ದೇವಾಲಯವು ಗುರುವಾರ ಒಂದು ಅಪೂರ್ವ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿದೆ. ದೇವಾಲಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಅರ್ಚಕಿಯರ ತಂಡವೊಂದು ಗರ್ಭಗುಡಿಯೊಳಗೆ ಮಂತ್ರಘೋಷಗಳೊಂದಿಗೆ ಸಂಜೆಯ ಮಹಾ ಆರತಿಯನ್ನು ನೆರವೇರಿಸುವ ಮೂಲಕ ಶತಮಾನಗಳಷ್ಟು ಹಳೆಯದಾದ ಪುರುಷ ಪ್ರಧಾನ ಸಂಪ್ರದಾಯದ ಗೋಡೆಯನ್ನು ಬದಿಗೆ ಸರಿಸಿದೆ.
ಕೇಸರಿ ಸೀರೆಯನ್ನುಟ್ಟು, ಕೈಯಲ್ಲಿ ಜ್ಯೋತಿಯನ್ನು ಹಿಡಿದು ಅತ್ಯಂತ ಭಕ್ತಿ ಮತ್ತು ನಿರರ್ಗಳವಾಗಿ ಮಂತ್ರಗಳನ್ನು ಪಠಿಸುತ್ತಾ ಮಹಿಳೆಯರು ಆರತಿ ಬೆಳಗಿದ ದೃಶ್ಯ ನೆರೆದಿದ್ದ ಭಕ್ತರಲ್ಲಿ ರೋಮಾಂಚನ ಉಂಟುಮಾಡಿತು. 1835ರಲ್ಲಿ ನಿರ್ಮಾಣವಾದ ಈ ಐತಿಹಾಸಿಕ ದೇವಾಲಯವು ರಾಜ ಮಹಾರಾಜರ ಕಾಲದಿಂದಲೂ ಕೇವಲ ಪುರುಷ ಅರ್ಚಕರಿಂದಲೇ ಪೂಜೆಗಳನ್ನು ಕಾಣುತ್ತಿತ್ತು.
ಬದಲಾವಣೆಯ ಹಿಂದಿನ ಶಕ್ತಿ:
ಮಹಾರಾಜ ಹರಿ ಸಿಂಗ್ ಅವರ ಮೊಮ್ಮಗನ ಪತ್ನಿಯಾದ ಕುವರಾನಿ ರಿತು ಸಿಂಗ್ ಅವರ ದೃಢ ಸಂಕಲ್ಪದ ಪ್ರಯತ್ನದಿಂದಾಗಿ ಈ ಐತಿಹಾಸಿಕ ಬದಲಾವಣೆ ಸಾಧ್ಯವಾಗಿದೆ. ಸಮಾಜವನ್ನು ಒಪ್ಪಿಸಿ, ಮಹಿಳೆಯರಿಗೆ ಧಾರ್ಮಿಕ ವಿಧಿವಿಧಾನಗಳ ತರಬೇತಿ ನೀಡಲು ಅವರು ಕಳೆದ ಒಂದು ವರ್ಷದಿಂದ ಶ್ರಮಿಸಿದ್ದರು. “ಇದು ಪುರುಷರನ್ನು ಬದಿಗೊತ್ತುವ ಪ್ರಯತ್ನವಲ್ಲ. ಶಿವ ಮತ್ತು ಶಕ್ತಿಯ ಸಮಾನತೆಯ ಸಂಕೇತ. ನಾವು ಕನ್ಯಾ ಪೂಜೆ ಮತ್ತು ದೇವಿಯ ಆರಾಧನೆ ಮಾಡುವಾಗ, ಮಹಿಳೆಯರನ್ನು ಪೂಜೆ ಮಾಡುವುದರಿಂದ ದೂರ ಇಡುವುದು ಹೇಗೆ ಸಾಧ್ಯ?” ಎಂದು ರಿತು ಸಿಂಗ್ ಪ್ರಶ್ನಿಸಿದ್ದಾರೆ.
ಸದ್ಯ 150ಕ್ಕೂ ಹೆಚ್ಚು ಯುವತಿಯರು ಇಲ್ಲಿ ಅರ್ಚಕ ವೃತ್ತಿಯ ತರಬೇತಿ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇವರಿಗೆ ಹವನ-ಹೋಮಗಳ ಸಂಪೂರ್ಣ ಜ್ಞಾನ ನೀಡಿ ವಿವಿಧ ದೇವಾಲಯಗಳಲ್ಲಿ ‘ಪೂಜಾರಿಣಿ’ಗಳಾಗಿ ನೇಮಿಸುವ ಗುರಿ ಹೊಂದಲಾಗಿದೆ. ದೇವಾಲಯಕ್ಕೆ ಬಂದಿದ್ದ ಭಕ್ತರು, “ಮಹಿಳೆಯರು ಆರತಿ ತಟ್ಟೆ ಹಿಡಿದು ಪೂಜೆ ಮುನ್ನಡೆಸುತ್ತಿರುವುದನ್ನು ಕಣ್ಣಾರೆ ಕಂಡು ಧನ್ಯರಾದೆವು” ಎಂದು ಭಾವುಕರಾಗಿ ನುಡಿದಿದ್ದಾರೆ.





Leave a comment