SUDDIKSHANA KANNADA NEWS/ DAVANAGERE/ DATE:17-10-2024
ದಾವಣಗೆರೆ: ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯು ದಾವಣಗೆರೆ ಜಿಲ್ಲೆಯಲ್ಲಿ ಆಗಿದ್ದು, ದಾವಣಗೆರೆ ಮತ್ತು ಹರಿಹರದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಾತ್ರವಲ್ಲ, ಮನೆಯಿಂದ ನೀರು
ಹೊರ ಹಾಕಲು ನಿವಾಸಿಗಳು ಹರಸಾಹಸ ಪಡಬೇಕಾಯಿತು.
ಕಳೆದ ಮೂರು ದಿನಗಳಿಂದಲೂ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅದರಲ್ಲಿಯೂ ಬುಧವಾರ ಮಧ್ಯಾಹ್ನ ಆರಂಭವಾದ ಮಳೆಯು ಗುರುವಾರ ಬೆಳಿಗ್ಗೆಯವರೆಗೂ ಸುರಿಯಿತು. ಇದರಿಂದಾಗಿ ನೂರಾರು ಮನೆಗಳಿಗೆ ನೀರು ನುಗ್ಗಿದ
ಪರಿಣಾಮ ನಿವಾಸಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಮನೆಯೊಳಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿ ದಿನಿಸುಗಳು, ತರಕಾರಿ, ಅಕ್ಕಿ ಸೇರಿದಂತೆ ಹಲವು ವಸ್ತುಗಳು ನೀರು ಪಾಲಾದವು. ಕೆಲ ಮನೆಗಳಲ್ಲಿನ ಜನರು ಮಳೆಯಲ್ಲಿಯೇ ರಾತ್ರಿ ಜಾಗರಣೆ ಮಾಡುವಂತಾಗಿದೆ.
ವಾಯುಭಾರ ಕುಸಿತದಿಂದ ಕಳೆದ ಮೂರು ದಿನಗಳಿಂದಲೂ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪಿಸಾಳೆ ಕಾಂಪೌಂಡ್ ನ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದರು.
ಬೈಕ್ ಗಳು ನೀರಿನಲ್ಲಿ ಮುಳುಗಡೆಯಾಗಿದೆ. ಮನೆಯ ಕಾಂಪೌಂಡ್ ಒಳಗೂ ನೀರು ನುಗ್ಗಿದ್ದು, ನೀರು ಹೊರ ಹಾಕಲು ಸ್ಥಳೀಯರು ಹರಸಾಹಸಪಡಬೇಕಾಯಿತು.
ಅರುಣ ಚಿತ್ರಮಂದಿರದ ಸಮೀಪದಲ್ಲಿನ ಮನೆಗಳಿಗೂ ನೀರು ನುಗ್ಗಿದ್ದು ತುಂಬಾನೇ ತೊಂದರೆ ಅನುಭವಿಸಬೇಕಾಯಿತು. ಇನ್ನೂ ಕೆಲವೆಡೆ ನೀರು ನುಗ್ಗಿದ್ದು, ಮಳೆಯ ಆರ್ಭಟ ಹೆಚ್ಚಿರುವುದರಿಂದ ಸಮಸ್ಯೆಗಳು ಸೃಷ್ಟಿಯಾಗಿವೆ.
ಹರಿಹರ ತಾಲೂಕಿನಲ್ಲಿಯೂ ಭಾರೀ ಮಳೆಯಾಗಿದೆ. ಹರಿಹರ ನಗರದ ಬೆಂಕಿನಗರ, ಕಾಳಿದಾಸ ನಗರ , ಜೈ ಭೀಮ್ ನಗರ ಹಾಗೂ ಆಶ್ರಯ ಕಾಲೋನಿಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದಾರೆ.
ಮನೆಗಳಿಗೆ ನೀರು ನುಗ್ಗಿದ್ದ ಕಾರಣ ಸ್ಥಳೀಯರು ಸಮಸ್ಯೆ ಅನುಭವಿಸಿದರು. ದವಸಧಾನ್ಯ, ಆಹಾರ ಪದಾರ್ಥಗಳು, ಇತರೆ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನೂ ಮನೆಯಲ್ಲಿದ್ದ ವಸ್ತುಗಳು ನೀರಿಗಾಹುತಿಯಾಗಿವೆ. ಜೊತೆಗೆ ರಾತ್ರಿಯಿಡಿ ಮಳೆಯಲ್ಲಿಯೇ ಜಾಗರಣೆ ಮಾಡುವಂತಾಗಿದೆ. ತುಂಗಾಭದ್ರಾ ನದಿ ತೀರದ ವಾಸಿಗಳಂತೂ ಮಳೆ ರಗಳೆಗೆ ಹಿಡಿಶಾಪ ಹಾಕಿದರು.
ಪ್ರತಿವರ್ಷವೂ ನದಿ ಪಾತ್ರದ ವಾಸಿಗಳ ಮನೆಗಳಿಗೆ ನೀರು ನುಗ್ಗುತ್ತದೆ. ಈ ವರ್ಷ ಭಾರೀ ಮಳೆಯಾಗಿದ್ದರೂ ಇಷ್ಟೊಂದು ಅನಾಹುತ ಸೃಷ್ಟಿಯಾಗಿರಲಿಲ್ಲ. ಆದ್ರೆ, ರಾತ್ರಿ ಸುರಿದ ಭಾರೀ ಮಳೆಗೆ ನೀರು ಮನೆಯೊಳಗೆ ನುಗ್ಗಿದ್ದು, ಮಕ್ಕಳು, ಹಿರಿಯರು ತೊಂದರೆ ಅನುಭವಿಸಿದರು. ವಿಷಯ ತಿಳಿದ ತಕ್ಷಣ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು, ಹರಿಹರ ನಗರದ ಬೆಂಕಿನಗರ, ಕಾಳಿದಾಸ ನಗರ , ಜೈ ಭೀಮ್ ನಗರ ಹಾಗೂ ಆಶ್ರಯ ಕಾಲೋನಿಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜನರ ತೊಂದರೆಯಾಗದಂತೆ ಎಚ್ಚರ ವಹಿಸಿ. ಕೂಡಲೇ ಅವರಿಗೆ ಬೇಕಿರುವ ತುರ್ತು ಅಗತ್ಯಗಳನ್ನು ಪೂರೈಸುವಂತೆ ಹೇಳಿದರು. ಜಿಲ್ಲೆಯ ವಿವಿಧೆಡೆಯೂ ಮಳೆಯಾಗಿದ್ದು, ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದೆ.